ದೇಶದಲ್ಲಿ ‘ಏಕರೂಪ ನಾಗರಿಕ ಸಂಹಿತೆ’ (UCC) ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಆದರೂ, 1937ರ ‘ಮುಸ್ಲಿಂ ಪರ್ಸನಲ್ ಲಾ’ (ಶರಿಯತ್ ಅಪ್ಲಿಕೇಶನ್ ಆಕ್ಟ್) ಅನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿದೆ. ಈ ವಿಚಾರವನ್ನು ಶಾಸಕಾಂಗದ (ಸಂಸತ್ತು) ವಿವೇಚನೆಗೆ ಬಿಡುವುದಾಗಿ ಹೇಳಿದೆ. ಯುಸಿಸಿ ಮತ್ತು ಮುಸ್ಲಿಂ ಪರ್ಸನಲ್ ಲಾ ಕುರಿತು ಕೋರ್ಟ್ ಹೇಳಿಕೆಗಳು ದೇಶದಲ್ಲಿ ಮತ್ತೆ ಮುಸ್ಲಿಂ ಮಹಿಳೆಯರ ಹಕ್ಕುಗಳು ಮತ್ತು ಏಕರೂಪ ನಾಗರಿಕ ಸಂಹಿತೆ ಕುರಿತ ಚರ್ಚೆಯನ್ನು ಮುನ್ನೆಲೆಗೆ ತಂದಿವೆ.
ತ್ರಿಸದಸ್ಯ ಪೀಠವು 1937ರ ಮುಸ್ಲಿಂ ಪರ್ಸನಲ್ ಲಾ (ಶರಿಯತ್ ಅಪ್ಲಿಕೇಶನ್ ಆಕ್ಟ್)ನಲ್ಲಿರುವ ಕೆಲವು ನಿಬಂಧನೆಗಳು ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ಆದ್ದರಿಂದ, ಕಾಯ್ದೆಯನ್ನು ರದ್ದುಗೊಳಿಸಬೇಕು. ಮುಸ್ಲಿಂ ಮಹಿಳೆಯರಿಗೆ ಉತ್ತರಾಧಿಕಾರ ಮತ್ತು ಆಸ್ತಿ ಹಕ್ಕುಗಳಲ್ಲಿ ಸಮಾನತೆ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣೆ ನಡೆಸಿದೆ. ‘ಈ ಕಾಯ್ದೆಯು ಮುಸ್ಲಿಂ ಮಹಿಳೆಯರ ವಿರುದ್ಧ ತೀವ್ರ ತಾರತಮ್ಯವನ್ನು ಉಂಟುಮಾಡುತ್ತದೆ’ ಎಂದು ನ್ಯಾಯಾಲಯ ಒಪ್ಪಿಕೊಂಡಿದೆ. ಆದರೆ, ಕಾಯ್ದೆಯನ್ನು ರದ್ದುಗೊಳಿಸಿದರೆ ಕಾನೂನು ಶೂನ್ಯತೆ ಉಂಟಾಗುತ್ತದೆ ಎಂದೂ ಹೇಳಿದ ಕೋರ್ಟ್, ‘ಇದಕ್ಕೆ ಏಕರೂಪ ನಾಗರಿಕ ಸಂಹಿತೆಯೇ ಏಕೈಕ ಪರಿಹಾರ ಎಂದಿದೆ.
1937ರ ಮುಸ್ಲಿಂ ಪರ್ಸನಲ್ ಲಾ (ಶರಿಯತ್ ಅಪ್ಲಿಕೇಶನ್ ಆಕ್ಟ್) ಬ್ರಿಟಿಷ್ ಭಾರತದಲ್ಲಿ ಜಾರಿಗೆ ಬಂದ ಕಾನೂನು. ಇದು ಮುಸ್ಲಿಂ ಸಮುದಾಯದ ವೈಯಕ್ತಿಕ ವಿಷಯಗಳನ್ನು ಒಳಗೊಂಡಿದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ, ಆಸ್ತಿ ಹಂಚಿಕೆ ಹಾಗೂ ದತ್ತುಸ್ವೀಕಾರದಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಅನ್ವಯಿಸುವಂತೆ ಮಾಡುತ್ತದೆ.
