ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕೃಪಾಪೋಷಿತ ಅದಾನಿ ಸಮೂಹ ಕಂಪನಿ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆ ತೆತ್ತು ಅದರ ಹೊರೆಯನ್ನು ವಿದ್ಯುತ್ ಬಳಸುವ ಭಾರತೀಯರ ಮೇಲೆ ಹಾಕಿದೆ ಎಂದು ಬ್ರಿಟಿಷ್ ದೈನಿಕ ‘ಫೈನಾನ್ಶಿಯಲ್ ಟೈಮ್ಸ್’ ವರದಿ ಮಾಡಿದೆ.
ದೇಶದ ಅತಿದೊಡ್ಡ ಖಾಸಗಿ ಕಲ್ಲಿದ್ದಲು ಆಮದುದಾರ ಕಂಪನಿಯಾದ ಅದಾನಿ ಸಮೂಹವು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಶತಕೋಟಿ ಡಾಲರ್ ಮೌಲ್ಯದ ಕಲ್ಲಿದ್ದಲನ್ನು ಆಮದು ಮಾಡಿಕೊಂಡ ಕಾರಣ ಲಕ್ಷಾಂತರ ಭಾರತೀಯ ಗ್ರಾಹಕರು ವಿದ್ಯುತ್ಗಾಗಿ ಹೆಚ್ಚು ಹಣ ಪಾವತಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ 5 ಬಿಲಿಯನ್ ಡಾಲರ್ ಮೌಲ್ಯದ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಅದಾನಿ, ತೈವಾನ್, ದುಬೈ ಮತ್ತು ಸಿಂಗಾಪುರದಲ್ಲಿನ ಮಧ್ಯವರ್ತಿ ಕಂಪನಿಗಳನ್ನು ಬಳಸಿಕೊಂಡಿರುವುದನ್ನು ದಾಖಲೆಗಳು ತೋರಿಸುತ್ತಿದೆ. ಈ ಕಂಪನಿಗಳಲ್ಲಿ ಒಂದು ಅದಾನಿ ಕಂಪನಿಗಳಲ್ಲಿ ರಹಸ್ಯ ಷೇರುದಾರ ಎಂದು ತಾನು ಗುರುತಿಸಿರುವ ತೈವಾನ್ ಉದ್ಯಮಿಯೊಬ್ಬರಿಗೆ ಸೇರಿದ್ದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2019 ಮತ್ತು 2021 ರ ನಡುವೆ 32 ತಿಂಗಳುಗಳಲ್ಲಿ ಅದಾನಿ ಕಂಪನಿಯು ಇಂಡೋನೇಷ್ಯಾದಿಂದ ಭಾರತಕ್ಕೆ 30 ಬಾರಿ ಕಲ್ಲಿದ್ದಲು ತರಿಸಿಕೊಂಡಿರುವುದು ಪತ್ತೆಯಾಗಿದ್ದು, ಪ್ರತಿ ಸಲವೂ ಆಮದು ದಾಖಲೆಗಳಲ್ಲಿನ ಬೆಲೆಗಳು ರಫ್ತು ಘೋಷಣೆಗಳಿಗಿಂತ ತುಂಬಾ ಹೆಚ್ಚಾಗಿವೆ ಮತ್ತು ಸಾಗಣೆ ಮೌಲ್ಯ 70 ಮಿಲಿಯನ್ ಡಾಲರ್ ಅನ್ನೂ ಮೀರಿ ಹೆಚ್ಚಿದೆ. ಅಲ್ಲದೆ ಈ ವಹಿವಾಟುಗಳ ನ್ಯಾಯಸಮ್ಮತತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ತಿಳಿಸಲಾಗಿದೆ.
