ವಿದ್ಯಾರ್ಥಿ ನಾಯಕ, ಸಾಮಾಜಿಕ ಹೋರಾಟಗಾರ ಉಮರ್ ಖಾಲಿದ್ ಕಳೆದ ಐದು ವರ್ಷಗಳಿಗೂ ಅಧಿಕ ಕಾಲದಿಂದ ಜೈಲಿನಲ್ಲಿದ್ದಾರೆ. ಇದೀಗ ಉಮರ್ ಬಂಧನವು ವಿಶ್ವಸಂಸ್ಥೆ ಸ್ಥಾಪಿಸಿದ ನಾಲ್ಕು ವರ್ಗಗಳ ಅನಿಯಂತ್ರಿತ ಬಂಧನದ ಅಡಿಯಲ್ಲಿ ಅಕ್ರಮ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆ NWGAD ತಜ್ಞರು ಹೇಳಿದ್ದಾರೆ.
ಉಮರ್ ಖಾಲಿದ್ ಬಂಧನವು ಸ್ವಾತಂತ್ರ್ಯದ ಹರಣ. ಅಭಿವ್ಯಕ್ತಿ ಸ್ವಾತಂತ್ರ್ಯ, ಸಭೆ ಸೇರುವುದು, ಸಂಘಟಿತರಾಗುವುದು ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವ ಅವರ ಹಕ್ಕುಗಳ ಹರಣವಾಗಿದೆ ಎಂದು UNWGAD ತೀರ್ಮಾನಕ್ಕೆ ಬಂದಿದೆ.
ಇದನ್ನು ಓದಿದ್ದೀರಾ? ಉಮರ್ ಖಾಲಿದ್ ಸೆರೆವಾಸಕ್ಕೆ ಐದು ವರ್ಷಗಳು: ಮುಕ್ತಿ ಎಂದು?
ಮುಸ್ಲಿಮರನ್ನು ಭಾರತೀಯ ಪೌರತ್ವದಿಂದ ಹೊರಯಿಡಲು ರೂಪಿಸಿದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ರಾಷ್ಟ್ರವ್ಯಾಪಿ ಪ್ರತಿಭಟನೆಗಳಲ್ಲಿ ಪ್ರಮುಖ ಧ್ವನಿಯಾಗಿದ್ದವರು ಉಮರ್ ಖಾಲಿದ್ ಅವರನ್ನು 2020ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಬಂಧಿಸಲಾಗಿದೆ. ಖಾಲಿದ್ ಜಾಮೀನು ಅರ್ಜಿಯನ್ನು ಪದೇ ಪದೇ ವಜಾಗೊಳಿಸಲಾಗಿದ್ದು, ವಿಚಾರಣೆ ನಡೆಸದೆಯೇ ಕಳೆದ ಐದು ವರ್ಷಗಳಿಗೂ ಅಧಿಕ ಸಮಯದಿಂದ ಜೈಲಿನಲ್ಲಿರಿಸಲಾಗಿದೆ.
