“ನಾನು ಕೊಟ್ಟ ಆಹಾರವನ್ನು ಸೇವಿಸದೆ ಎಸೆದ ಘಟನೆಯಿಂದ ಆರ್ಎಸ್ಎಸ್ ಬಗ್ಗೆ ಭ್ರಮನಿರಸನ ಹೆಚ್ಚಾಯಿತು ಮತ್ತು ಆರ್ಎಸ್ಎಸ್ನ ಬ್ರಾಹ್ಮಣೀಯ ಸ್ವರೂಪ ಬಹಿರಂಗವಾಯಿತು. ಅದರ ನಂತರ, ನಾನು ಅಂಬೇಡ್ಕರ್ ಅವರ ಬರಹಗಳ ಕಡೆಗೆ ಹೊರಳಿದೆ" ಎನ್ನುತ್ತಾರೆ ಮೇಘವಂಶಿ.
‘ಹಿಂದುತ್ವ ಮತ್ತು ಜಾತಿ ವ್ಯವಸ್ಥೆ ಒಂದೇ ನಾಣ್ಯದ ಎರಡು ಮುಖಗಳು. ಸಾಮಾಜಿಕ ಸಾಮರಸ್ಯ ಕಾಪಾಡಬೇಕು ಎಂದು ಆರ್ಎಸ್ಎಸ್ ನಾಯಕರು ಮಾತನಾಡುವುದು ಕೇವಲ ಸಾಂಕೇತಿಕವಷ್ಟೇ’ ಎನ್ನುತ್ತಾರೆ ದಲಿತ ಮುಖಂಡ, ಆರ್ಎಸ್ಎಸ್ನಲ್ಲಿ ಹಲವು ವರ್ಷ ಕಾಲಾಳಾಗಿ ದುಡಿದ ಭನ್ವರ್ ಮೇಘವಂಶಿ.
ಒಂದು ಕಾಲದಲ್ಲಿ ನಿಷ್ಠಾವಂತ ಸ್ವಯಂಸೇವಕರಾಗಿದ್ದವರು ಮೇಘವಂಶಿ, ಜಾತಿ ತಾರತಮ್ಯವನ್ನು ಎದುರಿಸಿದ ನಂತರ ಆರ್ಎಸ್ಎಸ್ ತೊರೆದರು. ‘ಐ ಕುಡ್ ನಾಟ್ ಬಿ ಹಿಂದೂ’ (ನಾನು ಹಿಂದೂ ಆಗಲು ಸಾಧ್ಯವಿಲ್ಲ) ಎಂಬ ಕೃತಿ ಬರೆದು ಆರ್ಎಸ್ಎಸ್ನಲ್ಲಿ ಆಳವಾಗಿ ಬೇರೂರಿರುವ ಬ್ರಾಹ್ಮಣೀಯ ವ್ಯವಸ್ಥೆಯನ್ನು ಬಟಾಬಯಲು ಮಾಡಿದರು.
ಸಾಮಾಜಿಕ ಕಾರ್ಯಕರ್ತರಾಗಿ, ಪತ್ರಕರ್ತನಾಗಿ, ಬರಹಗಾರರಾಗಿ ಗುರುತಿಸಿಕೊಂಡಿರುವ ಮೇಘವಂಶಿ, ರಾಜಸ್ಥಾನದವರು. ಹದಿಹರೆಯದಲ್ಲೇ ಆರ್ಎಸ್ಎಸ್ ಸೇರಿದವರು. ಕೆಲವೊಂದು ಜವಾಬ್ದಾರಿಗಳನ್ನು ನಿಭಾಯಿಸಿದರು. ಬಾಬರಿ ಮಸೀದಿ ಧ್ವಂಸದ ಸಮಯದಲ್ಲಿ, ಕರಸೇವಕರನ್ನು ಅಯೋಧ್ಯೆಗೆ ಕರೆತರಲು ಕೆಲಸ ಮಾಡಿದ್ದರು. ಆ ವೇಳೆ ಬಂಧನಕ್ಕೊಳಗಾಗಿದ್ದರು. ಅವರಿಗಾದ ಜಾತಿ ಅಸಮಾನತೆಯ ನೋವು ಮಹತ್ವದ ತಿರುವಾಗಿ ಪರಿಣಮಿಸಿತು. ಆರ್ಎಸ್ಎಸ್ನ ಜಾತಿವಾದಿ ವಾಸ್ತವಗಳನ್ನು ಪ್ರಶ್ನಿಸಿ, ಅಂತಿಮವಾಗಿ ಸಂಘಟನೆಯನ್ನು ತೊರೆದರು.
