ಉತ್ತರ ಪ್ರದೇಶ ಸರ್ಕಾರವು ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ವಿವಾದಿತ ಕ್ರಮ ಕೈಗೊಂಡಿದ್ದು, ಮಾನವನನ್ನು ಪ್ರಚೋದನೆಯಿಲ್ಲದೆ ಎರಡು ಬಾರಿ ಕಚ್ಚಿದ ನಾಯಿಗಳಿಗೆ ಜೀವನಪೂರ್ತಿ ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲೇ ಇರಿಸುವಂತೆ ಹೊಸ ಆದೇಶ ಹೊರಡಿಸಿದೆ.
ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಉತ್ತರ ಪ್ರದೇಶ ಸರ್ಕಾರವು ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಅದರ ಪ್ರಕಾರ ವ್ಯಕ್ತಿಯೊಬ್ಬನನ್ನು ಎರಡು ಬಾರಿ ಕಚ್ಚಿದ ಬೀದಿ ನಾಯಿಗೆ ಪ್ರಾಣಿ ಸಂರಕ್ಷಣಾ ಕೇಂದ್ರದಲ್ಲಿ ಇರಿಸಲಾಗುತ್ತದೆ.
ಸರ್ಕಾರದ ಈ ಹೊಸ ಆದೇಶವು ವಿವಾದಕ್ಕೆ ಕಾರಣವಾಗಿದ್ದು, ನಾಯಿಗಳ ಪರ ಕೆಲಸ ಮಾಡುವ ಪ್ರಾಣಿ ದಯಾ ಸಂಘಗಳು ಮತ್ತು ಪಶು ವೈದ್ಯಕೀಯ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.
ಸರ್ಕಾರದ ಈ ಆದೇಶವನ್ನು ಸೆ.10ರಂದು ಪ್ರಾಥಮಿಕ ಕಾರ್ಯದರ್ಶಿ ಅಮೃತ ಅಭಿಜಾತ್ ಅವರು ಎಲ್ಲ ಗ್ರಾಮೀಣ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಈ ನಿಯಮವನ್ನು ಜಾರಿಗೊಳಿಸಿದ್ದಾರೆ. ಇದರ ಅನುಸಾರ, ಬೀದಿ ನಾಯಿ ಒಮ್ಮೆ ಕಚ್ಚಿದರೆ ಅದನ್ನು ಸಮೀಪದ ಪ್ರಾಣಿ ಜನನ ನಿಯಂತ್ರಣ ಕೇಂದ್ರಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ, ನಾಯಿ ಈಗಾಗಲೇ ಸಂತಾನಹರಣ (ಸ್ಟೆರಿಲೈಸೇಷನ್) ಮಾಡಿಸದಿದ್ದರೆ ತಕ್ಷಣವೇ ಆ ಶಸ್ತ್ರಚಿಕಿತ್ಸೆ ನಡೆಯಲಿದೆ. ಬಳಿಕ 10 ದಿನಗಳ ಕಾಲ ಪ್ರತ್ಯೇಕವಾಗಿ ವೀಕ್ಷಣೆ ನಡೆಸಲಾಗುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ನ್ಯಾಯಾಲಯದ ವಿವೇಕದ ಮುಂದೆ ಬಯಲಾದ ಬಿಜೆಪಿ ನಾಯಕರ ಅವಿವೇಕ
ಪ್ರಯಾಗರಾಜ್ ಮಹಾನಗರ ಪಾಲಿಕೆಯ ಪಶುವೈದ್ಯಾಧಿಕಾರಿ ಡಾ. ವಿಜಯ್ ಅಮೃತ್ ರಾಜ್ ಹೇಳಿಕೆಯಂತೆ, “ಆ ಅವಧಿಯಲ್ಲಿ ನಾಯಿಯ ವರ್ತನೆ ದಾಖಲಿಸಲಾಗುತ್ತದೆ. ಬಳಿಕ ಅದನ್ನು ಮೈಕ್ರೋಚಿಪ್ ಅಳವಡಿಸಿ ಹಿಂದಿನ ಸ್ಥಳಕ್ಕೆ ಬಿಡುಗಡೆ ಮಾಡಲಾಗುತ್ತದೆ. ಮೈಕ್ರೋಚಿಪ್ನಲ್ಲಿ ನಾಯಿಯ ಎಲ್ಲ ವಿವರಗಳು ಹಾಗೂ ಅದರ ಸ್ಥಳವನ್ನು ಪತ್ತೆಹಚ್ಚುವ ಮಾಹಿತಿ ಲಭ್ಯವಿರುತ್ತದೆ” ಎಂದರು.
