ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳಾಗಿದ್ದ ಜಿ.ಕುಮಾರ್ ನಾಯಕ್ ಹಾಗೂ ಸಸಿಕಾಂತ್ ಸೆಂಥಿಲ್ ಇಬ್ಬರು ಮಾಜಿ ಐಎಎಸ್ ಅಧಿಕಾರಿಗಳು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ.
ಮಾಜಿ ಐಎಎಸ್ ಅಧಿಕಾರಿಗಳಾಗಿದ್ದ ಸಸಿಕಾಂತ್ ಸೆಂಥಿಲ್ ತಮಿಳುನಾಡಿನ ತಿರುವಳ್ಳೂರ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದರೆ, ಜಿ.ಕುಮಾರ್ ನಾಯಕ್ ರಾಯಚೂರು ಕ್ಷೇತ್ರದ ಕಣದಲ್ಲಿದ್ದರು. ವಿಶೇಷವೆಂದರೆ ಇಬ್ಬರೂ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಜಯ ಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಬಾಲಗಣಪತಿ ಅವರನ್ನು ಬರೋಬ್ಬರಿ 5,72,155 ಮತಗಳ ಅಂತರದಲ್ಲಿ ಸೋಲಿಸಿದ ಸಸಿಕಾಂತ್ ಸೆಂಥಿಲ್ 7,96,956 ಮತಗಳನ್ನು ಪಡೆದಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಕಣದಲ್ಲಿದ್ದ ಜಿ.ಕುಮಾರ್ ನಾಯಕ್ ಅವರು ಬಿಜೆಪಿಯ ರಾಜಾ ಅಮರೇಶ್ವರ ನಾಯಕ್ ವಿರುದ್ಧ 79,781 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
2009ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಸೆಂಥಿಲ್, 2017ರ ಅಕ್ಟೋಬರ್ 10ರಿಂದ 2019ರ ಸೆಪ್ಟೆಂಬರ್ 6ರವರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿದ್ದರು.
“ದೇಶದ ಬಹುತ್ವದ ಏಳಿಗೆಗೆ ಭವಿಷ್ಯದಲ್ಲಿ ಹೆಚ್ಚು ಅಪಾಯ ಇದ್ದಂತೆ ಕಾಣುತ್ತಿದೆ. ಭಾರತೀಯ ಆಡಳಿತ ಸೇವೆಯಿಂದ ಹೊರಗಿರುವುದು ಲೇಸು ಎನಿಸುತ್ತಿದೆ. ಸೇವೆಯಿಂದ ಹೊರಗಿದ್ದು, ಜನರ ಒಳಿತಿಗಾಗಿ ದುಡಿಯುತ್ತೇನೆ” ಎಂದು ಪತ್ರದಲ್ಲಿ ಬರೆದು ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು.
1990ರ ಕರ್ನಾಟಕ ಕೇಡರ್ ಅಧಿಕಾರಿಯಾಗಿರುವ ಜಿ.ಕುಮಾರ ನಾಯಕ ಅವರು ಜಿಲ್ಲಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಸಸಿಕಾಂತ ಸೆಂಥಿಲ್ ಅವರು ಜಿಲ್ಲಾಧಿಕಾರಿ ಹುದ್ದೆಗೆ ಸ್ವಯಂ ರಾಜೀನಾಮೆ ಘೋಷಿಸಿದ ಬಳಿಕ 2021ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಾರ್ ರೂಂ ಮುಖ್ಯಸ್ಥರಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದರು.
ಜಿ.ಕುಮಾರ ನಾಯಕ್ ಅವರು 1992 ರಿಂದ 2002 ವರಗೆ ರಾಯಚೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.ನಿವೃತ್ತಿ ನಂತರ ಕಾಂಗ್ರೆಸ್ ಸೇರಿ ರಾಜಕಾರಣದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಯಚೂರು ಎಸ್.ಟಿ. ಮೀಸಲು ಕ್ಷೇತ್ರದಿಂದ ಕಣಕ್ಕಿಳಿದು ಗೆಲುವಿನ ನಗೆ ಬೀರಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿ ಪ್ರಮಾಣ ವಚನ ಸ್ವೀಕಾರ ಒಂದು ದಿನ ಮುಂದಕ್ಕೆ: ಜೂ. 9 ಕ್ಕೆ ನಿಗದಿ
ಈ ಹಿಂದೆ ಇಬ್ಬರು ಅಧಿಕಾರಿಗಳು ಜಿಲ್ಲಾಧಿಕಾರಿಗಳಾಗಿ ಜನರ ಮಧ್ಯೆ ಸೇವೆ ಸಲ್ಲಿಸಿದವರು. ಇದೀಗ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದಾರೆ. ಮತ್ತೆ ಜನರ ನಡುವೆ ಸೇವೆ ಸಲ್ಲಿಸುವ ಉತ್ತಮ ಅವಕಾಶ ಒಲಿದಿದೆ.