ತಳಸಮುದಾಯಗಳ ದನಿ ಗಟ್ಟಿ ಮಾಡಲು ‘ಡೈಮಂಡ್ ಇಂಡಿಯಾ’, ‘ಖಬರ್ಕೋಶ್’ ಮತ್ತು ‘ಶೂನ್ಯಾಕಲ್’ನಂತಹ ವೇದಿಕೆಗಳನ್ನು ಸ್ಥಾಪಿಸಿದರು. ಇವರು ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆಯೊಂದಿಗೆ ಕೆಲಸ ಮಾಡಿದ್ದಾರೆ. ಆರ್ಟಿಐ, ಎನ್ಆರ್ಇಜಿಎ ಮತ್ತು ಆಹಾರ ಭದ್ರತಾ ಕಾಯ್ದೆಯಂತಹ ಕಾನೂನುಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಪುಸ್ತಕ (ಹಿಂದಿ ಮೂಲ: ‘ಮೈ ಏಕ್ ಕರ್ ಸೇವಕ್ ಥಾ’) ಬಹುಭಾಷೆಗಳಿಗೆ ಅನುವಾದಗೊಂಡಿದೆ. ಮೇಘವಂಶಿ ಅವರು ತಮ್ಮ ಪಯಣದ ಬಗ್ಗೆ ಕೆಲವು ದಿನಗಳ ಹಿಂದೆ ‘ಔಟ್ಲುಕ್’ನೊಂದಿಗೆ ಮಾತನಾಡಿದ್ದಾರೆ. ಅವರು ಹಂಚಿಕೊಂಡಿರುವ ಸಂಗತಿಗಳು, ಸಂಘಪರಿವಾರದ ನಿಜಮುಖವನ್ನು ಅನಾವರಣ ಮಾಡಿವೆ.

“ಆರ್ಎಸ್ಎಸ್ನೊಳಗೆ ಇರುವ ಜಾತಿ ಆಧಾರಿತ ರಚನೆಯ ಬಗ್ಗೆ ನನ್ನ ಕೃತಿಯಲ್ಲಿ ವಿವರಿಸಿದೆ. ಜಾತಿಯನ್ನು ಮೀರಿ ಎಲ್ಲಾ ಹಿಂದೂಗಳನ್ನು ಒಂದುಗೂಡಿಸುವುದಾಗಿ ಆರ್ಎಸ್ಎಸ್ ಹೇಳಿಕೊಂಡರೂ ನನ್ನ ಅನುಭವವು ಸಂಪೂರ್ಣವಾಗಿ ವಿಭಿನ್ನವಾದ ಸತ್ಯಗಳನ್ನು ಅನಾವರಣ ಮಾಡಿತು. ದಲಿತರು ಕಾಲಾಳುಗಳಾಗಿ ಮಾತ್ರ ಇರಬೇಕು ಎಂಬುದು ಅವರ ಧೋರಣೆ. ದಲಿತರು ಯಾವಾಗ ತಮ್ಮ ಅಸ್ಮಿತೆ ಮತ್ತು ಘನತೆಯನ್ನು ಗುರುತಿಸಿಕೊಳ್ಳುವುದಿಲ್ಲವೋ ಆಗ ಮೇಲ್ಜಾತಿಗಳ ಹಿತಾಸಕ್ತಿಗಾಗಿ ದಲಿತರನ್ನು ಬಳಸಲಾಗುತ್ತದೆ ಎಂಬುದನ್ನು ನಾನು ಕಂಡುಕೊಂಡೆ. ದಲಿತ ಸ್ವಯಂಸೇವಕರು ಮೊದಲು ಶಾಖೆಗಳಿಗೆ ಸೇರಿದಾಗ, ಮೇಲ್ನೋಟಕ್ಕೆ ಗೌರವ ಕೊಡಲಾರಂಭಿಸುತ್ತಾರೆ. ಆದರೆ ಬ್ರಾಹ್ಮಣೀಯ ಶ್ರೇಣಿ ವ್ಯವಸ್ಥೆ ಮುಂದುವರಿಯುತ್ತದೆ. ದಲಿತರನ್ನು ವ್ಯವಸ್ಥಿತವಾಗಿ ನಾಯಕತ್ವದ ಸ್ಥಾನಗಳಿಂದ ದೂರವಿಡಲಾಗುತ್ತದೆ. ನಾನು ವೈಯಕ್ತಿಕವಾಗಿ ಹಲವಾರು ಬಾರಿ ಜಾತಿ ತಾರತಮ್ಯವನ್ನು ಎದುರಿಸಿದೆ, ಆದರೆ 1991ರಲ್ಲಿ ತಿರುವು ಸಿಕ್ಕಿತು” ಎನ್ನುತ್ತಾರೆ ಮೇಘವಂಶಿ.
ಇದನ್ನೂ ಓದಿರಿ: ಪಥಸಂಚಲನ ಪಾಲಿಟಿಕ್ಸ್ | ಕಲಬುರಗಿಯಲ್ಲಿ ನಡೆಯುವುದೇ RSS-DSS ನೇರ ಹಣಾಹಣಿ?
ಆರ್ಎಸ್ಎಸ್ ನಾಯಕರಿಂದಾದ ಅಸ್ಪೃಶ್ಯತೆ ಆಚರಣೆಯು ಅವರನ್ನು ವಿಚಲಿತರನ್ನಾಗಿಸಿತು. “ನನ್ನ ಹಳ್ಳಿಯಾದ ಭಿಲ್ವಾರಾ ಜಿಲ್ಲೆಯ ಸಿಧಿಯದಲ್ಲಿ, ನನ್ನ ಮನೆಯಲ್ಲಿ ತಯಾರಿಸಿದ ಆಹಾರವನ್ನು ತಿನ್ನಲು ಹಿರಿಯ ಆರ್ಎಸ್ಎಸ್ ಸದಸ್ಯರು ನಿರಾಕರಿಸಿದರು. ಅವರು ಅದನ್ನು ಪ್ಯಾಕ್ ಮಾಡಿ ಮತ್ತೊಂದು ಹಳ್ಳಿಗೆ ಕೊಂಡೊಯ್ದರು. ಆದರೆ ಅದನ್ನು ರಸ್ತೆಬದಿಯಲ್ಲಿ ಎಸೆದರು. ನಾನು ದಲಿತನಾಗಿದ್ದರಿಂದ ಹೀಗೆ ಮಾಡಿದರು” ಎನ್ನುವ ಮೇಘವಂಶಿ, “ನಾನು ತಕ್ಷಣ ಎಲ್ಲಾ ಹಂತದ ನಾಯಕರಿಗೂ ದೂರುಗಳನ್ನು ನೀಡಿದೆ. ನಾಗ್ಪುರದಲ್ಲಿದ್ದ ಅಂದಿನ ಸರಸಂಘಚಾಲಕರಿಗೂ ದೂರು ಬರೆದೆ. ಯಾರೂ ಪ್ರತಿಕ್ರಿಯಿಸುವ ಸೌಜನ್ಯ ತೋರಿಸಲಿಲ್ಲ. ನನ್ನ ನೋವನ್ನು ಕೇಳಲಿಲ್ಲ. ಕೇವಲ ಮೌನವಹಿಸಿದರು. ಇದು ಸಂಘಟನೆಯ ಬೂಟಾಟಿಕೆಯನ್ನು ಬಯಲು ಮಾಡಿತು. ಆಗ ನಾನು ಆರ್ಎಸ್ಎಸ್ ತೊರೆಯಲು ನಿರ್ಧರಿಸಿದೆ” ಎಂದು ತಿಳಿಸಿದ್ದಾರೆ.
