ಜಲ್ಲಿಕಲ್ಲು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆರ್ಟಿಸಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದು ಎಂಟು ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾದಲ್ಲಿ ನಡೆದಿದೆ.
ಚೆವೆಲ್ಲಾ ಎಸಿಪಿ ಬಿ ಕಿಶನ್ ಪ್ರಕಾರ, ಆರ್ಟಿಸಿ ಬಸ್ ತಂಡೂರಿನಲ್ಲಿ ಹೊರಟಿದ್ದು, ಚೆವೆಲ್ಲಾ ತಲುಪಬೇಕಿತ್ತು. “ಟ್ರಕ್ ಜಲ್ಲಿಕಲ್ಲು ತುಂಬಿಕೊಂಡು ಹೋಗುತ್ತಿತ್ತು. ಈ ಅಪಘಾತದಲ್ಲಿ ಟ್ರಕ್ ಚಾಲಕ ಮತ್ತು ಹಲವು ಬಸ್ ಪ್ರಯಾಣಿಕರು ಸೇರಿದಂತೆ 16 ಮಂದಿ ಸಾವನ್ನಪ್ಪಿದ್ದಾರೆ” ಎಂದು ಎಸಿಸಿ ಇಂದು ಮುಂಜಾನೆ ಹೇಳಿದ್ದರು. ಇದಾದ ಬಳಿಕ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗಿ 24ಕ್ಕೆ ತಲುಪಿದೆ.
ಇದನ್ನು ಓದಿದ್ದೀರಾ? ತೆಲಂಗಾಣದಲ್ಲಿ ರಸ್ತೆ ಅಪಘಾತ; ಬೀದರ್ ಮೂಲದ ಇಬ್ಬರ ಸಾವು
ರಾಜೇಂದ್ರನಗರ ಡಿಸಿಪಿ ಯೋಗೇಶ್ ಗೌತಮ್, “ಟ್ರಕ್ ಚಾಲಕ ಓವರ್ಟೇಕ್ ಮಾಡಲು ಪ್ರಯತ್ನಿಸುತ್ತಿದ್ದಾಗ ಅಪಘಾತ ಸಂಭವಿಸಿದೆಯೇ ಅಥವಾ ತಪ್ಪು ದಿಕ್ಕಿನಲ್ಲಿ ಚಾಲನೆ ಮಾಡುತ್ತಿದ್ದನೇ ಎಂದು ನಾವು ಪರಿಶೀಲಿಸಬೇಕಾಗಿದೆ” ಎಂದಿದ್ದಾರೆ.
ಬಸ್ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಮತ್ತು ಡಿಕ್ಕಿಯ ನಂತರ ಟ್ರಕ್ನಲ್ಲಿದ್ದ ಜಲ್ಲಿಕಲ್ಲು ಪ್ರಯಾಣಿಕರ ಮೇಲೆ ಬಿದ್ದಿತು. “ಅಪಘಾತವು ಬಿಜಾಪುರ ಹೆದ್ದಾರಿಯಲ್ಲಿ ಸಂಭವಿಸಿದೆ. ನಾವು ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿದ್ದೇವೆ. ಎರಡೂ ಬದಿಗಳಲ್ಲಿ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ” ಎಂದು ಡಿಸಿಪಿ ಹೇಳಿದ್ದಾರೆ.
ಈ ಬಗ್ಗೆ ತೆಲಂಗಾಣ ಸಿಎಂಒ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಅಪಘಾತದ ಸಂಪೂರ್ಣ ವಿವರಗಳನ್ನು ಕಾಲಕಾಲಕ್ಕೆ ತಿಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಸ್ ಅಪಘಾತದಲ್ಲಿ ಗಾಯಗೊಂಡ ಎಲ್ಲರನ್ನು ತಕ್ಷಣ ಹೈದರಾಬಾದ್ಗೆ ಸ್ಥಳಾಂತರಿಸಲು ಮತ್ತು ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲು ಸಿಎಸ್ ಮತ್ತು ಡಿಜಿಪಿಗೆ ಆದೇಶಿಸಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಈ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.





