ಲಿಂಗತ್ವ ಅಲ್ಪಸಂಖ್ಯಾತರ ಮಸೂದೆ ತಿದ್ದುಪಡಿ ವಿರುದ್ಧ ಸದ್ಯ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರು ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಈ ಮಸೂದೆ ವಿರುದ್ದ ಪ್ರತಿಭಟನೆಗಳು ನಡೆದಿವೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒ’ಬ್ರೇನ್, ಸಿಪಿಐಎಂ ಸೇರಿದಂತೆ ಹಲವು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಮಸೂದೆಯನ್ನು ಟೀಕಿಸಿರುವ ಡೆರೆಕ್ ಒ’ಬ್ರೇನ್ ಇದು ಕ್ರೂರವಾದ ಮಸೂದೆ ಎಂದು ಕರೆದಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರದಿಂದ ಇದಕ್ಕಿಂತ ಹೆಚ್ಚು ಏನೂ ನಿರೀಕ್ಷಿಸಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಡೆರೆಕ್ ಒ’ಬ್ರೇನ್, “ಲಿಂಗತ್ವ ಅಲ್ಪಸಂಖ್ಯಾತರ ಮಸೂದೆ 2026 ಅನ್ನು ಸಂಸತ್ತಿನಲ್ಲಿ ಗುಟ್ಟಾಗಿ ಪರಿಚಯಿಸಲಾಗಿದ್ದು, ಇದು ಕ್ರೂರವಾದ ಮಸೂದೆ. ಸಂಸತ್ತನ್ನು ಅಪಹಾಸ್ಯ ಮಾಡುವ ಸಂಶಯಾಸ್ಪದ ದಾಖಲೆಯನ್ನು ಹೊಂದಿರುವ ಸರ್ಕಾರದಿಂದ ಇದಕ್ಕಿಂತ ಉತ್ತಮವಾದದ್ದನ್ನು ನಿರೀಕ್ಷಿಸಲಾಗದು” ಎಂದು ಹೇಳಿದ್ದಾರೆ.
“20 ವರ್ಷಗಳ ಹಿಂದೆ 10ರಲ್ಲಿ 6 ಮಸೂದೆಗಳನ್ನು ಪರಿಶೀಲನೆಗಾಗಿ ಸಮಿತಿಗಳಿಗೆ ಕಳುಹಿಸಲಾಗುತ್ತಿತ್ತು. ಈಗ 10ರಲ್ಲಿ 2 ಮಸೂದೆಗಳನ್ನು ಮಾತ್ರ ಪರಿಶೀಲಿಸಲಾಗಿದೆ” ಎಂದೂ ಉಲ್ಲೇಖಿಸಿದ್ದಾರೆ.
ಇದನ್ನು ಓದಿದ್ದೀರಾ? ಪ್ರೀಮಿಯಂ ಲೇಖನ |LGBTQA+ ಕೊಡುಗೆ ಅಗಾಧ: ನಾವು ಕಣ್ಣು ತೆರೆದು ನೋಡಬೇಕಷ್ಟೇ!
ಇನ್ನು ಸಿಪಿಐಎಂ ಪೊಲಿಟ್ಬ್ಯುರೊ ಮಸೂದೆಯನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿದೆ. ಈ ತಿದ್ದುಪಡಿಗಳು ಸುಪ್ರೀಂ ಕೋರ್ಟ್ನ NALSA ತೀರ್ಪನ್ನು ಉಲ್ಲಂಘಿಸುತ್ತವೆ ಎಂದು ಸಿಪಿಐಎಂ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಕೇಂದ್ರ ಸರ್ಕಾರವು ಪ್ರಸ್ತಾವಿಸಿರುವ ‘ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ 2026’ ರ ವಿರುದ್ಧ ದೇಶಾದ್ಯಂತ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರರು ಮತ್ತು ಮಾನವ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ತಿದ್ದುಪಡಿಯು ಲಿಂಗತ್ವ ಅಲ್ಪಸಂಖ್ಯಾತರ ಮೂಲಭೂತ ಹಕ್ಕುಗಳನ್ನು ಈ ಮಸೂದೆ ಕಸಿಯುತ್ತದೆ, ಈ ಮಸೂದೆ ಸಂವಿಧಾನಬಾಹಿರ ಎಂದು ಹೋರಾಟಗಾರರು ದೂರಿದ್ದಾರೆ.
ಈ ಮಸೂದೆ ಏನು ಹೇಳುತ್ತದೆ, ಆಕ್ರೋಶವೇಕೆ?
2019ರ ಮೂಲಕ ಕಾಯ್ದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಿ ಕೇಂದ್ರ ಸರ್ಕಾರವು ಮಾರ್ಚ್ 13ರಂದು ಲೋಕಸಭೆಯಲ್ಲಿ ಮಂಡಿಸಿರುವ ಲಿಂಗತ್ವ ಅಲ್ಪಸಂಖ್ಯಾತರ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆ 2026 ಅನ್ನು ಮಂಡಿಸಿದೆ. 2019ರ ಕಾಯ್ದೆಯ ಸೆಕ್ಷನ್ 4(2) ಅಡಿಯಲ್ಲಿ ಒಬ್ಬ ವ್ಯಕ್ತಿಯು ತನ್ನ ಲಿಂಗವನ್ನು ಸ್ವತಃ ಗುರುತಿಸಿಕೊಳ್ಳುವ ಹಕ್ಕು ಇದೆ. ಆದರೆ ಈ ಹಕ್ಕನ್ನು ತಿದ್ದುಪಡಿ ಮಸೂದೆಯಲ್ಲಿ ತೆಗೆದುಹಾಕಲಾಗಿದೆ.