ಕಸ್ಟಮ್ಸ್ ದಾಖಲೆಗಳ ಸಮಗ್ರ ಪರಿಶೀಲನೆ ಮೂಲಕ ಈ ವಿಚಾರವನ್ನು ಖಚಿತಪಡಿಸಿರುವ ವರದಿಯು, ಲಕ್ಷಾಂತರ ಭಾರತೀಯ ಗ್ರಾಹಕರು ವಿದ್ಯುತ್ಗೆ ಹೆಚ್ಚು ಪಾವತಿಸುವಂತಾಗಿರುವುದಕ್ಕೆ ಅದಾನಿ ಕಂಪನಿಯು ಕೃತಕವಾಗಿ ಇಂಧನ ವೆಚ್ಚವನ್ನು ಹೆಚ್ಚಿಸಿರುವುದೇ ಕಾರಣ ಎಂಬ ಬಹುಕಾಲದ ಆರೋಪಗಳನ್ನು ಈ ದಾಖಲೆಗಳು ಸಾಬೀತುಪಡಿಸುತ್ತಿರುವುದಾಗಿ ತನ್ನ ವರದಿಯಲ್ಲಿ ಹೇಳಿದೆ.
ಆದರೆ ಇದು ಹಳೆಯ, ಆಧಾರರಹಿತ ಆರೋಪವನ್ನು ಆಧರಿಸಿದ ಮಾಹಿತಿಯಂದು, ತನ್ನಿಂದ ಯಾವುದೇ ಪ್ರಮಾದಗಳೂ ಆಗಿಲ್ಲವೆಂದು ಅದಾನಿಯವರ ಸಂಸ್ಥೆ ಹೇಳಿದೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಕಲ್ಲಿದ್ದಲು ಆಮದು ಮಾಡಿರುವ ಆರೋಪ ಸುಪ್ರೀಂ ಕೋರ್ಟ್ನಲ್ಲಿ ಇತ್ಯರ್ಥವಾಗಿದೆ ಎಂದು ಅದಾನಿ ಸಮೂಹ ಹೇಳಿದೆ.
ಈ ಸುದ್ದಿ ಓದಿದ್ದೀರಾ? ಏಕದಿನ ವಿಶ್ವಕಪ್ 2023 | ಜಯ್ ಶಾ ಪ್ರತಿಷ್ಠೆಯಿಂದ ಪ್ರೇಕ್ಷಕರಿಲ್ಲದ ಕ್ರೀಡಾಂಗಣಗಳು, ಕಳೆಗುಂದಿದ ಕ್ರಿಕೆಟ್
ಇಂಧನ ವೆಚ್ಚ ಹೆಚ್ಚಳದ ಅರೋಪವನ್ನು ಹಣಕಾಸು ಸಚಿವಾಲಯದ ತನಿಖಾ ಘಟಕವಾದ ಕಂದಾಯ ಗುಪ್ತಚರ ನಿರ್ದೇಶನಾಲಯದ ತನಿಖೆಯಲ್ಲಿ ಏಳು ವರ್ಷಗಳ ಹಿಂದೆ ಮಾಡಲಾಗಿತ್ತು. 2016ರಲ್ಲಿ ಇಂಡೋನೇಷ್ಯಾದ ಕಲ್ಲಿದ್ದಲಿನ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಿದ್ದಕ್ಕಾಗಿ ಅಲ್ಲಿನ ಸರ್ಕಾರ 40 ಕಂಪನಿಗಳಿಗೆ ನೋಟಿಸ್ ನೀಡಿತ್ತು. ಆ 40 ಕಂಪನಿಗಳಲ್ಲಿ ಅದಾನಿ ಸಮೂಹದ 5 ಮತ್ತು ಅದಾನಿ ಸಮೂಹ ಪೂರೈಕೆ ಮಾಡಿದ್ದ ಇನ್ನೂ 5 ಕಂಪನಿಗಳು ಸೇರಿದ್ದವು. ರಫ್ತು ಮತ್ತು ಆಮದು ದಾಖಲೆಗಳ ಹೋಲಿಕೆಗಳ ಪ್ರಕಾರ ಶೇ.50ರಿಂದ ಶೇ.100ವರೆಗೆ ಮೌಲ್ಯ ಹೆಚ್ಚಿಸಿರುವುದನ್ನು ನೋಟಿಸಿನಲ್ಲಿ ತಿಳಿಸಲಾಗಿತ್ತು.