“ನಾನು ಕೊಟ್ಟ ಆಹಾರವನ್ನು ಸೇವಿಸದೆ ಎಸೆದ ಘಟನೆಯಿಂದ ಆರ್ಎಸ್ಎಸ್ ಬಗ್ಗೆ ಭ್ರಮನಿರಸನ ಹೆಚ್ಚಾಯಿತು ಮತ್ತು ಆರ್ಎಸ್ಎಸ್ನ ಬ್ರಾಹ್ಮಣೀಯ ಸ್ವರೂಪ ಬಹಿರಂಗವಾಯಿತು. ಅದರ ನಂತರ, ನಾನು ಅಂಬೇಡ್ಕರ್ ಅವರ ಬರಹಗಳ ಕಡೆಗೆ ಹೊರಳಿದೆ. ಅವರ ವಿಚಾರಗಳನ್ನು ಸ್ವೀಕರಿಸಿದೆ ಮತ್ತು ದಲಿತ ಚಳುವಳಿಯಲ್ಲಿ ಕಾರ್ಯಕರ್ತನಾದೆ. ಇಂದಿಗೂ, ನನ್ನ ಬರವಣಿಗೆ ಮತ್ತು ಕ್ರಿಯಾಶೀಲತೆಯ ಮೂಲಕ, ನಾನು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಲೇ ಇದ್ದೇನೆ. ಸಂಘಟನೆಯಲ್ಲಿದ್ದ ಸಮಯದಲ್ಲಿ ನಾನು ಅನುಭವಿಸಿದ ಜಾತಿ ತಾರತಮ್ಯವು ಹಿಂದುತ್ವದ ಬೂಟಾಟಿಕೆಯನ್ನು ಗುರುತಿಸಲು ನನಗೆ ಸಹಾಯ ಮಾಡಿತು” ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮೇಘವಂಶಿಯವರೇ ಹೇಳುವ ಪ್ರಕಾರ ಹದಿಹರೆಯದಲ್ಲಿ ಆರ್ಎಸ್ಎಸ್ ಸಂಪರ್ಕ ಅವರಿಗಾಯಿತು. ಸಾರ್ವಜನಿಕ ಸ್ಥಳಗಳಲ್ಲಿ ಕ್ರೀಡೆ, ದೈಹಿಕ ತರಬೇತಿ ಮತ್ತು ರಾಷ್ಟ್ರೀಯತಾವಾದಿ ಘೋಷಣೆಗಳ ಹೆಸರಿನಲ್ಲಿ ಆರ್ಎಸ್ಎಸ್ ಅವರನ್ನು ಸೆಳೆಯಿತು. ಆರ್ಎಸ್ಎಸ್ ಚಟುವಟಿಕೆಗಳಿಗೆ ಮಾರುಹೋಗಿ ಸಂಘಕ್ಕೆ ಸೇರಿಕೊಂಡರು. ಅವರಿಗೆ ಸತ್ಯ ಅರಿವಾಗಲು ಬಹಳ ಕಾಲ ಬೇಕಾಯಿತು.