ಈ ತಿದ್ದುಪಡಿ ಪ್ರಕಾರ ‘ಲಿಂಗತ್ವ ಅಲ್ಪಸಂಖ್ಯಾತರು’ ಎಂದರೆ ಕೇವಲ ಜೈವಿಕ ವ್ಯತ್ಯಾಸಗಳು ಉಳ್ಳವರು ಮತ್ತು ಹಿಜ್ರಾ, ಕಿನ್ನರ್, ಅರವಾಣಿ, ಜೋಗತಿ ಮೊದಲಾದ ನಿರ್ದಿಷ್ಟ ಸಮುದಾಯಗಳಿಗೆ ಸೇರಿದವರು. ಅಂದರೆ ಈ ಸಮುದಾಯಕ್ಕೆ ಸೇರಿಲ್ಲದಿದ್ದರೆ ವ್ಯಕ್ತಿ ಲಿಂಗತ್ವ ಅಲ್ಪಸಂಖ್ಯಾತರಾಗಿದ್ದರೂ ಯಾವುದೇ ಹಕ್ಕುಗಳು ಇರುವುದಿಲ್ಲ. ಹಾಗೆಯೇ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ, ಲಿಂಗತ್ವ ಅಲ್ಪಸಂಖ್ಯಾತ ಪುರುಷ, ಜೆಂಡರ್ ಕ್ವೀರ್ ಎಂಬ ಮೊದಲಾದ ವ್ಯಕ್ತಿಗಳನ್ನು ಈ ‘ಲಿಂಗತ್ವ ಅಲ್ಪಸಂಖ್ಯಾತರು’ ಎಂಬ ವ್ಯಾಖ್ಯಾನದಿಂದ ಹೊರಗಿಡಲಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇದನ್ನು ಓದಿದ್ದೀರಾ? ಮಧ್ಯಪ್ರದೇಶ | 25 ಲಿಂಗತ್ವ ಅಲ್ಪಸಂಖ್ಯಾತರು ‘ಫಿನೈಲ್’ ಸೇವಿಸಿ ಸಾಮೂಹಿಕ ಆತ್ಮಹತ್ಯೆಗೆ ಯತ್ನ; ಆಸ್ಪತ್ರೆಗೆ ದಾಖಲು
ಹಾಗೆಯೇ ಗುರುತಿನ ಚೀಟಿ ಪಡೆಯಬೇಕಾದರೆ ಇನ್ನು ಮುಂದೆ ಮುಖ್ಯ ವೈದ್ಯಕೀಯ ಅಧಿಕಾರಿ (CMO) ನೇತೃತ್ವದ ವೈದ್ಯಕೀಯ ಮಂಡಳಿಯ ಶಿಫಾರಸನ್ನು ಮೊದಲು ಜಿಲ್ಲಾಧಿಕಾರಿಗಳು ಪರಿಶೀಲಿಸುವುದು ಕಡ್ಡಾಯವಾಗಿದೆ. ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ (SRS) ಮಾಡಿಸಿಕೊಂಡವರು ಕಡ್ಡಾಯವಾಗಿ ಪರಿಷ್ಕೃತ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಆಸ್ಪತ್ರೆಗಳು ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡಬೇಕಾಗಿದೆ.
ಆದರೆ ಸುಪ್ರೀಂ ಕೋರ್ಟ್ನ ಐತಿಹಾಸಿಕ ‘ನಾಲ್ಸಾ’ (NALSA) ತೀರ್ಪಿನ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಲಿಂಗವನ್ನು ಸ್ವತಃ ಗುರುತಿಸಿಕೊಳ್ಳುವ ಹಕ್ಕು ಹೊಂದಿರುತ್ತಾರೆ. ಆದರೆ ಈ ತಿದ್ದುಪಡಿಗಳ ಪ್ರಕಾರ ತಾನು ಲಿಂಗತ್ವ ಅಲ್ಪಸಂಖ್ಯಾತರು ಎಂದು ಸಾಬೀತುಪಡಿಸಲು ವೈದ್ಯಕೀಯ ತಪಾಸಣೆ ಅಥವಾ ಶಸ್ತ್ರಚಿಕಿತ್ಸೆಯ ಪುರಾವೆಗಳನ್ನು ನೀಡಬೇಕು. ಇದು ಹಕ್ಕಿನ ಉಲ್ಲಂಘನೆಯೆಂದು ಹೋರಾಟಗಾರರು ಹೇಳಿದ್ದಾರೆ.
ಅಷ್ಟು ಮಾತ್ರವಲ್ಲದೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಬೇಕು ಎಂಬುದು ದೀರ್ಘಕಾಲದ ಬೇಡಿಕೆ. ತಿದ್ದುಪಡಿ ಮಸೂದೆಯಲ್ಲಿ ಇದರ ಬಗ್ಗೆ ದೃಢವಾದ ಕ್ರಮಗಳಿಲ್ಲದಿರುವುದು ಅಸಮಾಧಾನ ಮೂಡಿಸಿದೆ. ಈ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ರಾಷ್ಟ್ರೀಯ ಲಿಂಗತ್ವ, ಲಿಂಗತ್ವ ಅಲ್ಪಸಂಖ್ಯಾತರ ಒಕ್ಕೂಟ ಸೇರಿದಂತೆ ಅನೇಕ ಸಂಘಟನೆಗಳು ಬೆಂಗಳೂರು ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿವೆ.





