ಇತಿಹಾಸ ಪ್ರಶ್ನೆಪತ್ರಿಕೆಯಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಉಗ್ರರು ಎಂದು ಉಲ್ಲೇಖಿಸಿರುವ ಪಶ್ಚಿಮ ಬಂಗಾಳದ ಸರ್ಕಾರಿ ವಿದ್ಯಾಸಾಗರ್ ವಿಶ್ವವಿದ್ಯಾಲಯ ವ್ಯಾಪಕ ಆಕ್ರೋಶಕ್ಕೆ ಗುರಿಆಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಉಗ್ರರು ಎಂದಿರುವ ವಿಶ್ವವಿದ್ಯಾಲಯ ಆಡಳಿತದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಜನರ ಆಕ್ರೋಶಕ್ಕೆ ತುತ್ತಾಗಿರುವ ವಿಶ್ವವಿದ್ಯಾಲಯವು ಕ್ಷಮೆಯಾಚಿಸಿದೆ.
ಸ್ನಾತಕೋತ್ತರ ಪದವಿಯ 6ನೇ ಸೆಮಿಸ್ಟರ್ನ ಇತಿಹಾಸ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ ವಿಶ್ವವಿದ್ಯಾಲಯವು ಈ ಯಡವಟ್ಟು ಮಾಡಿದೆ. ಪ್ರಶ್ನೆಪತ್ರಿಕೆಯ 12ನೇ ಪ್ರಶ್ನೆಯು; ‘ಬ್ರಿಟಿಷ್ ಆಡಳಿತದ ಸಮಯದಲ್ಲಿ ಉಗ್ರರಿಂದ ಹತರಾದ ಮಿಡ್ನಾಪುರ್ನ ಮೂವರು ಜಿಲ್ಲಾಧಿಕಾರಿಗಳನ್ನು ಹೆಸರಿಸಿ’ ಎಂದು ಹೇಳಲಾಗಿದೆ. ಇಲ್ಲಿ ಸ್ವಾತಂತ್ರ್ಯ ಹೋರಾಗಾರರಿಂದ ಹತರಾದ ಎಂದು ಉಲ್ಲೇಖಿಸುವ ಬದಲು ಉಗ್ರರಿಂದ ಎಂದು ಬರೆಯಲಾಗಿದೆ.
ಇದು ಕಣ್ತಪ್ಪಿನಿಂದ ಆಗಿರುವ ಯಡವಟ್ಟೋ ಅಥವಾ ದುರುದ್ದೇಶಪೂರಿತ ಕೃತ್ಯವೋ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ತನ್ನ ತಪ್ಪನ್ನು ಒಪ್ಪಿಕೊಂಡಿರುವ ವಿಶ್ವವಿದ್ಯಾಲಯವು, ‘ಇದು ಕರಡು ಪ್ರತಿ ಪರಿಶೀಲನೆಯ ವೇಳೆ ಆಗಿರುವ ಲೋಪ’ ಎಂದು ಸ್ಪಷ್ಟೀಕರಣ ನೀಡಿದೆ.
“ಇದು ಮುದ್ರಣ ದೋಷವಾಗಿದೆ. ಕರಡು ಪ್ರತಿ ಪರಿಶೀಲನೆಯ ವೇಳೆ ಸರಿಯಾಗಿ ಗಮನಿಸದೆ ಇರುವುದರಿಂದ ಪ್ರಮಾದ ನಡೆದಿದೆ” ಎಂದು ಉಪ ಕುಲಪತಿ ದೀಪಕ್ ಕಾರ್ ಹೇಳಿದ್ದಾರೆ.
ವಿಶ್ವವಿದ್ಯಾಲಯದ ಪ್ರಮಾದವನ್ನು ಖಂಡಿಸಿರುವ ಶಿಕ್ಷಣ ತಜ್ಞ ಪಬಿತ್ರ ಸರ್ಕಾರ್, “ಬ್ರಿಟಿಷರ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದ ಯುವಕರನ್ನು ಈ ಸ್ವತಂತ್ರ ಭಾರತದಲ್ಲಿಯೂ ‘ಉಗ್ರರು’ ಎಂದೇ ಉಲ್ಲೇಖಿಸುವುದು ಊಹಿಸಲೂ ಸಾಧ್ಯವಿಲ್ಲದ ಕೃತ್ಯ” ಎಂದಿದ್ದಾರೆ.