ಆರ್ಎಸ್ಎಸ್ ತನ್ನ ತಂತ್ರಗಳನ್ನು ಬದಲಿಸಿಕೊಂಡು ಯುವಜನರನ್ನು ಪ್ರಭಾವಿಸುತ್ತಿರುವ ರೀತಿಯ ಕುರಿತು ಮೇಘವಂಶಿ ಆತಂಕ ವ್ಯಕ್ತಪಡಿಸಿದ್ದಾರೆ. “ಸಾಮಾಜಿಕ ಮಾಧ್ಯಮದ ಈ ಯುಗದಲ್ಲಿ, ಆರ್ಎಸ್ಎಸ್ ‘ಆನ್ಲೈನ್ ಶಾಖೆ’ಗಳನ್ನು ಸಹ ನಡೆಸುತ್ತದೆ. ಹದಿಹರೆಯದವರನ್ನು, ಯುವಕರನ್ನು ಆಕರ್ಷಿಸಲು ಡಿಜಿಟಲ್ ಪ್ಲಾಟ್ಫಾರ್ಮ್ಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಕಿರುವಿಡಿಯೊಗಳು, ಮೀಮ್ಗಳು ಮತ್ತು ಕ್ಯಾಂಪೇನ್ಗಳ ಮೂಲಕ ಹಿಂದುತ್ವವನ್ನು ಪ್ರಚಾರ ಮಾಡುತ್ತಿದ್ದಾರೆ. ‘ಹಿಂದೂ ಏಕತೆ’ಯ ಹೆಸರಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಮೇಲ್ಜಾತಿ ಹಾಗೂ ದಲಿತ-ಒಬಿಸಿ ಯುವಕರನ್ನು ಪ್ರಚೋದಿಸುತ್ತಾರೆ. ನಾನು ಸಂಘದಲ್ಲಿದ್ದ ಕಾಲಕ್ಕೂ ಈಗಿನ ಕಾಲಕ್ಕೂ ಹೋಲಿಸಿದರೆ, ಇಂದು ಹೆಚ್ಚು ಬಲಿಷ್ಠವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಏಕೆಂದರೆ ಜನರ ಮನಸ್ಸನ್ನು ಪ್ರವೇಶಿಸಲು ಡಿಜಿಟಲ್ ಮಾಧ್ಯಮ ಅವರಿಗೆ ವೇಗವನ್ನು ತಂದುಕೊಟ್ಟಿದೆ. ಆದರೆ ಈ ಬದಲಾವಣೆ ಏನಿದೆ, ಅದು ನೋಡಲು ಚೆಂದವಿದೆ. ಆದರೆ ಆಳದಲ್ಲಿ ಜಾತಿ ಅಡಗಿದೆ. ಸಾಮಾಜಿಕ ನ್ಯಾಯದ ಬೇಡಿಕೆಗಳನ್ನು ಬದಿಗೊತ್ತಿ, ಹಿಂದೂ ರಾಷ್ಟ್ರದ ಉಮೇದಿಗೆ ಪ್ರೇರೇಪಿಸುತ್ತಾರೆ” ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿರಿ: ಪ್ರಿಯಾಂಕ್ ಪರ ಕೆಬಿಜಿ ಪೋಸ್ಟ್: ಬಲಪಂಥೀಯ ಟೂಲ್ಕಿಟ್ ಪ್ರತಿಕ್ರಿಯೆ ಏನಿತ್ತು? – ತನಿಖಾ ವರದಿ
“ಆರ್ಎಸ್ಎಸ್ನಂತಹ ಸಂಘಟನೆಗಳು ‘ಸಾಮರಸ್ಯ’ವನ್ನು ಉತ್ತೇಜಿಸುವಂತೆ ನಟಿಸುತ್ತವೆ, ಆದರೆ ವಾಸ್ತವದಲ್ಲಿ ಅವರು ಜಾತಿ ಶ್ರೇಣೀಕರಣವನ್ನು ಕಾಪಾಡುತ್ತಾರೆ. ದಲಿತರ ವಿಮೋಚನೆಗಾಗಿ ಹಿಂದುತ್ವದೊಳಗೆ ಯಾವುದೇ ದಾರಿಗಳಿಲ್ಲ. ದಲಿತರು ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ತಮ್ಮನ್ನು ತಾವು ಸಂಘಟಿಸಿಕೊಂಡು ತಮ್ಮದೇ ಆದ ವಿಮೋಚನೆಗಾಗಿ ಹೋರಾಡಿದಾಗ ಮಾತ್ರ ನಿಜವಾದ ಬದಲಾವಣೆ ಬರುತ್ತದೆ” ಎಂದು ತಿಳಿಸಿದ್ದಾರೆ.
