ನವದೆಹಲಿ ಮತ್ತು ಎನ್ಸಿಆರ್ ವ್ಯಾಪ್ತಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿದಿರುವ ಹಂತದಲ್ಲೇ ಮುಂದುವರಿದಿದ್ದು, ಮಾಲಿನ್ಯ ನಿಯಂತ್ರಣಕ್ಕೆ ಅಧಿಕಾರಿಗಳು ಕೈಗೊಂಡಿರುವ ಕ್ರಮಗಳು ‘ಸಂಪೂರ್ಣ ವಿಫಲ’ವಾಗಿವೆ ಎಂದು ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇವಲ ತೇಪೆ ಹಚ್ಚುವ ಕೆಲಸಗಳ ಬದಲಿಗೆ, ದೀರ್ಘಕಾಲೀನ ಮತ್ತು ಪ್ರಾಯೋಗಿಕ ಪರಿಹಾರಗಳ ಅಗತ್ಯವಿದೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಸಂಚಾರ ದಟ್ಟಣೆ ಮತ್ತು ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಗುರುಗ್ರಾಮದ ಎಂಸಿಡಿ ಟೋಲ್ ವಿಷಯ ಪ್ರಸ್ತಾಪವಾಯಿತು. ಈ ವೇಳೆ 9 ಟೋಲ್ ಪ್ಲಾಜಾಗಳನ್ನು ತಾತ್ಕಾಲಿಕವಾಗಿ ಮುಚ್ಚಲು ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ಗೆ (ಡಿಎಂಸಿ) ಕೋರ್ಟ್ ನಿರ್ದೇಶಿಸಿದೆ.
“ನಮಗೆ ನಿಮ್ಮ ಆದಾಯ ಮುಖ್ಯವಲ್ಲ, ಜನವರಿ 31ರವರೆಗೆ ಟೋಲ್ ಪ್ಲಾಜಾಗಳನ್ನು ಸಂಪೂರ್ಣ ಮುಚ್ಚಲು ಒಂದು ವಾರದೊಳಗೆ ಸ್ಪಷ್ಟ ಯೋಜನೆ ರೂಪಿಸಿ,” ಎಂದು ಸುಪ್ರೀಂ ಕೋರ್ಟ್ ಖಡಕ್ ಆಗಿ ಸೂಚಿಸಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮಂಡ್ಯದ ಹೆಣ್ಣು ಭ್ರೂಣ ಹತ್ಯೆ ಮತ್ತು ಹೆಣ್ಣು ಸಿಗದ ಯುವಕರ ಹತಾಶೆ
ಮಾಲಿನ್ಯ ನಿರ್ಬಂಧಗಳಿಂದ ಕೆಲಸ ಕಳೆದುಕೊಂಡಿರುವ ಕಟ್ಟಡ ಕಾರ್ಮಿಕರನ್ನು ಪರಿಶೀಲಿಸಿ, ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಧನ ವರ್ಗಾಯಿಸಲು (ಡಿಬಿಟಿ) ಆದೇಶಿಸಿದೆ. ಹಣ ದುರುಪಯೋಗವಾಗದಂತೆ ಎಚ್ಚರಿಸಿದ ಪೀಠ, ಕಾರ್ಮಿಕರಿಗೆ ಪರ್ಯಾಯ ಕೆಲಸ ಒದಗಿಸುವಂತೆಯೂ ಸಲಹೆ ನೀಡಿದೆ. ಸದ್ಯ ಬಾಧಿತ 2.5 ಲಕ್ಷ ಕಾರ್ಮಿಕರ ಪೈಕಿ 7,000 ಮಂದಿಯನ್ನು ಮಾತ್ರ ಸರ್ಕಾರ ಗುರುತಿಸಿದೆ.
ಶಾಲೆಗಳ ಮುಚ್ಚುವಿಕೆ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಪೀಠ ನಿರಾಕರಿಸಿದ್ದು, ಇವು ಮಕ್ಕಳ ಆರೋಗ್ಯ ರಕ್ಷಣೆಗೆ ತೆಗೆದುಕೊಂಡ ಮಧ್ಯಂತರ ಕ್ರಮಗಳು ಎಂದಿದೆ. ಇದೇ ವೇಳೆ, ಶ್ರೀಮಂತರ ಐಷಾರಾಮಿ ಜೀವನಶೈಲಿ, ದೊಡ್ಡ ಡೀಸೆಲ್ ವಾಹನಗಳು ಮತ್ತು ಜನರೇಟರ್ಗಳ ಬಳಕೆಯು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದ್ದು, ಬಡವರು ಇದರ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿದ್ದಾರೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.





