ತಮಿಳು ಸಿನಿಮಾ ‘ಪರಾಶಕ್ತಿ’ಯಲ್ಲಿ ಐತಿಹಾಸಿಕ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಕೆ ಕಾಮರಾಜ್ ಸೇರಿದಂತೆ ಕಾಂಗ್ರೆಸ್ ನಾಯಕರ ಕುರಿತು ಮಾನಹಾನಿಕರ ಚಿತ್ರಣ ನೀಡಲಾಗಿದೆ ಎಂದು ತಮಿಳುನಾಡು ಯುವ ಕಾಂಗ್ರೆಸ್ ಆರೋಪಿಸಿದೆ. ಸಿನಿಮಾವನ್ನು ನಿಷೇಧಿಸುವಂತೆ ತಮಿಳು ಸರ್ಕಾರವನ್ನು ಆಗ್ರಹಿಸಿದೆ.
ಸಿನಿಮಾದಲ್ಲಿ ಕಟ್ಟುಕಥೆಯನ್ನು ಬಿತ್ತರಿಸಲಾಗಿದೆ. ಅಂತಹ ದೃಶ್ಯಗಳನ್ನು ತೆಗೆದುಹಾಕಬೇಕು. ಚಲನಚಿತ್ರ ನಿರ್ಮಾಪಕರು ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಒಂದು ವೇಳೆ, ಚಿತ್ರತಂಡ ತಮ್ಮ ಬೇಡಿಕೆಗಳನ್ನು ಪರಿಗಣಿಸದಿದ್ದರೆ, ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಪಕ್ಷವು ಎಚ್ಚರಿಕೆ ನೀಡಿದೆ.
ಕಾಂಗ್ರೆಸ್ ವಕ್ತಾರ ಎಂ ಕುಮಾರಮಂಗಲಂ ಅವರು ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಅರುಣ್ ಭಾಸ್ಕರ್ ಅವರ ಹೇಳಿಕೆಯನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ಹೇಳಿಕೆಯಲ್ಲಿ ಅರುಣ್ ಭಾಸ್ಕರ್ ಅವರು ‘ಪರಾಶಕ್ತಿ’ ಸಿನಿಮಾವನ್ನು ಕಡ್ಡಾಯವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.
“ಚಿತ್ರದಲ್ಲಿ ಶಿವಕಾರ್ತಿಕೇಯನ್ ಅವರ ಪಾತ್ರವು ಇಂದಿರಾ ಗಾಂಧಿಯನ್ನು ಭೇಟಿಯಾಗುವ ಕಾಲ್ಪನಿಕ ದೃಶ್ಯವನ್ನು ಚಿತ್ರಿಸುತ್ತದೆ. ಆ ಸಂದರ್ಭದಲ್ಲಿ,ಇಂದಿರಾ ಗಾಂಧಿ ಅವರನ್ನು ‘ಖಳನಾಯಕಿ’ ರೀತಿಯಲ್ಲಿ ಚಿತ್ರಿಸಲಾಗಿದೆ. ಸಿನಿಮಾವನ್ನು ನಿರ್ಮಿಸಿದ ಮೂರ್ಖರ ತಂಡವು, ಇತಿಹಾಸದಲ್ಲಿ ಎಂದಿಗೂ ಸಂಭವಿಸದ ಘಟನೆಗಳನ್ನು ಸೃಷ್ಟಿಸಿದೆ. ರಾಷ್ಟ್ರೀಯ ನಾಯಕರಿಗೆ ಸಂಬಂಧಿಸಿದಂತೆ ಇತಿಹಾಸದಲ್ಲಿ ಘಟಿಸದ ಸಂದರ್ಭಗಳನ್ನು ಕಾಲ್ಪನಿಕವಾಗಿ ಚಿತ್ರಿಸಲು ಕಾನೂನು ಅನುಮತಿಸುವುದಿಲ್ಲ ಎಂಬ ವಿಚಾರವೂ ಈ ತಂಡಕ್ಕೆ ತಿಳಿದಿಲ್ಲ. ಅವರು ಯಾವುದೇ ಐತಿಹಾಸಿಕ ಆಧಾರವಿಲ್ಲದ ದೃಶ್ಯಗಳನ್ನು ಅಜಾಗರೂಕತೆಯಿಂದ ರಚಿಸಿದ್ದಾರೆ” ಎಂದು ಅರುಣ್ ಭಾಸ್ಕರ್ ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ನೇರವಾಗಿ ಅಖಾಡಕ್ಕಿಳಿದ ಮಮತಾ ಬ್ಯಾನರ್ಜಿ
“ಪರಾಶಕ್ತಿ ಸಿನಿಮಾದಲ್ಲಿ ಇತಿಹಾಸದಲ್ಲಿ ಎಂದಿಗೂ ಸಂಭವಿಸದ ಘಟನೆಗಳನ್ನು ಚಿತ್ರಿಸಲಾಗಿರುವ ಎಲ್ಲ ದೃಶ್ಯಗಳನ್ನು ತಕ್ಷಣವೇ ತೆಗೆದುಹಾಕಬೇಕು. ಚಿತ್ರದ ನಿರ್ಮಾಣ ತಂಡವು ಸಾರ್ವಜನಿಕ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಚಲನಚಿತ್ರ ನಿರ್ಮಾಪಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಪರಾಶಕ್ತಿ ಸಿನಿಮಾವನ್ನು ಸುಧಾ ಕೊಂಗರ ನಿರ್ದೇಶಿಸಿದ್ದಾರೆ. ಸಿನಿಮಾವು 1965ರಲ್ಲಿ ತಮಿಳುನಾಡಿನಲ್ಲಿ ನಡೆದಿದ್ದ ಹಿಂದಿ ವಿರೋಧಿ ಪ್ರತಿಭಟನೆಗಳ ಆಧಾರಿತ ಸಿನಿಮಾವಾಗಿದೆ. ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿ ಸುಮಾರ 25 ದೃಶ್ಯಗಳ ತಿದ್ದುಪಡಿಗಳನ್ನು ಸೂಚಿಸಿತ್ತು. ಅವುಗಳನ್ನು ಬದಲಿಸಿದ ಬಳಿಕ, ಜನವರಿ 10ರಂದು ಬಿಡುಗಡೆಯಾಯಿತು. 25 ತಿದ್ದುಪಡಿಗಳ ನಂತರವೂ ಸಿನಿಮಾ ಇನ್ನೂ ವಿವಾದಕ್ಕೆ ಸಿಲುಕಿದೆ.




