ಅಕ್ರಮ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರು ರಾಜ್ಯ ಗುಪ್ತಚರ ಬ್ಯೂರೋದ ಮಾಜಿ ಮುಖ್ಯಸ್ಥ ಟಿ ಪ್ರಭಾಕರ್ ರಾವ್ ಅವರನ್ನು ಪ್ರಮುಖ ಆರೋಪಿ ಎಂದು ಗುರುತಿಸಿದ್ದು, ಪರಾರಿಯಾಗಿರುವ ರಾವ್ ಹೆಸರಿನಲ್ಲಿ ಲುಕ್ಔಟ್ ನೋಟಿಸ್ ಹೊರಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರ ಆಡಳಿತಾವಧಿಯಲ್ಲಿ ವಿಶೇಷ ಗುಪ್ತಚರ ಬ್ಯೂರೋ ಮುಖ್ಯಸ್ಥರಾಗಿದ್ದ ರಾವ್ ಅವರು ಅಮೆರಿಕಕ್ಕೆ ಪರಾರಿಯಾಗಿದ್ದಾರೆಂದು ವರದಿಯಾಗಿದೆ.
ಮಾಜಿ ಗುಪ್ತಚರ ಮುಖ್ಯಸ್ಥರು ಹಿಂದಿನ ಆಡಳಿತದ ಅವಧಿಯಲ್ಲಿ ಫೋನ್ಗಳನ್ನು ಅಕ್ರಮವಾಗಿ ಟ್ಯಾಪ್ ಮಾಡಲು ಆದೇಶಿಸಿದ್ದರೆಂದು ಆರೋಪಿಸಲಾಗಿದೆ. ರಾವ್ ಅವರಲ್ಲದೆ, ಆಯುಕ್ತರ ಕಾರ್ಯಪಡೆಯ (ಹೈದರಾಬಾದ್ ಪೊಲೀಸರ ಒಂದು ವಿಭಾಗ) ಆಗಿನ ಉಪ ಪೊಲೀಸ್ ಆಯುಕ್ತ ಪಿ ರಾಧಾಕೃಷ್ಣ ಮತ್ತು ತೆಲುಗು ಟಿವಿ ಚಾನೆಲ್ನ ಹಿರಿಯ ಕಾರ್ಯ ನಿರ್ವಾಹಕರ ವಿರುದ್ಧವೂ ಪೊಲೀಸರು ನೋಟಿಸ್ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಕೆಲವು ಕಂಪ್ಯೂಟರ್ ವ್ಯವಸ್ಥೆಗಳು ಮತ್ತು ಅಧಿಕೃತ ಡೇಟಾವನ್ನು ನಾಶಪಡಿಸಿದ ಆರೋಪದ ಮೇಲೆ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೈದರಾಬಾದ್ ಪೊಲೀಸರು ಶನಿವಾರ ಬಂಧಿಸಿದ್ದರು.
ಈ ಸುದ್ದಿ ಓದಿದ್ದೀರಾ? ಹೈದರಾಬಾದ್ | ಫೋನ್ ಕದ್ದಾಲಿಕೆ, ಡೇಟಾ ನಾಶ ಪ್ರಕರಣ; ಮತ್ತಿಬ್ಬರು ಪೊಲೀಸರ ಬಂಧನ
ಈ ಹಿಂದೆ ವಿಶೇಷ ಗುಪ್ತಚರ ಬ್ಯೂರೋ (ಎಸ್ಐಬಿ) ಮತ್ತು ಗುಪ್ತಚರ ಇಲಾಖೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕೆಲಸ ಮಾಡಿದ್ದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತ ತಿರುಪತ್ತಣ್ಣ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್ ಭುಜಂಗ ರಾವ್ ಅವರನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