ಈ ಕಾಯ್ದೆಯ ಪ್ರಕಾರ, ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳಿಗಿಂತ ಎರಡರಷ್ಟು ಆಸ್ತಿ ದೊರೆಯುತ್ತದೆ. ಇದು, ಸಂವಿಧಾನದ 14 ಮತ್ತು 15ನೇ ವಿಧಿಯ ಅಡಿಯಲ್ಲಿ ನೀಡಲಾಗಿರುವ ಸಮಾನತೆ ಮತ್ತು ಲಿಂಗ ಆಧಾರಿತ ತಾರತಮ್ಯ ನಿಷೇಧವನ್ನು ಉಲ್ಲಂಘಿಸುತ್ತದೆ. ಅಂತೆಯೇ, ಕಾಯ್ದೆಯು ಕೃಷಿ ಭೂಮಿಯಲ್ಲಿ ವಿನಾಯಿತಿ ನೀಡುವುದರಿಂದ, ಗ್ರಾಮೀಣ ಭಾಗದ ಮುಸ್ಲಿಂ ಮಹಿಳೆಯರು ಆಸ್ತಿಯಿಂದ ವಂಚಿತರಾಗುತ್ತಾರೆ. ಅಲ್ಲದೆ, ವಿಚ್ಛೇದನದಲ್ಲಿ (ತಲಾಖ್) ಮಹಿಳೆಯರಿಗೆ ಕಡಿಮೆ ಹಕ್ಕುಗಳು ಮತ್ತು ಮಹರ್ ವಿಚಾರದಲ್ಲಿಯೂ ಮಹಿಳೆಯರಿಗೆ ಅಸಮಾನತೆ ಉಂಟುಮಾಡುತ್ತದೆ.
ಆದ್ದರಿಂದಲೇ, ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, “ಶರಿಯತ್ ಕಾಯ್ದೆಯ ಸೆಕ್ಷನ್ 2ನ್ನು ಸಂವಿಧಾನದ ವಿರುದ್ಧವೆಂದು ಘೋಷಿಸಬೇಕು. ಸಂವಿಧಾನದ 14ನೇ ವಿಧಿಯಡಿ ಮುಸ್ಲಿಂ ಮಹಿಳೆಯರಿಗೆ ಪುರುಷರಂತೆ ಸಮಾನ ಉತ್ತರಾಧಿಕಾರ ಹಕ್ಕು ನೀಡಬೇಕು. ಕಾಯ್ದೆಯನ್ನು ರದ್ದುಗೊಳಿಸಿದರೆ ಇಂಡಿಯನ್ ಸಕ್ಸೆಷನ್ ಆಕ್ಟ್ (1925) ಅನ್ವಯವಾಗುತ್ತದೆ. ಇದು ಲಿಂಗ ಆಧಾರಿತ ತಾರತಮ್ಯವನ್ನು ನಿಷೇಧಿಸುತ್ತದೆ” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಆದರೆ. ಕಾಯ್ದೆಯನ್ನು ರದ್ದುಗೊಳಿಸಲು ಕೋರ್ಟ್ ಸಮ್ಮತಿಸಲಿಲ್ಲ. ಸಿಜೆಐ ಸೂರ್ಯ ಕಾಂತ್ ಅವರು, “ಕಾಯ್ದೆಯನ್ನು ರದ್ದು ಮಾಡಿದರೆ ಶೂನ್ಯಸ್ಥಿತಿ ಉಂಟಾಗುತ್ತದೆ. ಯಾವ ಕಾನೂನು ಅನ್ವಯವಾಗುತ್ತದೆ” ಎಂದು ಪ್ರಶ್ನಿಸಿದರು. ನ್ಯಾಯಮೂರ್ತಿ ಜೋಯ್ಮಲ್ಯಾ ಬಗ್ಚಿ ಅವರು, “ಇದು ತಾರತಮ್ಯದ ಕುರಿತಾದ ಉತ್ತಮ ಪ್ರಕರಣ. ಆದರೆ ಇದನ್ನು ಶಾಸಕಾಂಗದ ವಿವೇಚನೆಗೆ ಬಿಡುವುದು ಸೂಕ್ತ. ಸಂವಿಧಾನದ ರಾಜ್ಯ ನಿರ್ದೇಶಕ ತತ್ವಗಳ ಪ್ರಕಾರ UCCಅನ್ನು ಜಾರಿಗೊಳಿಸುವುದು ಶಾಸಕಾಂಗದ ಜವಾಬ್ದಾರಿ” ಎಂದರು.
“ನ್ಯಾಯಾಲಯವು ತನ್ನ ಅಧಿಕಾರವನ್ನು ಮೀರದೆ, ಸಾಮಾಜಿಕ ಸುಧಾರಣೆಗಳನ್ನು ಶಾಸಕಾಂಗಕ್ಕೆ ಬಿಡುವುದು ಸೂಕ್ತ. ನಾವು ಸುಧಾರಣೆಯ ಆತುರದಲ್ಲಿ ಮಹಿಳೆಯರನ್ನು ಇನ್ನಷ್ಟು ಹಕ್ಕುಗಳಿಂದ ವಂಚಿತಗೊಳಿಸಬಹುದು” ಎಂದು ಪೀಠವು ಅಭಿಪ್ರಾಯ ಪಟ್ಟಿದೆ.
