ಪ್ರಶ್ನೆ ಕೇಳುವವರ ಧ್ವನಿಯನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದ್ದು, ಈ ಆಡಳಿತವು ಭಿನ್ನಾಭಿಪ್ರಾಯದ ಸದ್ದಿಗೆ ಬೆದರುತ್ತಿದೆ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಲ್ಲಿಕೋಟೆಯಲ್ಲಿ ಆರಂಭಗೊಂಡಿರುವ 2026ರ ಸಾಲಿನ ‘ಕೇರಳ ಸಾಹಿತ್ಯ ಉತ್ಸವ’ದ (ಕೆಎಲ್ಎಫ್) ಉದ್ಘಾಟನಾ ದಿನದಂದು, ‘ಭಿನ್ನಾಭಿಪ್ರಾಯದ ಅಪರಾಧೀಕರಣ! ದನಿ ಎತ್ತಿದವರಿಗೆ ಜೈಲು ಶಿಕ್ಷೆಯೇ?’ (Criminalising Dissent! Who Gets Locked Up For Speaking Out?) ಎಂಬ ವಿಷಯದ ಕುರಿತು ನಡೆದ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಅಪರಾಧವೆಂದು ಬಿಂಬಿಸುತ್ತಿರುವ ಕ್ರಮದ ವಿರುದ್ಧ ಕಿಡಿಕಾರಿದ ಅವರು, ತನಿಖಾ ಪತ್ರಕರ್ತ ಜೋಸಿ ಜೋಸೆಫ್ ಅವರೊಂದಿಗೆ ನಡೆಸಿದ ಸಂವಾದದಲ್ಲಿ ಲಡಾಖ್ನ ಹೋರಾಟಗಾರ ಸೋನಮ್ ವಾಂಗ್ಚುಕ್ ಮತ್ತು ದೆಹಲಿಯ ಉಮರ್ ಖಾಲಿದ್ ಅವರ ಬಂಧನ, ಮಾಧ್ಯಮಗಳ ಶರಣಾಗತಿ ಹಾಗೂ ನ್ಯಾಯಾಂಗದ ಸ್ವಾತಂತ್ರ್ಯ ಕುಸಿಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
“ನಾವು ಬೇರೆ ಮಣ್ಣಿನವರು”
ತಮ್ಮ ವಿರುದ್ಧ ದಾಖಲಾಗಿರುವ ಸಾಲು ಸಾಲು ಕಾನೂನು ಪ್ರಕರಣಗಳ ಕುರಿತು ಜೋಸಿ ಜೋಸೆಫ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ನನ್ನನ್ನು ದೇಶದ್ರೋಹಿ, ಪೆರಿಯಾರಿಸ್ಟ್ ಮತ್ತು ಹಿಂದೂ ವಿರೋಧಿ ಎಂದು ಕರೆಯಲಾಗಿದೆ. ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಮತ್ತು ನನ್ನ ಅಮೂಲ್ಯ ಸಮಯವನ್ನು ಹಾಳುಮಾಡಲು ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಆದರೆ, ನಾವು ಬೇರೆಯದ್ದೇ ಸತ್ವದಿಂದ (ಮಣ್ಣಿನಿಂದ) ತಯಾರಾದವರು ಎಂಬುದು ಅವರಿಗೆ ತಿಳಿದಿಲ್ಲ” ಎಂದು ತಿರುಗೇಟು ನೀಡಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಧಕ್ಕೆ ತರುವುದು ಆಡಳಿತವೇ?
ವಾಂಗ್ಚುಕ್ ಭಯೋತ್ಪಾದಕರೇ?
ಲಡಾಖ್ನ ಪರಿಸರವಾದಿ ಹಾಗೂ ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರ ಹೋರಾಟವನ್ನು ಪ್ರಸ್ತಾಪಿಸಿದ ರಾಜ್, “ಹಿಮಾಲಯದ ಸೂಕ್ಷ್ಮ ಪರಿಸರದಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳ ವಿರುದ್ಧ ವಾಂಗ್ಚುಕ್ ನಡೆಸಿದ ಪ್ರತಿಭಟನೆಯನ್ನು ಬೆಂಬಲಿಸಲು ನಾನು ಲಡಾಖ್ಗೆ ಹೋಗಿದ್ದೆ. ಆದರೆ ಇಂದು, ಅವರನ್ನು ಲಡಾಖ್ನಿಂದ ಬಹುದೂರದ ರಾಜಸ್ಥಾನದ ಜೈಲಿನಲ್ಲಿ, ಮೂರು ಹಂತದ ಭದ್ರತಾ ಗೋಡೆಗಳ ಹಿಂದೆ ಬಂಧಿಸಿಡಲಾಗಿದೆ. ಕನಿಷ್ಠ ಅವರ ಪತ್ನಿಗೂ ಅವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿಲ್ಲ. ವಾಂಗ್ಚುಕ್ ಒಬ್ಬ ಭಯೋತ್ಪಾದಕ ಎಂದು ಯಾರಾದರೂ ನಂಬಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
‘ಮಹಾಪ್ರಭು’ವಿಗೆ ವಿರೋಧ ಇಷ್ಟವಿಲ್ಲ
ಉಮರ್ ಖಾಲಿದ್ ವಿರುದ್ಧ ಕರಾಳ ಯುಎಪಿಎ (UAPA) ಕಾಯ್ದೆಯನ್ನು ಬಳಸಿರುವುದನ್ನು ಪ್ರಶ್ನಿಸಿದ ಅವರು, “ಸಿಎಎ (CAA) ಪ್ರತಿಭಟನೆಯ ಸಮಯದಲ್ಲಿ ರಸ್ತೆ ತಡೆ ನಡೆಸುವುದು ಭಯೋತ್ಪಾದಕ ಕೃತ್ಯವಾಗಲು ಹೇಗೆ ಸಾಧ್ಯ? ಅಧಿಕಾರದಲ್ಲಿ ಕುಳಿತಿರುವ ಆ ‘ಮಹಾಪ್ರಭು’ವಿಗೆ (ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ) ಭಿನ್ನಾಭಿಪ್ರಾಯದ ಅಥವಾ ವಿರೋಧದ ಶಬ್ದವನ್ನು ಕೇಳುವುದು ಇಷ್ಟವಿಲ್ಲ” ಎಂದು ವ್ಯಂಗ್ಯವಾಡಿದರು.





