“2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಮಾಡುವ ರಾಜಕೀಯ ಮುಖಂಡರ ಗುರಿಯಲ್ಲಿ ಚರ್ಚೆ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸಲು ಹೆಚ್ಚಿನ ಅವಕಾಶ ಇರಬೇಕು. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ UAPA ದುರ್ಬಳಕೆ ಮಾಡುವುದು ವಿಕಸಿತ ಭಾರತ ಮಾದರಿಯಲ್ಲ, ಶೋಭೆ ತರಲ್ಲ” ಎಂದು ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಉಜ್ಜಲ್ ಭುಯಾನ್ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೋಶಾ ಸರ್ಕಾರಕ್ಕೆ ನೇರವಾಗಿ ತಪರಾಕಿ ಹಾಕಿದರು.
ಬೆಂಗಳೂರಿನಲ್ಲಿ ನಡೆದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ನ ಮೊದಲ ರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಭುಯಾನ್, “ಚರ್ಚೆ ಮತ್ತು ಭಿನ್ನಾಭಿಪ್ರಾಯವನ್ನು ಅಪರಾಧ ಎಂದು ಪರಿಗಣಿಸದೆ ಇರಬೇಕು. ಜಾತಿ ಆಧಾರಿತ ತಾರತಮ್ಯ ಮತ್ತು ದಲಿತರ ಮೇಲಿನ ದೌರ್ಜನ್ಯಗಳೆಂಬ ಆಳವಾದ ಸಾಮಾಜಿಕ ದೋಷ ರೇಖೆಗಳನ್ನು ಅಳಿಸಬೇಕು” ಎಂದರು.
ಇದನ್ನು ಓದಿದ್ದೀರಾ? ‘ಉಮರ್ ಖಾಲಿದ್ ಬಂಧನ ಅಕ್ರಮ’ ವಿಶ್ವಸಂಸ್ಥೆಯ ಅಂಗಸಂಸ್ಥೆ: ಐದು ವರ್ಷದಿಂದ ಜೈಲಿನಲ್ಲಿರುವ ಹೋರಾಟಗಾರ
“ಯುಎಪಿಎ ಅಡಿ ವಿವೇಚನೆಯಿಲ್ಲದೆ ಬಂಧನ ಮಾಡುವುದು ವಿಕಸಿತ ಭಾರತದ ಮಾದರಿಯಲ್ಲ. ನನ್ನ ಪ್ರಕಾರ ವಿಕಸಿತ ಭಾರತದ ಮಾದರಿ ಸಂಪತ್ತಿನ ಸಮಾನ ವಿತರಣೆ ಮತ್ತು ತೀವ್ರ ಅಸಮಾನತೆಯ ವಿನಾಶ. ಇದು ಸಂವಿಧಾನದಲ್ಲಿ ರಾಜ್ಯ ನೀತಿಗಳ ನಿರ್ದೇಶನ ತತ್ವಗಳೂ ಆಗಿದೆ” ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
“ವಿಕಸಿತ ಭಾರತದಲ್ಲಿ ನ್ಯಾಯಾಂಗವು ನ್ಯಾಯಾಂಗವಾಗಿ ಉಳಿಯಬೇಕು. ಅದು ವಿಮರ್ಶಕರಾಗಲು ಅಥವಾ ಚಿಯರ್ಲೀಡರ್ ಆಗಲು ಸಾಧ್ಯವಿಲ್ಲ” ಎಂದರು.
ಈ ಸಂದರ್ಭದಲ್ಲೇ 2019ರಿಂದ 2023ರವರೆಗೆ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟವರ ಡೇಟಾವನ್ನು ಪ್ರಸ್ತುತ ಪಡಿಸಿದರು. “ಈ ಅವಧಿಯಲ್ಲಿ ಸಾವಿರಾರು ಜನರನ್ನು ಬಂಧಿಸಲಾಗಿದೆ. ಆದರೆ ಸರಾಸರಿ ಶಿಕ್ಷೆಯ ಪ್ರಮಾಣ ಶೇ.5ರ ಆಸುಪಾಸಿನಲ್ಲಿದೆ. ಇದು ಸೂಚಿಸುವುದೇನು? ದುರುಪಯೋಗ ಅಲ್ಲದಿದ್ದರೂ ಯುಎಪಿಎ ಅತಿಯಾದ ಬಳಕೆ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆ ಮೇಲೆ ಪರಿಣಾಮವಿದೆ. ಇದು ನ್ಯಾಯಾಲಯಗಳ ಮೇಲೆ ಎಷ್ಟು ಹೊರೆ ಹಾಕುತ್ತದೆ? ಇದು ಬಹುಪಾಲು ಜನರನ್ನು ಬಂಧಿಸಲಾಗಿದೆ. ಆದರೆ ಶಿಕ್ಷೆ ವಿಧಿಸಲು ಸಾಧ್ಯವಾಗಲಿಲ್ಲ” ಎಂದರು.

