ಬಿಹಾರದಲ್ಲಿ ಬುಧವಾರ ರಾತ್ರಿ ಈಶಾನ್ಯ ಎಕ್ಸ್ಪ್ರೆಸ್ ರೈಲು ಹಳಿತಪ್ಪಿದ್ದು, ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಸುಮಾರು 100 ಜನರು ಗಾಯಗೊಂಡಿದ್ದಾರೆ.
ದೆಹಲಿಯಿಂದ ಹೊರಟಿದ್ದ ರೈಲು ಅಸ್ಸಾಂನ ಗುವಾಹಟಿ ಬಳಿಯ ಕಾಮಾಖ್ಯಕ್ಕೆ ತೆರಳುತ್ತಿತ್ತು. ಈ ವೇಳೆ, ರಾತ್ರಿ 9.35ರ ಸುಮಾರಿಗೆ ಬಿಹಾರದ ಬಕ್ಸರ್ ಬಳಿಯ ರಘುನಾಥಪುರ ನಿಲ್ದಾಣದ ಸಮೀಪ ದುರ್ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಸ್ಪಂದನಾ ಪಡೆಗಳ ತಂಡಗಳು ಘಟನಾ ಸ್ಥಳಕ್ಕೆ ಧಾವಿಸಿವೆ. ರೈಲಿನಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಗಾಯಾಳುಗಳನ್ನು ಪಾಟ್ನಾದ ಏಮ್ಸ್ಗೆ ಕರೆದೊಯ್ಯಲಾಗಿದೆ” ಎಂದು ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ತಿಳಿಸಿದ್ದಾರೆ.
“ಪರಿಹಾರ ಮತ್ತು ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲು ವಿಪತ್ತು ನಿರ್ವಹಣಾ ಇಲಾಖೆ, ಆರೋಗ್ಯ ಇಲಾಖೆ ಮತ್ತು ಬಕ್ಸರ್ ಮತ್ತು ಭೋಜ್ಪುರದ ಜಿಲ್ಲಾ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ” ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ.
“ಸೂಕ್ತ ತನಿಖೆಯ ನಂತರವಷ್ಟೇ ರೈಲು ಹಳಿ ತಪ್ಪಲು ಕಾರಣ ತಿಳಿಯಲಿದೆ. ಸದ್ಯ ಟ್ರ್ಯಾಕ್ಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಅಪಘಾತಕ್ಕೀಡಾಗಿರುವ ರೈಲನ್ನು ತೆರವುಗೊಳಿಸುವವರೆಗೆ, ಈ ಮಾರ್ಗದಲ್ಲಿ ಚಲಿಸುವ ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗುವುದು” ಎಂದು ಪೂರ್ವ ಮಧ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ತರುಣ್ ಪ್ರಕಾಶ್ ತಿಳಿಸಿದ್ದಾರೆ.
ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ, 21 ಮಾರ್ಗಗಳನ್ನು ಬದಲಾಯಿಸಲಾಗಿದೆ.
ರದ್ದಾದ ರೈಲುಗಳು: ಕಾಶಿ ಪಾಟ್ನಾ ಜನ ಶತಾಬ್ದಿ ಎಕ್ಸ್ಪ್ರೆಸ್ (15125) ಮತ್ತು ಪಾಟ್ನಾ ಕಾಶಿ ಜನ ಶತಾಬ್ದಿ ಎಕ್ಸ್ಪ್ರೆಸ್ (15126).
ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುತ್ತಿರುವ ರೈಲುಗಳು: ಪುಣೆ-ದಾನಪುರ್ ಎಸ್ಎಫ್ ಎಕ್ಸ್ಪ್ರೆಸ್ (12149), ಪಾಟಲಿಪುತ್ರ ಎಸ್ಎಫ್ ಎಕ್ಸ್ಪ್ರೆಸ್ (12141), ದಿಬ್ರುಗಢ ರಾಜಧಾನಿ ಎಕ್ಸ್ಪ್ರೆಸ್ (12424), ವಿಕ್ರಮಶಿಲಾ ಎಕ್ಸ್ಪ್ರೆಸ್ (12368), ಕಾಮಾಖ್ಯ ಎಕ್ಸ್ಪ್ರೆಸ್ (15623), ಗುವಾಹಟಿ-ರಾಜೇಂದ್ರ ನಗರ ಟರ್ಮಿನಲ್ ತೇಜಸ್ ರಾಜಧಾನಿ ಎಕ್ಸ್ಪ್ರೆಸ್ (12310), ಭಾಗಲ್ಪುರ್ ಗರೀಬ್ ರಥ ಎಕ್ಸ್ಪ್ರೆಸ್ (22406).




