ಮಹಾರಾಷ್ಟ್ರದ ಮಾಲೆಗಾಂವ್ ಮಹಾನಗರ ಪಾಲಿಕೆಯ ಉಪಮೇಯರ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರ ಅಳವಡಿಕೆ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ, ಆಡಳಿತರೂಢ ಬಿಜೆಪಿಯ ಕೋಮು ಧ್ರುವೀಕರಣದ ಅಜೆಂಡಾವನ್ನು ಕಾಂಗ್ರೆಸ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತು ಬಿಜೆಪಿ ತೋರುತ್ತಿರುವ ಈ ‘ಢೋಂಗಿತನ’ದ ವಿರುದ್ಧ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್ ಸಾಕ್ಷ್ಯಾಧಾರಗಳ ಸಮೇತ ವಾಗ್ದಾಳಿ ನಡೆಸಿದ್ದು, ಕೇಸರಿ ಪಡೆಯ ದ್ವಂದ್ವ ನೀತಿಯನ್ನು ಬಯಲಿಗೆಳೆದಿದ್ದಾರೆ.
ಟಿಪ್ಪು ಸುಲ್ತಾನ್ ಭಾವಚಿತ್ರದ ವಿವಾದಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಸಚಿನ್ ಸಾವಂತ್, “ಬಿಜೆಪಿಯ ಈ ಇಬ್ಬಗೆಯ ನೀತಿಯನ್ನು ಏನೆಂದು ಕರೆಯಬೇಕು? ಸಾಕ್ಷಾತ್ ಟಿಪ್ಪು ಸುಲ್ತಾನ್ ಅವರೇ ಶ್ರೀರಾಮನ ಹೆಸರು ಇರುವ ಉಂಗುರವನ್ನು ಧರಿಸುತ್ತಿದ್ದರು,” ಎಂದು ಹೇಳುವ ಮೂಲಕ ಬಿಜೆಪಿಯ ಕೋಮು ರಾಜಕಾರಣಕ್ಕೆ ತಿರುಗೇಟು ನೀಡಿದ್ದಾರೆ. ಈ ಹಿಂದಿನ ಘಟನೆಗಳನ್ನು ಉಲ್ಲೇಖಿಸುವ ಮೂಲಕ ಅವರು ಬಿಜೆಪಿಯ ಬಣ್ಣವನ್ನು ಬಯಲು ಮಾಡಿದ್ದಾರೆ.
ಬಿಜೆಪಿಯ ಹಳೆಯ ದಾಖಲೆಗಳನ್ನು ಕೆದಕಿರುವ ಸಾವಂತ್, 2012ರಲ್ಲಿ ಅಕೋಲಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯು ಸ್ಥಾಯಿ ಸಮಿತಿ ಸಭಾಂಗಣಕ್ಕೆ ‘ಶಹೀದ್-ಎ-ವತನ್ ಶೇರ್-ಎ-ಮೈಸೂರ್ ಟಿಪ್ಪು ಸುಲ್ತಾನ್’ ಎಂದು ಹೆಸರಿಡುವ ನಿರ್ಣಯವನ್ನು ಸ್ವತಃ ಅಂಗೀಕರಿಸಿತ್ತು ಎಂಬುದನ್ನು ನೆನಪಿಸಿದ್ದಾರೆ. ಅಷ್ಟೇ ಅಲ್ಲದೆ, 2013ರಲ್ಲಿ ಮುಂಬೈನ ಎಂ-ಈಸ್ಟ್ ವಾರ್ಡ್ನ ರಸ್ತೆಯೊಂದಕ್ಕೆ ‘ಶಹೀದ್ ಟಿಪ್ಪು ಸುಲ್ತಾನ್ ಮಾರ್ಗ’ ಎಂದು ಹೆಸರಿಡುವ ಪ್ರಸ್ತಾಪಕ್ಕೂ ಅಂದು ಬಿಜೆಪಿ ಕಾರ್ಪೊರೇಟರ್ಗಳೇ ಬೆಂಬಲ ಸೂಚಿಸಿದ್ದರು ಎಂದು ಅವರು ಬೊಟ್ಟು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಖರ್ಗೆ ಭಾಷಣ ಕಿತ್ತು ಹಾಕಿದ್ದು ಖಂಡನೀಯ; ಅಂದು ದ್ರೋಣಾಚಾರ್ಯ, ಇಂದು ಸಂಘಾಚಾರ್ಯ!
ಮತ್ತೊಂದೆಡೆ, ಕರ್ನಾಟಕದ ಬಿಜೆಪಿಯ ಪ್ರಬಲ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆ ಟಿಪ್ಪು ಸಮಾಧಿಗೆ ಭೇಟಿ ನೀಡಿ, ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಟಿಪ್ಪು ಬಗ್ಗೆ ಪ್ರಶಂಸೆಯ ಮಾತುಗಳನ್ನು ಬರೆದಿದ್ದನ್ನು ಸಾವಂತ್ ಉಲ್ಲೇಖಿಸಿದ್ದಾರೆ. ಹಾಗೆಯೇ, 2017ರಲ್ಲಿ ಅಂದಿನ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕರ್ನಾಟಕ ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಅವರನ್ನು ಮುಕ್ತಕಂಠದಿಂದ ಹೊಗಳಿದ್ದನ್ನು ಪ್ರಸ್ತಾಪಿಸುವ ಮೂಲಕ, ಸಮಯಕ್ಕೆ ತಕ್ಕಂತೆ ಬಿಜೆಪಿ ಹೇಗೆ ನಿಲುವು ಬದಲಿಸುತ್ತದೆ ಎಂಬುದನ್ನು ಕಾಂಗ್ರೆಸ್ ಎತ್ತಿ ತೋರಿಸಿದೆ.
ಮಾಲೆಗಾಂವ್ನಲ್ಲಿ ಶಾನ್-ಎ-ಹಿಂದ್ ನಿಹಾಲ್ ಅಹ್ಮದ್ ಅವರ ಕಚೇರಿಯಲ್ಲಿ ಟಿಪ್ಪು ಭಾವಚಿತ್ರ ಹಾಕಿದ್ದನ್ನು ವಿರೋಧಿಸಿ ಶಿವಸೇನೆ ಹಾಗೂ ಕೆಲವು ಹಿಂದುತ್ವಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ವೇಳೆ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಾಲ್ ಅವರು, ಟಿಪ್ಪು ಹೋರಾಟವನ್ನು ಶಿವಾಜಿ ಮಹಾರಾಜರ ‘ಸ್ವರಾಜ್ಯ’ಕ್ಕೆ ಹೋಲಿಸಿದ್ದರು. ಇದಕ್ಕೆ ಸಿಎಂ ಫಡ್ನವಿಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಈಗ ಸ್ವತಃ ಬಿಜೆಪಿಯ ನಾಯಕರೇ ಟಿಪ್ಪುವನ್ನು ಕೊಂಡಾಡಿದ ಇತಿಹಾಸವನ್ನು ಕಾಂಗ್ರೆಸ್ ಜನರ ಮುಂದಿಟ್ಟಿದೆ.