“ನೆನಪುಗಳು ಮತ್ತು ಕಥೆಗಳನ್ನು ದಾಖಲಿಸುವುದು ಜಾತಿಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವೈಯಕ್ತಿಕ ಅನುಭವಗಳು ರಾಜಕೀಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ. ಅದು ಮಾಜಿ ಆರ್ಎಸ್ಎಸ್ ಪ್ರಚಾರಕ ಸುಧೀಶ್ ಮಿನ್ನಿಯವರ ಆತ್ಮಚರಿತ್ರೆಯಾಗಿರಲಿ, ಮುಲ್ಚಂದ್ ರಾಣಾ (ಒಂದು ಕಾಲದಲ್ಲಿ ಸಾಮರಸ್ಯ ಮಂಚ್ನೊಂದಿಗೆ ಸಂಬಂಧ ಹೊಂದಿದ್ದ ಗುಜರಾತ್ ಸಾರ್ವಜನಿಕ ಸೇವಾ ಆಯೋಗದ ಮಾಜಿ ಸದಸ್ಯ) ಅವರ ಬರಹಗಳಾಗಲಿ ಅಥವಾ ನನ್ನ ಸ್ವಂತ ಪುಸ್ತಕವಾಗಲಿ, ಎಲ್ಲವೂ ಆರ್ಎಸ್ಎಸ್ನಲ್ಲಿ ಆಳವಾಗಿ ಹುದುಗಿರುವ ಜಾತಿವಾದವನ್ನು ಬಹಿರಂಗಪಡಿಸುತ್ತವೆ” ಎಂದು ವಿವರಿಸಿದ್ದಾರೆ.
“ಹಿಂದೂ ರಾಷ್ಟ್ರೀಯತಾವಾದಿ ಸಂಘಟನೆಗಳಲ್ಲಿ ಜಾತಿವಾದ ಆಳವಾಗಿ ಬೇರೂರಿದೆ. ಅವರ ಉನ್ನತ ನಾಯಕತ್ವವು ಜಾತಿವಾದವನ್ನು ಸಾರ್ವಜನಿಕವಾಗಿ ಖಂಡಿಸಬಹುದು. ಮೀಸಲಾತಿಗೆ ಬೆಂಬಲ ವ್ಯಕ್ತಪಡಿಸಬಹುದು. ಆದರೆ ಇದನ್ನೆಲ್ಲ ರಾಜಕೀಯಕ್ಕಾಗಿ ಮಾತ್ರ ಮಾಡುತ್ತಾರೆ. ಅವರ ತಳಮಟ್ಟದ ಕಾರ್ಯಕರ್ತರು ಅದೇ ದಲಿತ ವಿರೋಧಿ ಮತ್ತು ಮೀಸಲಾತಿ ವಿರೋಧಿ ಮನಸ್ಥಿತಿಯನ್ನು ಹೊಂದಿದ್ದಾರೆ. ಉನ್ನತ ಮಟ್ಟದ ಆರು ಜನ ಲೀಡರ್ಗಳ ಪಟ್ಟಿಗೆ ವಿ.