ಬೀಗ ಹಾಕಿದ ಮನೆಗೆ ಕಳ್ಳನೊಬ್ಬ ನುಗ್ಗಿ ಚಿನ್ನ, ಬೆಳ್ಳಿ ಜತೆ ಎಲ್ಪಿಜಿ ಸಿಲಿಂಡರ್ ಕೂಡಾ ಕಳವು ಮಾಡಿರುವ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.
ನೀತು ರಾಜಾವತ್ ಎಂಬವರು ಸೋಮವಾರ ತನ್ನ ತಾಯಿಯ ಮನೆಗೆ ಹೋಗಿದ್ದರು. ಮರುದಿನ ಮನೆಗೆ ಹಿಂದಿರುಗಿದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳು, ನಗದು ಮತ್ತು ಹಲವು ದಾಖಲೆಗಳನ್ನು ದೋಚಲಾಗಿದೆ. ಅದರೊಂದಿಗೆ ಕಳ್ಳ ಎಲ್ಪಿಜಿ ಸಿಲಿಂಡರ್ ಕೂಡ ಕದ್ದೊಯ್ದಿದ್ದಾನೆ. ಸದ್ಯ ದೇಶದಲ್ಲಿ ಎಲ್ಪಿಜಿ ಕೊರತೆ ಆತಂಕ ಸೃಷ್ಟಿಯಾಗಿರುವ ನಡುವೆಯೇ ಈ ಕಳ್ಳತನ ನಡೆದಿದೆ.
ಇದನ್ನು ಓದಿದ್ದೀರಾ? ಗದಗ | ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳ ಏರಿಕೆ: ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ವಿರೋಧ
ಸದ್ಯ ಕೊಟ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಸಿಸಿಟಿವಿ ದೃಶ್ಯಗಳನ್ನು ಬಳಸಿಕೊಂಡು ಶಂಕಿತರನ್ನು ಗುರುತಿಸಿದ್ದು, ಹುಡುಕಾಟ ಆರಂಭಿಸಿದ್ದಾರೆ. ಶೀಘ್ರದಲ್ಲೇ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಹಲವು ದೇಶಗಳ ಮೇಲೆ ಪ್ರಭಾವ ಬೀರಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಅಡುಗೆ ಅನಿಲ ಆಮದು ಮಾಡಿಕೊಳ್ಳುವುದು ಕಷ್ಟವಾಗಿದ್ದು, ಭಾರತದಲ್ಲಿ ಎಲ್ಪಿಜಿ ಪೂರೈಕೆಯಲ್ಲಿ ಗಣನೀಯ ಕೊರತೆ ಉಂಟಾಗಿದೆ. ಬೆಂಗಳೂರು, ಮುಂಬೈ, ಚೆನ್ನೈ ಮತ್ತು ಹೈದರಾಬಾದ್ನಂತಹ ಪ್ರಮುಖ ನಗರಗಳಲ್ಲಿ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಅನಿಲದ ಕೊರತೆಯಿಂದಾಗಿ ಮುಚ್ಚುವ ಹಂತಕ್ಕೆ ತಲುಪಿದೆ. ಇವೆಲ್ಲವೂ ಜನರಲ್ಲಿ ಆತಂಕ ಸೃಷ್ಟಿಸಿದ್ದು, ಅಡುಗೆ ಮಾಡಲು ಪರ್ಯಾಯ ವ್ಯವಸ್ಥೆಯತ್ತ ಜನರು ಮುಖ ಮಾಡಿದ್ದಾರೆ.
ಆದರೆ ಇವೆಲ್ಲವುದರ ನಡುವೆ ಹಲವೆಡೆ ಬ್ಲ್ಯಾಕ್ ಮಾರ್ಕೆಟ್ನಲ್ಲಿ ಸಿಲಿಂಡರ್ ಮಾರಾಟವಾಗುತ್ತಿರುವುದು ಬೆಳಕಿಗೆ ಬಂದಿದೆ. ಇನ್ನು ಕೆಲವೆಡೆ ಎಲ್ಪಿಜಿ ಸಿಲಿಂಡರ್ ಕಳ್ಳತನವೂ ನಡೆದಿದೆ. ಬೆಂಗಳೂರಿನ ಕಲ್ಯಾಣ ನಗರದಂತಹ ವಸತಿ ಪ್ರದೇಶಗಳಲ್ಲಿಯೂ ಸಿಲಿಂಡರ್ ಕದಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇರಳದ ತಿರುವನಂತಪುರಂನ ರೆಸ್ಟೋರೆಂಟ್ಗಳಿಂದಲೂ ಅಡುಗೆ ಅನಿಲದ ಸಿಲಿಂಡರ್ಗಳು ಕಳವಾಗಿವೆ.
ಇನ್ನು ಭೋಪಾಲ್ನ ಲಾಲ್ಘಾಟಿ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಪ್ರಕರಣವೊಂದರಲ್ಲಿ, ವಕೀಲರೊಬ್ಬರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಕಳ್ಳತನ ನಡೆದಿದೆ. ಮೋಟಾರ್ ಸೈಕಲ್ನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಮನೆಯ ಪಾರ್ಕಿಂಗ್ ಪ್ರದೇಶದಿಂದ ನಾಲ್ಕು ಖಾಲಿ ಸಿಲಿಂಡರ್ಗಳನ್ನು ಕದ್ದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲವೆಡೆ ಪೂರೈಕೆ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವವರು ಎಲ್ಪಿಜಿ ಸಿಲಿಂಡರ್ಗೆ ಬಾಯಿಗೆ ಬಂದಂತೆ ದರ ಹೇಳಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರು ನಗರದಲ್ಲೇ ಹಲವೆಡೆ ಒಂದು ಸಿಲಿಂಡರ್ಗೆ 2,500-3,000 ರೂಪಾಯಿಯಷ್ಟು ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.





