ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಎಸ್ಐಆರ್ಗೆ ಸಂಬಂಧಿಸಿದ ಕೆಲಸದ ಒತ್ತಡದಿಂದ ಬಿಎಲ್ಒ(ಬೂತ್ ಮಟ್ಟದ ಅಧಿಕಾರಿ) ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಹಲವಾರು ಬಿಎಲ್ಒಗಳು ಕೆಲಸದ ಹೊರೆ ಮತ್ತು ಹಿರಿಯ ಅಧಿಕಾರಿಗಳ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಕೇರಳ, ಛತ್ತೀಸ್ಗಢ, ಗೋವಾ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡು ಸೇರಿದಂತೆ 12 ರಾಜ್ಯಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಮುಂದುವರಿದಿರುವುದರಿಂದ ಇದು ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ.
ಸರ್ವೇಶ್ ಸಿಂಗ್(46) ಆತ್ಮಹತ್ಯೆ ಮಾಡಿಕೊಂಡವರು. ಸಹಾಯಕ ಶಿಕ್ಷಕರಾಗಿದ್ದ ಸರ್ವೇಶ್ ಸಿಂಗ್ ಅವರನ್ನು ಅ.7ರಂದು ಬಿಎಲ್ಒ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇದು ಚುನಾವಣಾ ಸಂಬಂಧಿತ ಕರ್ತವ್ಯಕ್ಕೆ ಅವರ ಮೊದಲ ನಿಯೋಜನೆಯಾಗಿತ್ತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಕೊಟ್ಟ ಮಾತು’ ಗದ್ದಲ ಸೃಷ್ಟಿಸಿದ ಬಳಿಕ ಎಚ್ಚೆತ್ತ ಕಾಂಗ್ರೆಸ್
ಸರ್ವೇಶ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ರೆಕಾರ್ಡ್ ಮಾಡಿರುವ ವಿಡಿಯೊದಲ್ಲಿ, “ನಾನು ಕಷ್ಟಪಟ್ಟು ಕೆಲಸ ಮಾಡಿದರೂ ತನ್ನ ಕೆಲಸವನ್ನು ಮುಗಿಸಲು ಸಾಧ್ಯವಾಗಲಿಲ್ಲ. ನಾನು ಸಂಕಷ್ಟದಲ್ಲಿದ್ದೇನೆ. ಕಳೆದ 20 ದಿನಗಳಿಂದ ನನಗೆ ನಿದ್ರೆ ಬರುತ್ತಿಲ್ಲ. ಇತರರು ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಕಣ್ಣೀರು ಹಾಕುತ್ತಿರುವುದು ಮತ್ತು ನನಗೆ ನಾಲ್ಕು ಚಿಕ್ಕ ಹೆಣ್ಣು ಮಕ್ಕಳಿದ್ದಾರೆ ಅವರನ್ನು ನೋಡಿಕೊಳ್ಳುವಂತೆ ತಾಯಿ ಮತ್ತು ಸಹೋದರಿಯಲ್ಲಿ ಹೇಳುತ್ತಿರುವುದು ಕಂಡು ಬಂದಿದೆ.
ಅಧಿಕಾರಿಗಳ ಪ್ರಕಾರ ಭಾನುವಾರ ಮುಂಜಾನೆ ಸರ್ವೇಶ್ ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದ ಬಗ್ಗೆ ಪತ್ನಿ ಬಬ್ಲಿ ದೇವಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳದಲ್ಲಿ ಎರಡು ಪುಟಗಳ ಕೈಬರಹದ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ. ಸರ್ವೇಶ್ ಸಿಂಗ್ ಆತ್ಮಹತ್ಯೆಗೆ ಮೊದಲು ಪತ್ರವನ್ನು ಬರೆದಿರುವುದನ್ನು ಹಿರಿಯ ಪೊಲೀಸ್ ಅಧಿಕಾರಿ ಆಶಿಶ್ ಪ್ರತಾಪ್ ಸಿಂಗ್ ದೃಢಪಡಿಸಿದ್ದಾರೆ.





