ಲೋಕಸಭೆಯಲ್ಲಿ 97 ಸಂಸದರ ಅನುಪಸ್ಥಿತಿಯ ನಡುವೆ ನೂತನ ಕ್ರಿಮಿನಲ್ ಮಸೂದೆಗಳಾದ ಭಾರತೀಯ ನ್ಯಾಯ ಸಂಹಿತೆ,ಭಾರತೀಯ ಸುರಕ್ಷಾ ನಾಗರಿಕ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಸಂಹಿತೆಯನ್ನು ಅಂಗೀಕರಿಸಲಾಯಿತು.
ಐಪಿಸಿ ಬದಲಾಗಿ ಭಾರತೀಯ ನ್ಯಾಯ ಸಂಹಿತೆ, ಅಪರಾಧ ಪ್ರಕ್ರಿಯೆ ಸಂಹಿತೆ(ಸಿಆರ್ಪಿಸಿ) ಬದಲಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಇಂಡಿಯನ್ ಎವಿಡೆನ್ಸ್ ಆಕ್ಟ್ 1873ರ ಬದಲಿಗೆ ಭಾರತೀಯ ಸಾಕ್ಷ್ಯ ಸಂಹಿತೆ ಸ್ಥಾನ ತುಂಬಲಿವೆ.
ಮೂರು ಕಾಯ್ದೆಗಳನ್ನು ಅಂಗೀಕರಿಸಿದ ನಂತರ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈ ಮೊದಲು ಐಪಿಸಿಯ ಉದ್ದೇಶವು ನ್ಯಾಯದ ಬದಲು ಶಿಕ್ಷೆ ವಿಧಿಸುವುದಾಗಿತ್ತು. ಇದರ ಬದಲಿಗೆ ಭಾರತೀಯ ನ್ಯಾಯ ಸಂಹಿತೆ 2023 ಕಾಯ್ದೆ ಸದನಗಳಲ್ಲಿ ಅಂಗೀಕಾರದ ನಂತರ ಜಾರಿಗೆ ಬರಲಿದೆ. ಹೊಸ ಕ್ರಿಮಿನಲ್ ಕಾನೂನು ಮಸೂದೆಗಳು ‘ಸಂವಿಧಾನದ ಆತ್ಮಕ್ಕೆ ಅನುಗುಣವಾಗಿ’ ಇವೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ
“ಮೂರು ಹೊಸ ಮಸೂದೆಗಳು ಭಾರತೀಯ ಚಿಂತನೆಯ ಆಧಾರದ ಮೇಲೆ ನ್ಯಾಯ ವ್ಯವಸ್ಥೆಯನ್ನು ಸ್ಥಾಪಿಸಲು ಬಯಸುತ್ತವೆ. ಮೂರು ಪ್ರಸ್ತಾವಿತ ಕ್ರಿಮಿನಲ್ ಕಾನೂನುಗಳು ಜನರನ್ನು ವಸಾಹತುಶಾಹಿ ಮನಸ್ಥಿತಿ ಮತ್ತು ಅದರ ಸಂಕೇತಗಳೊಂದಿಗೆ ಮುಕ್ತಗೊಳಿಸುತ್ತವೆ” ಎಂದು ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಮಸೂದೆಗಳನ್ನು ಅಂಗೀಕರಿಸುವ ಮೊದಲು ಅಮಿತ್ ಶಾ ಹೇಳಿದರು.
‘ಬಡವರಿಗೆ ನ್ಯಾಯ ದೊರಕಿಸುವ ದೊಡ್ಡ ಸವಾಲೆಂದರೆ ಆರ್ಥಿಕ ಸವಾಲು. ಈ ಮೊದಲು ದಿನಾಂಕದಿಂದ ದಿನಾಂಕಕ್ಕೆ ನಡೆಯುತ್ತಲೆ ಇರುತ್ತಿತ್ತು. ಪೊಲೀಸರು ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆ ಮಾಡುತ್ತಾರೆ. ಸರಕಾರವು ಪೊಲೀಸ್ ಮತ್ತು ನ್ಯಾಯಾಂಗವನ್ನು ಹೊಣೆ ಮಾಡುತ್ತದೆ. ಪೊಲೀಸ್ ಮತ್ತು ನ್ಯಾಯಾಂಗ ವಿಳಂಬಕ್ಕೆ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂಬ ಕಾರಣಕ್ಕೆ ಈಗ ನಾವು ಹೊಸ ಕಾನೂನುಗಳಲ್ಲಿ ಹಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದೇವೆ. ಮೂರು ಪ್ರಸ್ತಾವಿತ ಕಾನೂನುಗಳು ದೇಶದ್ರೋಹವನ್ನು ಅಪರಾಧವೆಂದು ರದ್ದುಗೊಳಿಸಿದವು ಮತ್ತು ‘ರಾಜ್ಯದ ವಿರುದ್ಧದ ಅಪರಾಧಗಳು’ ಎಂಬ ಹೊಸ ವಿಭಾಗವನ್ನು ಪರಿಚಯಿಸಿದವು’ ಎಂದು ಗೃಹ ಸಚಿವರು ಸದನಕ್ಕೆ ತಿಳಿಸಿದರು.





