ಜಾಗತಿಕ ಮತ್ತು ರಾಷ್ಟ್ರೀಯ ಭದ್ರತಾ ಬೆದರಿಕೆಗಳ ವೇಗವಾಗಿ ಹೆಚ್ಚುತ್ತಿವೆ. ಭವಿಷ್ಯವು ಅಸ್ಥಿರತೆ, ಅನಿಶ್ಚಿತತೆ, ಸಂಕೀರ್ಣತೆ ಹಾಗೂ ಅಸ್ಪಷ್ಟತೆಯಿಂದ ಗುರುತಿಸಲ್ಪಟ್ಟಿದೆ ಎಂದು ಭಾರತೀಯ ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.
ಮಧ್ಯಪ್ರದೇಶದ ರೇವಾದಲ್ಲಿರುವ ಟಿಆರ್ಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. “ಭವಿಷ್ಯದ ಸವಾಲುಗಳು ವೇಗವಾಗಿ ಬರುತ್ತಿವೆ. ನೀವು ಮತ್ತು ನಾನು ನಮ್ಮ ಭವಿಷ್ಯದ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ಟ್ರಂಪ್ ಇಂದು ಏನು ಮಾಡುತ್ತಿದ್ದಾರೆ? ಸ್ವತಃ ಟ್ರಂಪ್ ಅವರಿಗೇ ತಾವು ನಾಳೆ ಏನು ಮಾಡುತ್ತೇನೆಂಬುದು ತಿಳಿದಿಲ್ಲ” ಎಂದು ಅವರು ಹೇಳಿದ್ದಾರೆ.
“ಬೆದರಿಕೆಗಳು ಹೊರಹೊಮ್ಮುತ್ತಿರುವ ವೇಗವು ಎಷ್ಟು ಬಿರುಸಾಗಿದೆಯೆಂದರೆ, ನೀವು ಹಳೆಯ ಸವಾಲನ್ನು ಗ್ರಹಿಸಲು ಪ್ರಯತ್ನಿಸುವ ಹೊತ್ತಿಗೆ, ಹೊಸ ಸವಾಲು ಎದುರಾಗಿರುತ್ತದೆ. ಯುದ್ಧದ ಸ್ವರೂಪವು ವಿಕಸನಗೊಳ್ಳುತ್ತಲೇ ಇರುವುದರಿಂದ ಎಲ್ಲ ಭೂಪ್ರದೇಶಗಳು, ಭೂಮಿ, ಆಕಾಶ ಹಾಗೂ ನೀರಿನಾದ್ಯಂತ ಸನ್ನದ್ಧತೆಯ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಮೂರ್ತಿ ಮಹಾಶಯರೇ, ದುರ್ಬಲ ಜಾತಿಗಳಿಗೆ ಮೀಸಲಾತಿಯಲ್ಲಿ ಮಾತ್ರ ಮೆರಿಟ್ ನೆನಪಾಗುವುದೇ?
“ಗಡಿ ಉದ್ವಿಗ್ನತೆ ಮತ್ತು ಭಯೋತ್ಪಾದನೆಯಿಂದ ಹಿಡಿದು ನೈಸರ್ಗಿಕ ವಿಕೋಪಗಳು ಹಾಗೂ ಸೈಬರ್ ಯುದ್ಧದವರೆಗೆ ಭಾರತೀಯ ಸೇನೆಯು ವ್ಯಾಪಕ ಬೆದರಿಕೆಗಳನ್ನು ಎದುರಿಸುತ್ತಿದೆ. ಬಾಹ್ಯಾಕಾಶ ಯುದ್ಧ, ಉಪಗ್ರಹ ದುರ್ಬಲತೆಗಳು, ರಾಸಾಯನಿಕ, ಜೈವಿಕ, ವಿಕಿರಣಶಾಸ್ತ್ರ ಹಾಗೂ ಮಾಹಿತಿ ಯುದ್ಧ ಸೇರಿದಂತೆ ಸಂಘರ್ಷವು ಹೊಸ ಕ್ಷೇತ್ರಗಳಲ್ಲಿಯೂ ಹೊರಹೊಮ್ಮುತ್ತಿದೆ” ಎಂದು ಅವರು ಹೇಳಿದ್ದಾರೆ.
“ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಮಯದಲ್ಲಿ ಹಲವಾರು ಸುಳ್ಳು ಸುದ್ದಿಗಳು-ವದಂತಿಗಳು ಹೊರಬಂದವು. ನಾಗರಿಕರನ್ನು ಕೊಂದಿದ್ದೇವೆಂದು ನಕಲಿ ಸುದ್ದಿಗಳು ಹರಿದಾಡಿದವು. ನಾವು ಭಯೋತ್ಪಾದಕರ ನೆಲೆಗಳ ಮೇಲೆ ಮಾತ್ರವೇ ದಾಳಿ ಮಾಡಿದ್ದೇವೆ. ನಾವು ಮುಗ್ಧ ನಾಗರಿಕರು ಅಥವಾ ರಕ್ಷಣಾ ಸ್ಥಾಪನೆಗಳನ್ನು ಗುರಿಯಾಗಿಸಿಕೊಳ್ಳಲಿಲ್ಲ. ಆಪರೇಷನ್ ಸಿಂಧೂರದಲ್ಲಿ ನಾವು ನಮ್ಮ ಗುರಿಯನ್ನು ಸಾಧಿಸಿದ್ದೇವೆ” ಎಂದು ಹೇಳಿದ್ದಾರೆ.




