ಉನ್ನಾಂವ್ ಅತ್ಯಾಚಾರ ಅಪರಾಧಿ, ಮಾಜಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ನ ಮಕ್ಕಳು ಮತ್ತು ಬೆಂಬಲಿಗರು ಸಾಮಾಜಿಕ ಜಾತಾಳದಲ್ಲಿ ನಮ್ಮ ಗುರುತನ್ನು ಬಹಿರಂಗಪಡಿಸಿದ್ದಾರೆ. ನಮ್ಮ ಸುರಕ್ಷತೆಗೆ ಅಪಾಯ ಉಂಟುಮಾಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಸಾರ್ವಜನಿಕ ಬೆಂಬಲಕ್ಕೆ ಮನವಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವ ಸಂತ್ರಸ್ತೆ, “ಕಳೆದ ಹಲವು ದಿನಗಳಿಂದ, ಕುಲದೀಪ್ ಸಿಂಗ್ ಸೆಂಗರ್ ಅವರ ಇಬ್ಬರು ಪುತ್ರಿಯರು ಮತ್ತು ಅವರ ಬೆಂಬಲಿಗರು ಫೇಸ್ಬುಕ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲೆಡೆ ನನ್ನ ಗುರುತನ್ನು ಬಹಿರಂಗಪಡಿಸುತ್ತಿದ್ದಾರೆ. ಇದು ನಮಗೆ ಭಯವನ್ನುಂಟುಮಾಡಿದೆ” ಎಂದು ಹೇಳಿದ್ದಾರೆ.
ಜಾತಿಯ ಗಡಿಗಳನ್ನು ಮೀರಿ ಎಲ್ಲರೂ ತಮ್ಮೊಂದಿಗೆ ನಿಲ್ಲಬೇಕೆಂದು ಸಂತ್ರಸ್ತೆ ಮನವಿ ಮಾಡಿದ್ದಾರೆ. “ನಾನು ಕೂಡ ಈ ದೇಶದ ಮಗಳು. ದಯವಿಟ್ಟು ನನ್ನ ಧ್ವನಿಯಾಗಿರಿ. ಅಪರಾಧಿಗೆ ಯಾವುದೇ ಜಾತಿ ಇಲ್ಲ” ಎಂದಿದ್ದಾರೆ.
VIDEO | Unnao rape victim alleged, "Kuldeep Singh Sengar’s two daughters and their supporters have, for the past few days, been exposing my identity on social media. I am seeing it everywhere, on Facebook, Instagram, everywhere."
— Press Trust of India (@PTI_News) January 10, 2026
(Full video available on PTI Videos -… pic.twitter.com/KPUTEKgubP
2017ರಲ್ಲಿ ಉತ್ತರ ಪ್ರದೇಶದ ಪ್ರಭಾವಿ ಶಾಸಕನಾಗಿದ್ದ ಸೆಂಗರ್, ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದರು. 2018ರ ಏಪ್ರಿಲ್ನಲ್ಲಿ ಸಂತ್ರಸ್ತೆ ಮತ್ತು ಆಕೆಯ ತಂದೆ ಉನ್ನಾಂವ್ ಪೊಲೀಸ್ ಠಾಣೆಯಲ್ಲಿ ಶಾಸಕನ ವಿರುದ್ಧ ದೂರು ದಾಖಲಿಸಿದರು. ಆದರೆ, ಪೊಲೀಸರು ಎಫ್ಐಆರ್ ದಾಖಲಿಸಲಿಲ್ಲ. ದೂರು ದಾಖಲಿಸಿದ ಕೆಲವೇ ಸಮಯದಲ್ಲಿ ಆರೋಪಿ ಸೆಂಗರ್ನ ಸಹೋದರ ಅತುಲ್ ಸಿಂಗ್ ಸಿಂಗರ್ ಮತ್ತು ಸಂಗಡಿಗರು ಸಂತ್ರಸ್ತೆಯ ತಂದೆ ಮೇಲೆ ದಾಳಿ ನಡೆಸಿದರು. ಅಮಾನುಷವಾಗಿ ಥಳಿಸಿದರು.
ಘಟನೆಯಿಂದ ಜರ್ಜರಿತರಾದ ಸಂತ್ರಸ್ತೆಯ ತಂದೆ, ಮುಖ್ಯಮಂತ್ರಿ ಸಿಎಂ ಯೋಗಿ ಆದಿತ್ಯನಾಥ್ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದರು. ಅವರ ಆತ್ಮಹತ್ಯೆಯ ಯತ್ನದ ಫಲವಾಗಿ, ಪ್ರಕರಣ ಬೆಳಕಿಗೆ ಬಂದಿತು. ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳದ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಯಿತು. ಪ್ರತಿಭಟನೆಗಳು ಭುಗಿಲೆದ್ದವು. ಪರಿಣಾಮ, ಪೊಲೀಸರು ಆರೋಪಿ ಸೆಂಗರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡರು. ಆದರೆ ಬಂಧಿಸಲಿಲ್ಲ.