ಖಾಲಿದ್ ಬಂಧನಕ್ಕಾಗಿ ಹಲವು ಮಾನವ ಹಕ್ಕುಗಳ ಸಂಘಟನೆಗಳು ಹೋರಾಟ ನಡೆಸುತ್ತಿರುವ ನಡುವೆ ವಿಶ್ವಸಂಸ್ಥೆಯ ಅಂಗಸಂಸ್ಥೆಯು ಈ ಪ್ರಕರಣವನ್ನು ಪರಿಶೀಲಿಸಿದೆ. 2025ರ ಮಾರ್ಚ್ನಲ್ಲಿ ಮಾನವ ಹಕ್ಕುಗಳ ಪ್ರತಿಷ್ಠಾನ (HRF) ಖಾಲಿದ್ ಪರವಾಗಿ UNWGAD ಗೆ ಅರ್ಜಿ ಸಲ್ಲಿಸಿದೆ. ಬಂಧನವು ಕಾನೂನುಬದ್ಧವಾಗಿ ಆಧಾರರಹಿತ, ತಾರತಮ್ಯ ಮತ್ತು ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರಿದೆ ಎಂದು HRF ವಾದಿಸಿದೆ. ಈ ಅರ್ಜಿ ಪರಿಶೀಲಿಸಿದ UNWGAD ತಜ್ಞರು ಖಾಲಿದ್ ಬಂಧನ ಅಕ್ರಮ. ಖಾಲಿದ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಭಾರತ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ನನಗೂ 2020ರ ದೆಹಲಿ ಹಿಂಸಾಚಾರಕ್ಕೂ ಸಂಬಂಧವಿದೆ ಎಂಬುದಕ್ಕೆ ಪುರಾವೆಗಳಿಲ್ಲ: ಸುಪ್ರೀಂ ಕೋರ್ಟ್ಗೆ ತಿಳಿಸಿದ ಉಮರ್ ಖಾಲಿದ್
ಯುಎಪಿಎ ದುರುಪಯೋಗದ ಆತಂಕ
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ದುರುಪಯೋಗದ ಬಗ್ಗೆ ಈ ಹಿಂದೆಯೇ ಹಲವು ಬಾರಿ ಮಾನವ ಹಕ್ಕುಗಳ ಹೋರಾಟಗಾರರು, ಕಾನೂನು ತಜ್ಞರು ಮತ್ತು ರಾಜಕೀಯ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಮಾಹಿತಿಯ ಪ್ರಕಾರ, ಯುಎಪಿಎ ಅಡಿಯಲ್ಲಿ ಬಂಧಿತರಾದವರಲ್ಲಿ ಕೇವಲ 2% ರಿಂದ 3% ಜನರಿಗೆ ಮಾತ್ರ ಶಿಕ್ಷೆಯಾಗುತ್ತಿದೆ. ಅಂದರೆ ಬಹುತೇಕ ಪ್ರಕರಣಗಳಲ್ಲಿ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಾಗಿ ನಿರಪರಾಧಿಗಳೇ ಆಗಿರುತ್ತಾರೆ. ಆದರೂ ವರ್ಷಗಟ್ಟಲೆ ಜೈಲಿನಲ್ಲಿ ಕಳೆಯಬೇಕಾಗುತ್ತದೆ.
ಈ ಕಾಯ್ದೆಯ ಸೆಕ್ಷನ್ 43D(5) ಅಡಿಯಲ್ಲಿ ಆರೋಪದ ಬಗ್ಗೆ “ಮೇಲ್ನೋಟಕ್ಕೆ ಸತ್ಯಾಂಶವಿದೆ” ಎಂದು ನ್ಯಾಯಾಲಯ ಭಾವಿಸಿದರೆ ಜಾಮೀನು ನೀಡುವುದನ್ನು ನಿರ್ಬಂಧಿಸಲಾಗಿದೆ. ಇದು ವಿಚಾರಣೆ ಪೂರ್ಣಗೊಳ್ಳುವ ಮೊದಲೇ ದೀರ್ಘಕಾಲ ಜೈಲಿನಲ್ಲಿ ನಿರಪರಾಧಿಗಳೂ ಇರುವಂತಾಗಿದೆ. ಅದಕ್ಕೂ ಮುಖ್ಯವಾಗಿ ಪತ್ರಕರ್ತರು, ವಿದ್ಯಾರ್ಥಿ ನಾಯಕರು ಮತ್ತು ಸಾಮಾಜಿಕ ಕಾರ್ಯಕರ್ತರ ವಿರುದ್ಧ ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಬಳಸುತ್ತಿದೆ. ಈ ಮೂಲಕ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಉದಾಹರಣೆಗೆ, ಭೀಮಾ ಕೋರೆಗಾಂವ್ ಪ್ರಕರಣ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧದ ಪ್ರತಿಭಟನೆಗಳ ಸಂದರ್ಭದಲ್ಲಿ ಈ ಕಾಯ್ದೆಯ ಬಳಕೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.





