ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಉನ್ನತ ಅಧ್ಯಯನ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ನಿಗ್ರಹಕ್ಕೆ ಹೊಸ ಅಧಿಸೂಚನೆಗಳನ್ನು ಹೊರಡಿಸಿದೆ. ಈ ನಿಯಮದ ಪ್ರಕಾರ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ತಾರತಮ್ಯದ ದೂರುಗಳನ್ನು ಪರಿಶೀಲಿಸಲು ‘ಇಕ್ವಿಟಿ ಸಮಿತಿಗಳನ್ನು’ ರಚಿಸುವುದನ್ನು ಕಡ್ಡಾಯವಾಗಿದೆ. ಹೊಸ ಯುಜಿಸಿ ನಿಯಮಗಳ ಪ್ರಕಾರ ಈ ಸಮತಿಯಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿಗಳು), ಪರಿಶಿಷ್ಟ ಜಾತಿಗಳು (ಎಸ್ಸಿಗಳು), ಪರಿಶಿಷ್ಟ ಪಂಗಡಗಳು (ಎಸ್ಟಿಗಳು), ಅಂಗವಿಕಲರು ಮತ್ತು ಮಹಿಳೆಯರನ್ನು ಒಳಗೊಂಡಿರಬೇಕು.
ಜಾತಿ ತಾರತಮ್ಯಕ್ಕೆ ಒಳಗಾಗಿ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಾದ ಬಳಿಕ 2012ರ ಯುಜಿಸಿ ನಿಯಮಗಳ ಅನುಷ್ಠಾನವನ್ನು ಪ್ರಶ್ನಿಸಿ ರೋಹಿತ್ ವೇಮುಲಾ ಮತ್ತು ಪಾಯಲ್ ತಡ್ವಿ ಅವರ ತಾಯಂದಿರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಹೊಸ ನಿಯಮಗಳನ್ನು ಜಾರಿಗೊಳಿಸುವಂತೆ ಯುಜಿಸಿಗೆ ಹೇಳಿತ್ತು. ಸುಪ್ರೀಂ ಸೂಚನೆಯಂತೆ ಕಳೆದ ವರ್ಷ ಫೆಬ್ರವರಿಯಲ್ಲಿ ಈ ನಿಯಮಗಳ ಕರಡನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನು ಓದಿದ್ದೀರಾ? ಜಾತಿ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ್ದ ಹರಿಯಾಣ ದಲಿತ ಐಪಿಎಸ್ ಅಧಿಕಾರಿ ಶವವಾಗಿ ಪತ್ತೆ: ಆತ್ಮಹತ್ಯೆ ಶಂಕೆ
ಆದರೆ ‘ತಾರತಮ್ಯ’ದ ವ್ಯಾಖ್ಯಾನ ಸೇರಿದಂತೆ ಕರಡಿನ ವಿಭಾಗಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಗುಂಪುಗಳು ಆಕ್ಷೇಪಣೆಗಳನ್ನು ಎತ್ತಿದ್ದವು. ಅಖಿಲ ಭಾರತ ಒಬಿಸಿ ವಿದ್ಯಾರ್ಥಿ ಸಂಘವು ಕರಡಿನಲ್ಲಿ ಸಮಾನತಾ ಸಮಿತಿಗಳಲ್ಲಿ ಮತ್ತು ‘ಜಾತಿ ತಾರತಮ್ಯ’ದ ವ್ಯಾಖ್ಯಾನದಲ್ಲಿ ಒಬಿಸಿಗಳನ್ನು ಹೊರಗಿಡಬಾರದು ಎಂದು ಹೇಳಿತ್ತು. ಭಾಷೆ ಮತ್ತು ಜನಾಂಗೀಯತೆಯ ಆಧಾರದ ಮೇಲೆ ತಾರತಮ್ಯವನ್ನೂ ಸೇರಿಸಬೇಕು ಎಂಬ ಆಗ್ರಹಗಳು ಕೇಳಿಬಂದಿದ್ದವು. ಇದೀಗ ಕೆಲವು ತಿದ್ದುಪಡಿಗಳನ್ನು ಮಾಡಿ ಅಧಿಕೃತವಾಗಿ ನಿಯಮವನ್ನು ಜಾರಿಗೊಳಿಸಿದೆ.