ಆದರೆ, ಪ್ರಕರಣ ಬೆಳಕಿಗೆ ಬಂದ ಮರುದಿನವೇ, ಸಂತ್ರಸ್ತೆಯ ತಂದೆಯ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಾರೆಂಬ ಆರೋಪ ಹೊರಿಸಿ, ಪೊಲೀಸರು ಬಂಧಿಸಿದರು. ಏಪ್ರಿಲ್ 9ರಂದು ಪೊಲೀಸ್ ಕಸ್ಟಡಿಯಲ್ಲಿಯೇ ಸಂತ್ರಸ್ತೆಯ ತಂದೆ ಸಾವನ್ನಪ್ಪಿದರು. ಆದರೂ, ನ್ಯಾಯಕ್ಕಾಗಿನ ಹೋರಾಟದಿಂದ ಹಿಂಜರಿಯದ ಸಂತ್ರಸ್ತೆ, ಆರೋಪಿ ಸೆಂಗಾರ್ನನ್ನು ಬಂಧಿಸದ ಪೊಲೀಸರ ನಡೆಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರು. ಕೋರ್ಟ್ ಆದೇಶದಂತೆ ಸೆಂಗರ್ನನ್ನು ಬಂಧಿಸಲಾಯಿತು.
ಈ ನಡುವೆ, ಸಂತ್ರಸ್ತೆಯ ಹತ್ಯೆಗೂ ಮೂರು ಬಾರಿ ಪ್ರಯತ್ನಗಳು ನಡೆದವು. ಪ್ರಮುಖವಾಗಿ, 2019 ಜುಲೈ 28ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿ ಮನೆಗೆ ಮರಳುವಾಗ ಸಂತ್ರಸ್ತೆ, ಆಕೆಯ ಇಬ್ಬರು ಚಿಕ್ಕಮ್ಮಂದಿರು ಹಾಗೂ ವಕೀಲರು ಪ್ರಯಾಣಿಸುತ್ತಿದ್ದ ಕಾರಿಗೆ ಅಪಘಾತ ಮಾಡಿ, ಕೊಲೆ ಮಾಡಲು ಯತ್ನಿಸಲಾಯಿತು. ಘಟನೆಯಲ್ಲಿ ಸಂತ್ರಸ್ತೆ ಮತ್ತು ವಕೀಲರು ಬದುಕುಳಿದರೂ, ಇಬ್ಬರೂ ಚಿಕ್ಕಮ್ಮಂದಿರು ಸಾವನ್ನಪ್ಪಿದರು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆಗೆ ಸುಮಾರು 100ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿತ್ತು.
ಈ ಲೇಖನ ಓದಿದ್ದೀರಾ?: ಉನ್ನಾಂವ್ ಪ್ರಕರಣ : ಬಿಜೆಪಿಗೆ ಚಾಟಿಯೇಟು ಕೊಟ್ಟಿತೇ ಸಂತ್ರಸ್ತೆಯ ರಾಹುಲ್ ಭೇಟಿ?
ಅತ್ಯಾಚಾರ, ಸಂತ್ರಸ್ತೆ ತಂದೆಯ ಸಾವು, ಕಾರು ಅಪಘಾತ ಮಾಡಿ ಚಿಕ್ಕಮ್ಮಂದಿರ ಕೊಲೆ ಮತ್ತು ಸಂತ್ರಸ್ತೆಯ ಕೊಲೆಯತ್ನ ಪ್ರಕರಣಗಳನ್ನು ಸಿಬಿಐ ತನಿಖೆಗೆ ವರ್ಗಾಯಿಸಲಾಯಿತು. ಅಲ್ಲದೆ, ಸಂತ್ರಸ್ತೆ ಮತ್ತು ಆಕೆಯ ಕುಟುಂಬಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ ರಕ್ಷಣೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿತು. ಅಲ್ಲದೆ, ಪ್ರಕರಣದ ವಿಚಾರಣೆಯನ್ನು ಉತ್ತರ ಪ್ರದೇಶದ ಹೊರಗಿನ ನ್ಯಾಯಾಲಯದಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತು.
ಪ್ರಕರಣಗಳ ತನಿಖೆ ನಡೆಸಿದ ಸಿಬಿಐ ಚಾರ್ಜ್ಶೀಟ್ ಸಲ್ಲಿಸಿತು. ವಿಚಾರಣೆ ನಡೆಸಿದ ದೆಹಲಿಯ ತೀಸ್ ಹಜಾರಿ ಸೆಷನ್ಸ್ ನ್ಯಾಯಾಲಯವು, 2019ರಲ್ಲಿ ಸೆಂಗರ್ನನ್ನು ಅಪರಾಧಿ ಎಂದು ಘೋಷಿಸಿತು. ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಜೊತೆಗೆ, ಸಂತ್ರಸ್ತೆಯ ತಂದೆ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗರ್ನನ್ನು ಜವಾಬ್ದಾರನ್ನಾಗಿ ಮಾಡಿದ ನ್ಯಾಯಾಲಯವು 2020ರಲ್ಲಿ ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತು.
ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸೆಂಗರ್ ದೆಹಲಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಆತನ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಗೆ ತಡೆಯೊಡ್ಡಿದೆ. ಆತನ ಮೇಲ್ಮನವಿಯ ಅರ್ಜಿಗಳ ವಿಚಾರಣೆ ಪೂರ್ಣಗೊಳ್ಳುವವರೆಗೂ ಶಿಕ್ಷೆಯನ್ನು ಅಮಾನತಿನಲ್ಲಿರಿಸಿತು. ಆದಾಗ್ಯೂ, ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.




