ಬಾಂಗ್ಲಾದೇಶದಂತಹ ಪರಿಸ್ಥಿತಿ ಎದುರಾದರೆ, ಹೋರಾಡಲು ಎಲ್ಲ ಹಿಂದುಗಳು ಕತ್ತಿ ಹೊಂದಿರಬೇಕೆಂದು ಹಿಂದುತ್ವವಾದಿ ಸಂಘಟನೆ ‘ಹಿಂದು ರಕ್ಷಾ ದಳ’ದ ಕಾರ್ಯಕರ್ತರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಕತ್ತಿಗಳನ್ನು ವಿತರಣೆ ಮಾಡಿದ್ದಾರೆ. ಕತ್ತಿ ಹಂಚಿದ ಆರೋಪದಲ್ಲಿ ಆರು ಮಂದಿ ಹಿಂದುತ್ವವಾದಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗಾಜಿಯಾಬಾದ್ನ ಶಾಲಿಮಾರ್ ಗಾರ್ಡನ್ ಕಾಲೋನಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಕತ್ತಿಗಳನ್ನು ಹಿಂದುತ್ವ ಕೋಮುವಾದಿ ಕಾರ್ಯಕರ್ತರು ಹಂಚಿಕೆ ಮಾಡಿದ್ದಾರೆ. ಪ್ರಕರಣದಲ್ಲಿ ಹಿಂದು ರಕ್ಷಾ ದಳದ ಅಧ್ಯಕ್ಷ ಭೂಪೇಂದ್ರ ಚೌಧರಿ (ಪಿಂಕಿ) ಸೇರಿದಂತೆ 17 ಪದಾಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಭೂಪೇಂದ್ರ ಪರಾರಿಯಾಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ನಿಮಿಷ್ ಪಾಟೀಲ್ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಗಲಭೆಗೆ ಸಂಚು, ಮಾರಕಾಸ್ತ್ರ ಹೊಂದಿರುವುದುಕ್ಕೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ 191(2), 191(3), 127(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶಾಲಿಮಾರ್ ಗಾರ್ಡನ್ ಕಾಲೋನಿಯಲ್ಲಿ ಮೆರವಣಿಗೆ ನಡೆಸಿರುವ ಗುಂಪು, ಹಿಂದುತ್ವವಾಗಿ ಮತ್ತು ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲಿನ ಮನೆಗಳಿಗೆ ತೆರಳಿ ಶಸ್ತ್ರಾಸ್ತ್ರಗಳನ್ನು ವಿತರಿಸಿದ್ದಾರೆ. ಸಾಮರಸ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಕದಡಲು ಯಾವುದೇ ಸಂಘಟನೆಗಳಿಗೂ ಅವಕಾಶ ನೀಡುವುದಿಲ್ಲ. ಹೆಸರಿಸಲಾದ ಮತ್ತು ಹೆಸರಿಸದ ಎಲ್ಲ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಪಾಟೀಲ್ ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಉನ್ನಾಂವ್ ಅತ್ಯಾಚಾರ ಹಗರಣ: ಕುಲದೀಪ್ ಸೆಂಗರ್ನ ಹೀನಕೃತ್ಯ; ಬಿಜೆಪಿ ನೈತಿಕ ದಿವಾಳಿತನ
ಪ್ರಚೋದನಾಕಾರಿ ಹೇಳಿಕೆ ನೀಡಿರುವ ಭೂಪೇಂದ್ರ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ; “ಹಿಂದು ಕುಟುಂಬಗಳ ಮೇಲೆ ದಾಳಿ ಮಾಡುವ ಮತ್ತು ಹಿಂದು ಹುಡುಗಿಯರು ಮತ್ತು ಮಹಿಳೆಯರಿಗೆ ಕಿರುಕುಳ ನೀಡುವ ಮುಸ್ಲಿಮರನ್ನು ಎದುರಿಸಲು ಜನರಿಗೆ 250 ಶಸ್ತ್ರಾಸ್ತ್ರಗಳನ್ನು ವಿತರಿಸಲಾಗಿದೆ. ಮುಸ್ಲಿಮರ ವಿರುದ್ಧ ಹೋರಾಡಲು ಹಿಂದುಗಳು ಶಸ್ತ್ರಾಸ್ತ್ರಗಳನ್ನು ಹೊಂದಿರಬೇಕು. ಹಿಂದು ರಕ್ಷಾ ದಳವು ಹಿಂದು ಸಮುದಾಯಕ್ಕೆ ಸಹಾಯ ಮಾಡುತ್ತದೆ” ಎಂದು ಹೇಳಿರುವುದು ಕಂಡುಬಂದಿದೆ.
ಅಲ್ಲದೆ, “ಇತ್ತೀಚಿನ ದಿನಗಳಲ್ಲಿ, ಬಾಂಗ್ಲಾದೇಶದಲ್ಲಿ ಹಿಂದುಗಳ ಸ್ಥಿತಿ ತುಂಬಾ ಶೋಚನೀಯವಾಗಿದೆ. ಅಲ್ಲಿ ಹಿಂದುಗಳನ್ನು ಕೊಲ್ಲಲಾಗುತ್ತಿದೆ. ಬಾಂಗ್ಲಾದೇಶದ ಹಿಂದುಗಳಂತೆ ಭಾರತದ ಹಿಂದುಗಳ ಪರಿಸ್ಥಿತಿ ಆಗಲು ನಾವು ಬಿಡುವುದಿಲ್ಲ” ಎಂದು ಹೇಳಿರುವುದು ಕಾಣುತ್ತದೆ.