ಇನ್ನೊಂದೆಡೆ, ಅದಾನಿಯವರ ತವರು ರಾಜ್ಯ ಗುಜರಾತ್ನ ಪ್ರತಿಪಕ್ಷ ನಾಯಕರು 2018ರಿಂದ ಅದಾನಿ ಸಮೂಹ ವಿದ್ಯುತ್ಗೆ ಹೆಚ್ಚು ಶುಲ್ಕ ವಿಧಿಸುತ್ತಿರುವ ಬಗ್ಗೆ ಆರೋಪಿಸಿದ್ದಾರೆ. ಅದಾನಿ ತಾವು ತರಿಸುವ ಕಲ್ಲಿದ್ದಲಿನ ಇಂಡೋನೇಷಿಯಾದ ನಿಜವಾದ ಮಾರುಕಟ್ಟೆ ಬೆಲೆಯನ್ನು ಬಹಿರಂಗಪಡಿಸದಿರುವ ಬಗ್ಗೆಯೂ ಅವರು ತಿಳಿಸಿದ್ದಾರೆ.
ಹೀಗಿದ್ದೂ 2016ರಲ್ಲಿ ಹೆಸರಿಸಲಾದ 40 ಆಮದುದಾರ ಕಂಪನಿಗಳಲ್ಲಿ ಒಂದರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಿಂದ ಅರ್ಜಿ ಹಿಂತೆಗೆದುಕೊಳ್ಳುವ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್) ನಿರ್ಧಾರವನ್ನು ಉಲ್ಲೇಖಿಸುವ ಅದಾನಿ, ಇದು ಕಲ್ಲಿದ್ದಲು ಆಮದುಗಳಲ್ಲಿನ ಅಧಿಕ ಮೌಲ್ಯ ಆರೋಪ ವಿಚಾರ ಬಗೆಹರಿದಿದೆ ಎಂಬುದಕ್ಕೆ ನಿರ್ಣಾಯಕ ಪುರಾವೆ ಎಂದು ಸಮರ್ಥಿಸಿಕೊಳ್ಳುತ್ತಾರೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್) ಬಳಸಿದ ಕೆಲವು ದಾಖಲೆಗಳು ಅಧಿಕೃತತೆಯ ಕೊರತೆ ಹೊಂದಿವೆ ಎಂದು ಕಸ್ಟಮ್ಸ್ ನ್ಯಾಯಮಂಡಳಿ ಕಂಡುಕೊಂಡಿದೆ ಮತ್ತು ಕಸ್ಟಮ್ಸ್ ಕಾನೂನನ್ನು ಜಾರಿಗೊಳಿಸಲು ಡಿಆರ್ಐ ಅಧಿಕಾರ ವ್ಯಾಪ್ತಿ ಸೀಮಿತವಾಗಿದೆ.
An FT analysis supports longstanding claims that Adani Group has been inflating fuel costs for billions of dollars of coal, leading to millions of Indians overpaying for electricity https://t.co/JV2GlxrBx8 pic.twitter.com/v8wlKVQY3m
— Financial Times (@FT) October 12, 2023
ಈ ತನಿಖೆ ಇನ್ನೂ ಬಗೆಹರಿಯದೇ ಉಳಿದಿರುವುದು ಅದಾನಿ ಮತ್ತು ಪ್ರಧಾನಿ ಮೋದಿ ಸರ್ಕಾರದ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಭಾರತದ ಅತಿದೊಡ್ಡ ಖಾಸಗಿ ಉಷ್ಣವಿದ್ಯುತ್ ಕಂಪನಿ ಮತ್ತು ಪೋರ್ಟ್ ಆಪರೇಟರ್ ಸೇರಿದಂತೆ 10 ಪಟ್ಟಿ ಮಾಡಿದ ಕಂಪನಿಗಳನ್ನು ನಿಯಂತ್ರಿಸುವ ಸಮೂಹದ ಮುಖ್ಯಸ್ಥರಾಗಿದ್ದಾರೆ.