ಈ ಲೇಖನ ಓದಿದ್ದೀರಾ?: ಇರಾನ್ ಯುದ್ಧ | ಜಗತ್ತು ತೈಲ ಬಿಕ್ಕಟ್ಟು ಎದುರಿಸುತ್ತಿದ್ದರೆ, ಚೀನಾ ನೆಮ್ಮದಿಯಾಗಿದೆ; ಕಾರಣವೇನು?
ಆದಾಗ್ಯೂ, ಏಕರೂಪ ನಾಗರಿಕ ಸಂಹಿತೆ (UCC) ಕುರಿತು ನ್ಯಾಯಾಲಯದ ಪ್ರಸ್ತಾಪವು ಯುಸಿಸಿ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಸಂವಿಧಾನದ 44ನೇ ಅನುಚ್ಛೇದದಲ್ಲಿ UCCಯನ್ನು ನಿರ್ದೇಶಕ ತತ್ವವಾಗಿ ಉಲ್ಲೇಖಿಸಲಾಗಿದೆ. “ಇದು ಎಲ್ಲ ಧರ್ಮಗಳಿಗೆ ಸಾಮಾನ್ಯ ನಾಗರಿಕ ಕಾನೂನುಗಳನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಸೂಚಿಸುತ್ತದೆ. ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತುಸ್ವೀಕಾರದಂತಹ ವಿಷಯಗಳಲ್ಲಿ ಧರ್ಮ-ನಿರಪೇಕ್ಷ ಕಾನೂನುಗಳನ್ನು ಜಾರಿಗೊಳಿಸುತ್ತದೆ. ಇದರಿಂದ ಮಹಿಳೆಯರ ಹಕ್ಕುಗಳು ರಕ್ಷಣೆಯಾಗುತ್ತವೆ” ಎಂಬುದು ಸುಪ್ರೀಂ ಕೋರ್ಟ್ನ ನಿಲುವು.
ಆದರೆ, ಯುಸಿಸಿ ಜಾರಿಯು ಬಿಜೆಪಿಯ ಅಜೆಂಡಾಗಳ ಭಾಗವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜಾರಿಗೊಳಿಸಲು ಯೋಜಿಸಿರುವ ಯುಸಿಸಿ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಉಲ್ಲಂಘಿಸುತ್ತದೆ. ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಹಿಂದು ರಾಷ್ಟ್ರವಾದ ಹೇರಿಕೆಯೂ ಢಾಳಾಗಿದೆ ಎಂಬ ಆರೋಪಗಳು ಮತ್ತು ವಿರೋಧಗಳೂ ಇವೆ.
ಮಾತ್ರವಲ್ಲದೆ, ಯುಸಿಸಿಯಲ್ಲಿ ಬಿಜೆಪಿ ಸರ್ಕಾರವು ಹಿಂದು ಆಚರಣೆ, ಸಂಸ್ಕೃತಿಯನ್ನು ಒಳಗೊಂಡ ಕಾನೂನುಗಳನ್ನು ತುಂಬಿಸಿದೆ. ಈಗಾಗಲೇ, ಉತ್ತರಾಖಂಡದಲ್ಲಿ ಜಾರಿಯಲ್ಲಿರುವ ಯುಸಿಸಿಯಲ್ಲಿ ಹಿಂದು ಅವಿಭಕ್ತ ಕುಟುಂಬಗಳಿಗೆ ತೆರಿಗೆ ವಿನಾಯಿತಿ ಸೌಲಭ್ಯಗಳನ್ನು ಮುಂದುವರೆಸಲಾಗಿದೆ. ಆದರೆ, ಮುಸ್ಲಿಂ ಮತ್ತು ಆದಿವಾಸಿ ಸಮುದಾಯಗಳಿಗೆ ತೆರಿಗೆ ವಿನಾಯಿತಿ ನೀಡದೆ ವಂಚಿಸಲಾಗಿದೆ. ಆದ್ದರಿಂದ, ಮುಸ್ಲಿಂ ಮಹಿಳೆಯರಿಗೆ ಸಮಾನತೆ ನೀಡಲು ಯುಸಿಸಿ ನಿರ್ಣಾಯಕವಲ್ಲ ಎಂಬ ಅಭಿಪ್ರಾಯಗಳೂ ದಟ್ಟವಾಗಿವೆ.




