ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026-27ರ ಅರ್ಥಿಕ ವರ್ಷದ 53.5 ಲಕ್ಷ ಕೋಟಿ ರೂ.ಗಳ ಬಜೆಟ್ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ವಿವಿಧ ರಾಜ್ಯಗಳಿಗೆ ವಿಶೇಷ ಅನುದಾನಗಳನ್ನು ಘೋಷಿಸಿದ್ದಾರೆ. ಆದರೆ, ಕರ್ನಾಟಕಕ್ಕೆ ಯಥಾ ಪ್ರಕಾರ, ಯಾವುದೇ ವಿಶೇಷ ಯೋಜನೆ ಅಥವಾ ಅನುದಾನಗಳು ದೊರೆತಿಲ್ಲ. ಬದಲಾಗಿ, ದೇಶದಲ್ಲಿ ಜಾರಿಗೊಳಿಸಲು ರೂಪಿಸಲಾಗಿರುವ 6 ಹೈ-ಸ್ಪೀಡ್ ರೈಲು ಕಾರಿಡಾರ್ ಯೋಜನೆಯಡಿ ಕರ್ನಾಟಕಕ್ಕೂ ಯೋಜನೆ ಲಭ್ಯವಾಗಿದೆ.
“ಮುಂಬೈ-ಪುಣೆ, ಪುಣೆ-ಹೈದ್ರಾಬಾದ್, ದೆಹಲಿ-ವಾರಾಣಸಿ, ವಾರಾಣಸಿ-ಸಿಲಿಗುರಿ, ಚೆನ್ನೈ-ಬೆಂಗಳೂರು ಹೈ-ಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಜಾರಿಗೊಳಿಸಲಾಗುವುದು” ಎಂದು ವಿತ್ತ ಸಚಿವೆ ಘೋಷಿಸಿದ್ದಾರೆ. ಇದರಲ್ಲಿ, ಚೆನ್ನೈ-ಬೆಂಗಳೂರು ನಡುವಿನ ಹೈ-ಸ್ಪೀಡ್ ರೈಲು ಮಾತ್ರವೇ ರಾಜ್ಯಕ್ಕೆ ದೊರೆಯಲಿದೆ. ಉಳಿದಂತೆ, ಕರ್ನಾಟಕಕ್ಕೆ ಯಾವುದೇ ವಿಶೇಷ ಯೋಜನೆಗಳು ಅಥವಾ ಅನುದಾನವನ್ನು ಘೋಷಿಸಿಲ್ಲ.
ಆದಾಗ್ಯೂ, ದೇಶದ ಪ್ರತಿ ಜಿಲ್ಲೆಯಲ್ಲೂ ಒಂದೊಂದು ಬಾಲಕಿಯರ ಹಾಸ್ಟೆಲ್ ನಿರ್ಮಾಣ ಯೋಜನೆ, ಮಹಾತ್ಮಾ ಗಾಂಧಿ ಗ್ರಾಮ್ ಸ್ವರಾಜ್ ಯೋಜನೆ, ಎಂಎಸ್ಎಂಇಗೆ ಪ್ರೋತ್ಸಾಹದಂತಹ ಕೆಲವು ಯೋಜನೆಗಳಿಂದ ಒಂದಷ್ಟು ಅನುದಾನ ಕರ್ನಾಟಕಕ್ಕೆ ದೊರೆಯುವ ಸಾಧ್ಯತೆಗಳಿವೆ.