ಆದರೆ ಅದೇ ನಾಯಿ ಮತ್ತೆ ಒಮ್ಮೆ, ಪ್ರಚೋದನೆಯಿಲ್ಲದೆ, ಯಾರನ್ನಾದರೂ ಕಚ್ಚಿದರೆ, ಅದನ್ನು ಉಳಿದ ಜೀವನವಿಡೀ ಕೇಂದ್ರದಲ್ಲೇ ಇರಿಸಲಾಗುವುದು. ಪ್ರಚೋದನೆಯಿಲ್ಲದ ದಾಳಿ ಎಂದು ನಿರ್ಧರಿಸಲು ಮೂರು ಸದಸ್ಯರ ಸಮಿತಿ ರಚಿಸಲಾಗುತ್ತದೆ. ಪಶುವೈದ್ಯರು, ಪ್ರಾಣಿಗಳ ವರ್ತನೆಗೆ ಪರಿಚಯವಿರುವ ಒಬ್ಬ ತಜ್ಞರು ಹಾಗೂ ಮಹಾನಗರ ಪಾಲಿಕೆಯ ಪ್ರತಿನಿಧಿ ಸಮಿತಿಯಲ್ಲಿ ಇರಲಿದ್ದಾರೆ. ಯಾರಾದರೂ ಕಲ್ಲು ಎಸೆಯುವ ಸಂದರ್ಭ ಕಚ್ಚಿದರೆ ಅದನ್ನು ‘ಪ್ರಚೋದಿತ ದಾಳಿ’ ಎಂದು ಪರಿಗಣಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಇಂತಹ ನಾಯಿಗಳನ್ನು ದತ್ತು ಪಡೆಯುವ ಅವಕಾಶವಿದೆ. ಆದರೆ ದತ್ತು ಪಡೆದವರು ತಮ್ಮ ಹೆಸರು, ವಿಳಾಸ ಮುಂತಾದ ವಿವರಗಳ ಜೊತೆಗೆ ಪ್ರಮಾಣಪತ್ರ (ಅಫಿಡವಿಟ್) ಸಲ್ಲಿಸಬೇಕಾಗಿದೆ. ಆ ನಾಯಿ ಮತ್ತೆ ಬೀದಿಗೆ ಬಿಡಲಾಗುವುದಿಲ್ಲವೆಂದು ಭರವಸೆ ನೀಡಬೇಕಾಗುತ್ತದೆ. ಮೈಕ್ರೋಚಿಪ್ ಮಾಹಿತಿ ದಾಖಲಾಗಿ, ನಿಯಮ ಉಲ್ಲಂಘಿಸಿದರೆ ದತ್ತು ಪಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಉತ್ತರ ಪ್ರದೇಶ ಸರ್ಕಾರದ ಈ ಆದೇಶವು, ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿರುವ ಎಲ್ಲ ಬೀದಿ ನಾಯಿಗಳನ್ನು ಎಂಟು ವಾರಗಳೊಳಗೆ ಪತ್ತೆಹಚ್ಚಿ ಆಶ್ರಯ ಕೇಂದ್ರಗಳಿಗೆ ಸೇರಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಒಂದು ತಿಂಗಳ ನಂತರ ಆದೇಶ ಹೊರಡಿಸಲಾಗಿದೆ. ಆದಾಗ್ಯೂ, ಈ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ತನ್ನ ಆದೇಶವನ್ನು ಮಾರ್ಪಡಿಸಿತ್ತು. ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಲಸಿಕೆ ನೀಡಿ, ಅವುಗಳನ್ನು ಮತ್ತೆ ಅದೇ ಸ್ಥಳಕ್ಕೆ ಬಿಡಬೇಕು ಎಂದು ಸೂಚಿಸಿತು, ಆದರೆ ರೇಬೀಸ್ ಇರುವ ಅಥವಾ ಆಕ್ರಮಣಕಾರಿ ನಾಯಿಗಳನ್ನು ಇದಕ್ಕೆ ಹೊರತುಪಡಿಸಲಾಗಿತ್ತು.