ಭಾಗಾಯ ಅವರನ್ನು 2014ರಲ್ಲಿ ಸೇರಿಸಲಾಯಿತು. ಹೀಗೆ ಸೇರಲ್ಪಟ್ಟ ಮೊದಲ ಒಬಿಸಿ ಅವರಾಗಿದ್ದರು. ಅಂಬೇಡ್ಕರ್ ಅವರ ಫೋಟೋವನ್ನು ಕಚೇರಿಗಳಲ್ಲಿ ಇಟ್ಟುಕೊಳ್ಳುವಂತೆ 2015ರಲ್ಲಿ ಆರ್ಎಸ್ಎಸ್ ಸೂಚಿಸಿತು. ಈ ಕ್ರಮಗಳು ರಾಜಕೀಯ ಪ್ರೇರಿತವಾಗಿದ್ದವು ಮತ್ತು ಸೈದ್ಧಾಂತಿಕವಾಗಿರಲಿಲ್ಲ. ಏಕೆಂದರೆ ಅವರು ದಲಿತ, ಒಬಿಸಿ ಮತ್ತು ಆದಿವಾಸಿ ಮತಗಳನ್ನು ಗುರಿಯಾಗಿಟ್ಟುಕೊಂಡಿದ್ದರು. ಆದರೆ ಮುಂಚೂಣಿಯಲ್ಲಿ ಯಾವಾಗಲೂ ಮೇಲ್ಜಾತಿಯವರೇ ಇರುತ್ತಾರೆ” ಎಂದು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಇದನ್ನೂ ಓದಿರಿ: RSS ಸಮಾನತೆಯ ಶತ್ರು; ಯಾಕೆಂದರೆ…
“ಸಾಹಿತ್ಯ, ಸಾಮಾಜಿಕ ಮಾಧ್ಯಮ, ಜನಸಾಮಾನ್ಯರ ಕ್ರಿಯಾಶೀಲತೆ ಮತ್ತು ಹೊಸ ರೀತಿಯ ಚಳವಳಿಗಳ ಮೂಲಕ ದಲಿತ ಸಮುದಾಯದೊಳಗೆ ಹೊಸ ಪ್ರಜ್ಞೆ ಹೊರಹೊಮ್ಮುತ್ತಿದೆ. ಇಂದಿನ ದಲಿತ ಯುವಕರು ಬೀದಿಗಳಲ್ಲಿ ಅಥವಾ ಆನ್ಲೈನ್ನಲ್ಲಿ ಜಾತಿವಾದವನ್ನು ಕಟುವಾಗಿ ಟೀಕಿಸುತ್ತಿದ್ದಾರೆ. ಕಲೆ ಮತ್ತು ಬರವಣಿಗೆಯ ಮೂಲಕ ತಮ್ಮ ಕಥೆಗಳನ್ನು ಹೇಳುತ್ತಿದ್ದಾರೆ. ಸಾಮೂಹಿಕ ಕ್ರಿಯೆಯ ಮೂಲಕ ಸಾಮಾಜಿಕ ಪರಿವರ್ತನೆಗೆ ಒತ್ತಾಯಿಸುತ್ತಿದ್ದಾರೆ. ಅವರೆಲ್ಲರೂ ಡಾ. ಅಂಬೇಡ್ಕರ್ ಅವರ ವಿಚಾರಗಳಿಂದ ಪ್ರೇರಿತರಾಗಿ ಒಂದಾಗುತ್ತಿದ್ದಾರೆ. ಭಾರತೀಯ ಸಮಾಜವನ್ನು ಜಾತಿ ಮುಕ್ತಗೊಳಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸುತ್ತಾರೆ” ಎಂಬುದು ಮೇಘವಂಶಿಯವರ ಬಲವಾದ ನಂಬಿಕೆ.
