ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೊಳ್ಳುತ್ತಿರುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ), ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಮಹಾಭಿಯೋಗ ಪ್ರಸ್ತಾವವನ್ನು ಮಂಡಿಸಲು ಚಿಂತಿಸುತ್ತಿದೆ ಎಂದು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಮಂಗಳವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಲ್ಯಾಣ್ ಬ್ಯಾನರ್ಜಿ, “ನಾವು ಸಿಇಸಿ ವಿರುದ್ಧ ಮಹಾಭಿಯೋಗ ಮಂಡನೆಗೆ ಸಿದ್ಧತೆ ನಡೆಸುತ್ತಿದ್ದೇವೆ. ಆಯೋಗವು ಎಸ್ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿರುವ ರೀತಿ ಸರಿಯಿಲ್ಲ. ಇದು ದೇಶದ ಎಲ್ಲ ನಾಗರಿಕರ ಮತದಾನದ ಹಕ್ಕಿನ ಮೇಲೆ ಪರಿಣಾಮ ಬೀರಲಿದೆ. ಯಾರಿಗೂ ಮತದಾನದ ಹಕ್ಕು ಸಿಗಬಾರದು ಎಂಬ ಉದ್ದೇಶವನ್ನು ಅವರು ಹೊಂದಿದ್ದಂತಿದೆ. ಈ ‘ದುಷ್ಪ್ರೇರಣೆ’ಯ ಕಾರಣಕ್ಕೆ ನಾವು ಮಹಾಭಿಯೋಗ ಮಂಡನೆಗೆ ಚಿಂತಿಸುತ್ತಿದ್ದು, ಇತರ ಪಕ್ಷಗಳೊಂದಿಗೂ ಚರ್ಚಿಸುತ್ತಿದ್ದೇವೆ,” ಎಂದು ಗಂಭೀರ ಆರೋಪ ಮಾಡಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಸಿಇಸಿ ಜ್ಞಾನೇಶ್ ಕುಮಾರ್ ಹಾಗೂ ಇತರ ಇಬ್ಬರು ಆಯುಕ್ತರನ್ನು ಭೇಟಿಯಾಗಿ ಎಸ್ಐಆರ್ ವಿಷಯದ ಕುರಿತು ಚರ್ಚಿಸಿದ್ದರು. ಸಭೆಯ ನಂತರ ಅವರು ಅಸಮಾಧಾನದಿಂದ ಹೊರಬಂದಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!
ಅದರ ಮರುದಿನ, ಅಂದರೆ ಮಂಗಳವಾರ, ಎಸ್ಐಆರ್ ಪ್ರಕ್ರಿಯೆಯಿಂದ ತೊಂದರೆಗೊಳಗಾದ ‘ಸಂತ್ರಸ್ತರ’ ಜತೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಮತಾ, “ನನ್ನ ಹಿಂದೆ ಕುಳಿತಿರುವವರು ಎಸ್ಐಆರ್ ಸಂತ್ರಸ್ತರು. ನಾನು ಲಕ್ಷಾಂತರ ಜನರನ್ನು ಇಲ್ಲಿಗೆ ಕರೆಸಬಹುದಿತ್ತು. ಸಂತ್ರಸ್ತರಿಗೆ ತಮ್ಮ ಪಕ್ಷ ಮಂಡಿಸಲು ಆಯೋಗ ಅವಕಾಶ ನೀಡುತ್ತಿಲ್ಲ,” ಎಂದು ಕಿಡಿಕಾರಿದರು.
ಚುನಾವಣೆಗೆ ಸಿದ್ಧವಾಗುತ್ತಿರುವ ನಾಲ್ಕು ರಾಜ್ಯಗಳ ಪೈಕಿ, ಕೇವಲ ವಿಪಕ್ಷ ಆಡಳಿತ ಇರುವ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಮಾತ್ರ ‘ಎಸ್ಐಆರ್’ ನಡೆಸಲಾಗುತ್ತಿದೆ. ಆದರೆ, ಬಿಜೆಪಿ ಆಡಳಿತ ಇರುವ ಅಸ್ಸಾಂನಲ್ಲಿ ಏಕೆ ‘ಎಸ್ಐಆರ್’ ಬದಲಿಗೆ ಬೇರೆ ರೀತಿಯ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ಮಮತಾ ಪ್ರಶ್ನಿಸಿದರು.
ಈ ರಾಜ್ಯಗಳಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದ ಎಸ್ಐಆರ್ ಪ್ರಕ್ರಿಯೆ ವಿರುದ್ಧ ಟಿಎಂಸಿ ಸಂಸದರು ಸೇರಿದಂತೆ ಹಲವರು ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಸದ್ಯ ವಿಚಾರಣೆ ನಡೆಸುತ್ತಿದೆ.