ನಿಯಮಗಳಲ್ಲಿ ‘ಕಿರುಕುಳ’ ಮತ್ತು ‘ಸಂತ್ರಸ್ತ’ ಎಂಬ ಪದಗಳನ್ನು ಸಹ ವ್ಯಾಖ್ಯಾನಕ್ಕೆ ಸೇರಿಸಲಾಗಿದೆ. ನೂತನ ನಿಯಮಗಳ ಪ್ರಕಾರ, ತಾರತಮ್ಯ ನಡೆದ ಬಳಿಕ ಈಕ್ವಿಟಿ ಸಮಿತಿಯು 24 ಗಂಟೆಗಳ ಒಳಗೆ ಸಭೆ ಸೇರಿ ಕ್ರಮ ಕೈಗೊಳ್ಳಬೇಕು. 15 ಕೆಲಸದ ದಿನಗಳಲ್ಲಿ ಸಂಸ್ಥೆಗಳ ಮುಖ್ಯಸ್ಥರಿಗೆ ವರದಿಯನ್ನು ಸಲ್ಲಿಸಬೇಕು. ಸಂಸ್ಥೆಯ ಮುಖ್ಯಸ್ಥರು ಏಳು ದಿನಗಳಲ್ಲಿ ಮುಂದಿನ ಕ್ರಮ ಕೈಗೊಳ್ಳಬೇಕು. ಇನ್ನು ತಾರತಮ್ಯಕ್ಕೆ ಒಳಗಾದ ವ್ಯಕ್ತಿಯನ್ನು ಪ್ರತೀಕಾರದಿಂದ ರಕ್ಷಿಸುವುದು ಕೂಡಾ ನಿಯಮದಲ್ಲಿ ಸೇರಿದೆ. ಕ್ಯಾಂಪಸ್ನಲ್ಲಿ ಯಾವುದೇ ರೀತಿಯ ತಾರತಮ್ಯವನ್ನು ತಡೆಗಟ್ಟಲು ಈಕ್ವಿಟಿ ಸಹಾಯವಾಣಿ ಮತ್ತು ‘ಈಕ್ವಿಟಿ ಸ್ಕ್ವಾಡ್ಗಳನ್ನು’ ಸಹ ಹೊಂದಿರಬೇಕು ಎಂದು ನಿಯಮ ಹೇಳುತ್ತದೆ.
ನಿಯಮಗಳ ಅನುಷ್ಠಾನವನ್ನು ಮೇಲ್ವಿಚಾರಣೆ ನಡೆಸಲು ಮತ್ತು ತಾರತಮ್ಯದ ಸಮಸ್ಯೆಗಳನ್ನು ಪರಿಶೀಲಿಸಲು, ಅದನ್ನು ತಡೆಗಟ್ಟುವ ವಿಧಾನಗಳನ್ನು ಸೂಚಿಸಲು ಯುಜಿಸಿ ರಾಷ್ಟ್ರೀಯ ಮಟ್ಟದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲು ಸಹ ನೂತನ ನಿಯಮಗಳು ಅವಕಾಶ ನೀಡುತ್ತದೆ. ಒಂದು ಸಂಸ್ಥೆಯು ನಿಯಮಗಳನ್ನು ಪಾಲಿಸದಿದ್ದರೆ, ಕೇಂದ್ರ ಅನುದಾನ ಸೇರಿದಂತೆ ಯುಜಿಸಿ ಆಯೋಗದ ಯೋಜನೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಬಹುದು.