“ಜಾತಿ ವ್ಯವಸ್ಥೆಯ ವಿರುದ್ಧ ಆರ್ಎಸ್ಎಸ್ ಸಾಂದರ್ಭಿಕವಾಗಿ ಮಾತನಾಡುವುದು, ವರ್ಷಕ್ಕೊಮ್ಮೆ ಹಾವು ತನ್ನ ಪೊರೆಯನ್ನು ಕಳಚಿದಂತೆ ಅಷ್ಟೇ. ಆದರೆ ಅದರ ಮೂಲ ಸಿದ್ಧಾಂತ ಹಾಗೆಯೇ ಇರುತ್ತದೆ” ಎಂಬ ರೂಪಕವನ್ನು ನೀಡುವ ಮೇಘವಂಶಿ, “ಹಿಂದುತ್ವವು ಜಾತಿಯಿಂದ ಬೇರ್ಪಡಿಸಲಾಗದು. ಶ್ರೇಣೀಕೃತ ಮತ್ತು ಅಸಮಾನತೆ ಇಲ್ಲದೆ ಹಿಂದೂ ಧರ್ಮ ಅಸ್ತಿತ್ವದಲ್ಲಿರಲು ಸಾಧ್ಯವೇ? ಅವರು ಜಾತಿಯನ್ನು ಪವಿತ್ರವೆನ್ನುವ ತಮ್ಮದೇ ಧರ್ಮಗ್ರಂಥಗಳನ್ನು ಎಂದಾದರೂ ಪ್ರಶ್ನಿಸುತ್ತಾರೆಯೇ? ಅವರು ಅಂತರ್ಜಾತಿ ವಿವಾಹಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತಾರೆಯೇ? ಉತ್ತರ ಇಲ್ಲ. ಬದಲಾಗಿ, ಅವರು ಸಮಾನತೆಯ ಸಾಂವಿಧಾನಿಕ ಭರವಸೆಯನ್ನು ಸಾಮರಸ್ಯದ ಸಿಹಿ ವಿಷವಾಗಿ ಪರಿವರ್ತಿಸುತ್ತಾರೆ. ದಲಿತರನ್ನು ತಮ್ಮ ಮತಬ್ಯಾಂಕ್ ಆಗಿ ಪರಿವರ್ತಿಸಲು ಭಾಷೆಯನ್ನು ಕುಶಲತೆಯಿಂದ ಬಳಸುತ್ತಾರೆ. ಆರ್ಎಸ್ಎಸ್ ಸಂಪೂರ್ಣವಾಗಿ ಬ್ರಾಹ್ಮಣ ಸಂಘಟನೆಯಾಗಿ ಉಳಿದಿದೆ. ಇದುವರೆಗಿನ ಅದರ 7 ಮುಖ್ಯಸ್ಥರಲ್ಲಿ, 6 (ರಜ್ಜು ಭೈಯಾ ಹೊರತುಪಡಿಸಿ) ಜನ ಬ್ರಾಹ್ಮಣರು. ಅವರ ಸಿದ್ಧಾಂತವು ಜಾತಿ ಶ್ರೇಷ್ಠತೆಯ ಮೇಲೆ ನಿಂತಿದೆ. ಆದ್ದರಿಂದ, ಆರ್ಎಸ್ಎಸ್ನ ಒಳಗಿನಿಂದ ಜಾತಿ ವಿನಾಶ ಅಸಾಧ್ಯ. ಅವರ ಹಿಂದೂ ರಾಷ್ಟ್ರದ ಕಲ್ಪನೆಯು ವರ್ಣ ವ್ಯವಸ್ಥೆಯನ್ನು ಅವಲಂಬಿಸಿದೆ. ಅದರ ವಿರುದ್ಧದ ಯುದ್ಧವು ಹೊರಗಿನಿಂದ ಬರಬೇಕು ಮತ್ತು ಅಂಬೇಡ್ಕರ್ ಚಳವಳಿಯು ಸಂಘಪರಿವಾರದ ವಿರುದ್ಧದ ಶಕ್ತಿಶಾಲಿ ಮಾರ್ಗ” ಎಂದು ಅಭಿಪ್ರಾಯಪಟ್ಟಿದ್ದಾರೆ.
(ಮಾಹಿತಿ ಕೃಪೆ: ಔಟ್ ಲುಕ್)