ಈ ವರ್ಷದ ಆರಂಭದಲ್ಲಿ ಆದಾನಿ ಕಾರ್ಪೊರೇಟ್ ಸಂಸ್ಥೆ ವಂಚನೆಯ ಆರೋಪಗಳನ್ನು ಎದುರಿಸಿತು. ಇದು ಅವರ ಸಮೂಹದ ಮೌಲ್ಯದಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾಯಿತು. ಹಿಂಡೆನ್ಬರ್ಗ್ ವರದಿ ಅದಾನಿಯ ಕಂಪನಿ ಆರ್ಥಿಕ ದುರುಪಯೋಗದ ಆರೋಪ ಮಾಡಿತು. ಅದನ್ನು ನಿರಾಕರಿಸಿದ ಅದಾನಿ ಸಮೂಹ ಇದು ಭಾರತದ ಸಂಸ್ಥೆಗಳು ಮತ್ತು ಬೆಳವಣಿಗೆಯ ಮೇಲಿನ ದಾಳಿ ಎಂದು ವರದಿಯಲ್ಲಿ ಹೇಳಲಾಗಿದೆ.
ಜನವರಿ 2013ರಿಂದ ಡಿಎಸ್ ಅಕೇಶಿಯಾ ಇಂಡೋನೇಷ್ಯಾದಿಂದ ಭಾರತಕ್ಕೆ ಕಲ್ಲಿದ್ದಲನ್ನು ಸಾಗಿಸಿದಾಗ, ಕಲ್ಲಿದ್ದಲಿನ ಮೌಲ್ಯ ದುಪ್ಪಟ್ಟಾಗಿತ್ತು, ಗುಜರಾತಿನ ಮುಂದ್ರಾ ಬಂದರಿಗೆ ಬಂದಾಗ, ರಫ್ತು ದಾಖಲೆಗಳು 19 ಮಿಲಿಯನ್ ಡಾಲರ್ ಇದ್ದರೆ ಆಮದು ದಾಖಲೆಗಳು 43 ಮಿಲಿಯನ್ ಡಾಲರ್ ಎಂದು ಇರುವುದಾಗಿ ಫೈನಾನ್ಸಿಯಲ್ ಟೈಮ್ಸ್ ವರದಿಯಲ್ಲಿ ತಿಳಿಸಲಾಗಿದೆ.
ಡಿಎಲ್ ಅಕೇಶಿಯಾ ಸರಕು ಸೇರಿದಂತೆ ಅದಾನಿ ಎಂಟರಪ್ರೈಸಸ್ನಿಂದ ಭಾರತಕ್ಕೆ ಆಮದು ಮಾಡಿಕೊಂಡ 30 ಸಾಗಣೆಗಳನ್ನು ಫೈನಾನ್ಶಿಯಲ್ ಟೈಮ್ಸ್ ಪರಿಶೀಲಿಸಿದೆ. ಭಾರತದಲ್ಲಿನ ಪ್ರತಿಯೊಂದು ಸಾಗಣೆಯ ಕಸ್ಟಮ್ಸ್ ದಾಖಲೆಗಳನ್ನು ಜನವರಿ 2009 ಮತ್ತು ಆಗಸ್ಟ್ 2021ರ ನಡುವೆ ಇಂಡೋನೇಷ್ಯಾದಲ್ಲಿ ಸಲ್ಲಿಸಿದ ದಾಖಲೆಗಳೊಂದಿಗೆ ತಾಳೆ ಮಾಡಿ ನೋಡಲಾಗಿದೆ. ನಂತರದ ಇಂಡೋನೇಷ್ಯಾದ ದಾಖಲೆಗಳು ಲಭ್ಯವಿಲ್ಲ. ನೌಕಾಯಾನದ ಸಮಯವನ್ನು ಪರಿಶೀಲಿಸುವ ಮೂಲಕ ವರದಿಯು ನಿಖರತೆಯನ್ನು ಖಾತ್ರಿಪಡಿಸಿದೆ.
ಮಾರ್ಚ್ನಲ್ಲಿ ಕೊನೆಗೊಂಡ ಕಳೆದ ಹಣಕಾಸು ವರ್ಷದಲ್ಲಿ 88 ಮಿಲಿಯನ್ ಟನ್ ಕಲ್ಲಿದ್ದಲನ್ನು ವ್ಯಾಪಾರ ಮಾಡಿರುವುದಾಗಿ ಅದು ಹೇಳಿಕೊಂಡಿದೆ. ಕಲ್ಲಿದ್ದಲು ಬೆಲೆಗಳು ಅರ್ಧದಷ್ಟು ಕುಸಿತ ಹೊಂದಿದ ಹೊತ್ತಿನಲ್ಲೂ ಲಾಭದಲ್ಲಿ ಶೇ. 24 ಸ್ಥಿರತೆ ಇತ್ತು. ಮೂಲ ಕಂಪನಿಯಾದ ಅದಾನಿ ಎಂಟರ್ ಪ್ರೈಸಸ್ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಅದರ ವಾರ್ಷಿಕ ಲಾಭ ನಾಲ್ಕು ಪಟ್ಟು ಹೆಚ್ಚಾಗಿದೆ.
