ಉತ್ತರಾಖಂಡದಲ್ಲಿ ಅದರಲ್ಲೂ ವಿಶೇಷವಾಗಿ ರಾಜಧಾನಿ ಡೆಹ್ರಾಡೂನ್ನಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿ, ಈವರೆಗೂ 17 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವ ವರದಿಯಾಗಿದೆ.
ಸೋಮವಾರ ರಾತ್ರಿಯಿಂದಲೇ ಪ್ರಾರಂಭವಾದ ಸರಣಿ ಮೇಘ ಸ್ಫೋಟಗಳು ಮತ್ತು ನಿರಂತರ ಮಳೆಯಿಂದ ಸಾಕಷ್ಟು ಹಾನಿಯುಂಟಾಗಿದೆ. ರಸ್ತೆಗಳು, ಸೇತುವೆಗಳು ಮತ್ತು ಮನೆಗಳು ಕೊಚ್ಚಿಹೋಗಿವೆ. ನದಿಗಳು ಪ್ರವಾಹಗಳಾಗಿ ಹರಿಯುತ್ತಿವೆ.
25 ರಿಂದ 30 ಸ್ಥಳಗಳಲ್ಲಿ ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿ ಹೋಗಿವೆ. ಮನೆಗಳು ಭಾರಿ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಸರ್ಕಾರಿ ಆಸ್ತಿಪಾಸ್ತಿಗಳು ಸಹ ಹಾನಿಗೀಡಾಗಿದ್ದು, ಅನೇಕ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಪರಿಸ್ಥಿತಿ ನಿರ್ವಹಣೆಗೆ ಎಲ್ಲಾ ಪ್ರಯತ್ನ ನಡೆಸಲಾಗುತ್ತಿದೆ. ಅನೇಕ ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಎಸ್ಡಿಆರ್ಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, “ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ನದಿಗಳಲ್ಲಿ ಕೊಚ್ಚಿಹೋಗಿ ಮತ್ತು ವಿವಿಧ ಸ್ಥಳಗಳಲ್ಲಿ ಅವಶೇಷಗಳ ಅಡಿಯಲ್ಲಿ ಹೂತು ಹದನೇಳು ಮಂದಿ ಮೃತಪಟ್ಟಿದ್ದಾರೆ, 20 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ” ಎಂದು ಹೇಳಿದ್ದಾರೆ.
ಸಹಸ್ರಧಾರಾದ ಕಾರ್ಲಿಗಾಡ್ ಪ್ರದೇಶದಲ್ಲಿ, ನೀರಿನಲ್ಲಿ ಮಣ್ಣು ಕೊಚ್ಚಿ ಹೋಗಿ 8 ಅಂಗಡಿಗಳು ಮತ್ತು ಹೋಟೆಲ್ ಕೊಚ್ಚಿಹಾಕಿ, ಇಬ್ಬರು ಕಾಣೆಯಾಗಿದ್ದಾರೆ. ಡಿಐಟಿ ಕಾಲೇಜು ಬಳಿಯ ಗ್ರೀನ್ ವ್ಯಾಲಿ ಪಿಜಿಯಲ್ಲಿ ಗೋಡೆ ಕುಸಿದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಶವವನ್ನು ಎಸ್ಡಿಆರ್ಎಫ್ ಹೊರತೆಗೆಯಲಾಗಿದೆ.
ಊದಿಕೊಂಡ ಆಸನ್ ನದಿಯಲ್ಲಿ 20 ಜನರು ಕೊಚ್ಚಿಹೋಗಿದ್ದಾರೆ, ಐದು ಶವಗಳು ಪತ್ತೆಯಾಗಿವೆ. ತಪಕೇಶ್ವರದ ಶಿಖರ್ ಫಾಲ್ಸ್ನಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಮಸ್ಸೂರಿಯ ಝರಿಪಾನಿ ಟೋಲ್ ಪ್ಲಾಜಾದಲ್ಲಿ ಭೂಕುಸಿತದಲ್ಲಿ ಓರ್ವ ಕಾರ್ಮಿಕರು ಮೃತಪಟ್ಟಿದ್ದಾರೆ. ಕಲ್ಸಿ-ಚಕ್ರತ ಮೋಟಾರ್ ರಸ್ತೆಯಲ್ಲಿ ಕಲ್ಲು ಬಿದ್ದು ಮತ್ತೊಬ್ಬ ಸ್ಕೂಟರ್ ಸವಾರ ಸಾವನ್ನಪ್ಪಿದ್ದಾರೆ.
ಮಳೆ ಮತ್ತು ಪ್ರವಾಹ ಪೀಡಿತ ಉತ್ತರಾಖಂಡದ ಪ್ರದೇಶಗಳಿಗೆ ₹1,200 ಕೋಟಿ ಆರ್ಥಿಕ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಿಸಿದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿರುವ ಮೋದಿ, “ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಕುಟುಂಬಗಳಿಗೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ಪರಿಹಾರ. ಅನಾಥ ಮಕ್ಕಳಿಗೆ ಪಿ.ಎಂ ಮಕ್ಕಳ ಕ್ಷೇಮಾಭಿವೃದ್ಧಿಯ ‘ಪಿ.ಎಂ.ಕೇರ್ಸ್’ ಯೋಜನೆಯಡಿ ಸಮಗ್ರ ಬೆಂಬಲ ನೀಡುವುದಾಗಿ” ತಿಳಿಸಿದ್ದಾರೆ.