“ಯುಎಪಿಎ ಅಡಿಯಲ್ಲಿ ಅನೇಕ ಬಾರಿ ಅಕಾಲಿಕವಾಗಿ ಬಂಧಿಸಲಾಗಿದೆ. ಸಾಕಷ್ಟು ಪುರಾವೆಗಳು ಇಲ್ಲದೆಯೇ ಬಂಧಿಸಲಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. ಯುಎಪಿಎ ಅಡಿಯಲ್ಲಿ ಸಾಮಾನ್ಯವಾಗಿ 5% ಅಥವಾ ಅದಕ್ಕಿಂತ ಕಡಿಮೆ ಶಿಕ್ಷೆಯ ಪ್ರಮಾಣವಿದೆ. 95%ಕ್ಕಿಂತ ಹೆಚ್ಚು ಮಂದಿ ಖುಲಾಸೆಗೊಂಡಿದ್ದಾರೆ. ಆರೋಪಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸದೆಯೇ ಆತನನ್ನು ಏಕೆ ಜೈಲಿನಲ್ಲಿ ಇಡಬೇಕು” ಎಂದು ಪ್ರಶ್ನಿಸಿದರು. ಹಾಗೆಯೇ “ಇದು ವಿಕಸಿತ ಭಾರತದ ಮಾದರಿಯಾಗಲು ಸಾಧ್ಯವಿಲ್ಲ” ಎಂದರು.
ಇದನ್ನು ಓದಿದ್ದೀರಾ? ಮೋದಿ – ಶಾ ಕುತಂತ್ರಕ್ಕೆ ಬಲಿಯಾದವರು ಯಾರ್ಯಾರು ಗೊತ್ತಾ?
ಇನ್ನು “ಪೋಷಕರು ತಮ್ಮ ಮಕ್ಕಳಿಗೆ ದಲಿತ ಮಹಿಳೆ ತಯಾರಿಸಿದ ಆಹಾರವನ್ನು ನೀಡಬಾರದು ಎಂದು ಒತ್ತಾಯಿಸುವಂತಿಲ್ಲ. ಅದು ವಿಕಸಿತ ಭಾರತದ ಮಾದರಿಯಾಗಲು ಸಾಧ್ಯವಿಲ್ಲ. ದಲಿತರನ್ನು ಕಾರಿಡಾರ್ನಲ್ಲಿ ನಿಲ್ಲಿಸಿ ಜನರು ಅವರ ಮೇಲೆ ಮೂತ್ರ ವಿಸರ್ಜಿಸುವಾಗ ನಾವು ವಿಕಸಿತ ಭಾರತವನ್ನು ಹೊಂದಲು ಸಾಧ್ಯವಿಲ್ಲ. ಇದು ಅಭಿವೃದ್ಧಿಯ ಮಾದರಿಯಾಗಲು ಸಾಧ್ಯವಿಲ್ಲ. ಮೊದಲು ನಾವು ವ್ಯಕ್ತಿಯ ಗೌರವವನ್ನು ರಕ್ಷಿಸಬೇಕು” ಎಂದು ಕೇಂದ್ರಕ್ಕೆ ತಿಳಿಸಿದರು.
ದೇಶದಲ್ಲಿ ಯುಎಪಿಎ ದುರುಪಯೋಗದ ಆತಂಕ
ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ಹಲವು ನಾಯಕರುಗಳು ಯುಎಪಿಎ ಅಡಿ ಬಂಧನಕ್ಕೆ ಒಳಗಾಗಿ ಕಳೆದ ಐದು ವರ್ಷಗಳಿಗೂ ಅಧಿಕ ಕಾಲದಿಂದ ಜೈಲಿನಲ್ಲಿದ್ದಾರೆ. ಜಾಮೀನು ಅರ್ಜಿಯನ್ನು ಪದೇ ಪದೇ ವಜಾಗೊಳಿಸಲಾಗಿದ್ದು, ವಿಚಾರಣೆ ನಡೆಸದೆಯೇ ಕಳೆದ ಐದು ವರ್ಷಗಳಿಗೂ ಅಧಿಕ ಸಮಯದಿಂದ ಜೈಲಿನಲ್ಲಿರಿಸಲಾಗಿದೆ. ಇತ್ತೀಚೆಗೆ ಈ ಬಂಧನ ಅಕ್ರಮ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ NWGAD ತಜ್ಞರು ಹೇಳಿದ್ದಾರೆ. ಉಮರ್ ಖಾಲಿದ್ ಬಂಧನವು ಸ್ವಾತಂತ್ರ್ಯದ ಹರಣ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವುದು, ಸಂಘಟಿತರಾಗುವುದು ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಅವರ ಹಕ್ಕುಗಳ ಹರಣವಾಗಿದೆ. ಕೂಡಲೇ ಉಮರ್ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು NWGAD ಒತ್ತಾಯಿಸಿದೆ.
ಇನ್ನು ಯುಎಪಿಎ ದುರುಪಯೋಗದ ಬಗ್ಗೆ ಈ ಹಿಂದೆಯೇ ಹಲವು ಬಾರಿ ಮಾನವ ಹಕ್ಕುಗಳ ಹೋರಾಟಗಾರರು, ಕಾನೂನು ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಪತ್ರಕರ್ತರು, ವಿದ್ಯಾರ್ಥಿ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರ ವಿರುದ್ಧ ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಬಳಸುತ್ತಿದೆ. ಅದರಲ್ಲೂ ಬಹುತೇಕವಾಗಿ ಕೇಂದ್ರದ ನಿಲುವನ್ನು ಪ್ರಶ್ನಿಸಿದರೆ, ಟೀಕಿಸಿದರೆ ಮೋಶಾ ಸರ್ಕಾರ ಯುಎಪಿಎ ಪ್ರಯೋಗ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಭೀಮಾ ಕೋರೆಗಾಂವ್ ಪ್ರಕರಣ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಈ ಕಾಯ್ದೆಯ ಬಳಕೆ ಅಧಿಕವಾಗಿ ಮಾಡಲಾಗಿದೆ.