ಜುಲೈ 2021ರಿಂದ ಭಾರತೀಯ ಆಮದು ಅಂಕಿಅಂಶಗಳ ಪ್ರಕಾರ, ಅದಾನಿಯು ಈ ಮಧ್ಯವರ್ತಿಗಳಿಗೆ ಮಾರುಕಟ್ಟೆಗಿಂತ ಗಣನೀಯ ಬೆಲೆಯಾಗಿ ಒಟ್ಟು 4.8 ಶತಕೋಟಿ ಡಾಲರ್ ಮೊತ್ತವನ್ನು ಕಲ್ಲಿದ್ದಲಿಗಾಗಿ ಪಾವತಿಸಿದ್ದಾರೆ ಎಂದು ವರದಿ ಹೇಳುತ್ತದೆ.
ಅದಾನಿ ಕಲ್ಲಿದ್ದಲು ಸರಬರಾಜು ಮಾಡಿದ ಮೂರು ಮಧ್ಯವರ್ತಿ ಕಂಪನಿಗಳಾದ ತೈಪೆಯ ಸ್ಟೈಲಿಂಗ್ಸ್, ದುಬೈನ ಟಾರೆನ್ ಕಮಾಡಿನ ಜನರಲ್ ಬೈಲಿಂಗ್ ಮತ್ತು ಸಿಂಗಾಪುರದ ವ್ಯಾನ್ ಏಷ್ಯಾಟ್ರೇಡ್ ಲಿಂಕ್ ಗಮನಾರ್ಹ ಲಾಭ ಮಾಡಿಕೊಂಡವು.
ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣೆಗೆ ಜವಾಬ್ದಾರರಾಗಿರುವ ಭಾರತದ ಸಾರ್ವಜನಿಕ ಮತ್ತು ಖಾಸಗಿ ಕಂಪನಿಗಳ ಸಂಕೀರ್ಣ ಜಾಲವನ್ನು ಪರಿಗಣಿಸಿ, ಈ ವೆಚ್ಚಗಳು ಅಂತಿಮವಾಗಿ ಸಾರ್ವಜನಿಕರ ಮೇಲಿನ ಹೊರೆಯಾಗುತ್ತವೆ ಎಂಬುದು ಗಮನಿಸಬೇಕಾದ ಸಂಗತಿ.
ಈ ವರ್ಷದ ಆಗಸ್ಟ್ನಲ್ಲಿ ಗುಜರಾತ್ನ ಪ್ರತಿಪಕ್ಷ ನಾಯಕರು ಕಲ್ಲಿದ್ದಲು ಬೆಲೆಗೆ ಸಂಬಂಧಿಸಿದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಐದು ವರ್ಷಗಳಲ್ಲಿ ಅದಾನಿ ಪವರ್ಗೆ ಸರ್ಕಾರ ಸುಮಾರು 500 ಮಿಲಿಯನ್ ಡಾಲರ್ ಹೆಚ್ಚುವರಿ ಪಾವತಿ ಮಾಡಿದೆ ಎಂದು ಆರೋಪಿಸಿದರು. ಮುಂಬರುವ ಚುನಾವಣೆಯಲ್ಲಿ ಕಲ್ಲಿದ್ದಲು ಮತ್ತು ಕ್ರೋನಿ ಕ್ಯಾಪಿಟಲಿಸಂ ಅನ್ನು ಮಹತ್ವದ ವಿಷಯಗಳನ್ನಾಗಿಸಲು ಪ್ರತಿಪಕ್ಷಗಳು ಮುಂದಾಗಿವೆ.





