- ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯಾಗಿದ್ದ ಜಿತೇಂದ್ರ ಸೈನಿ
- ಕೇದಾರನಾಥದ ಸರ್ಕಾರಿ ಸ್ವಾಮ್ಯದ ಗಢವಾಲ್ ಮಂಡಲ ನಿಗಮ ಹೆಲಿಪ್ಯಾಡ್ ನಲ್ಲಿ ಘಟನೆ
ಉತ್ತರಾಖಂಡ ರಾಜ್ಯದ ಕೇದಾರನಾಥದಲ್ಲಿ ಹೆಲಿಕಾಪ್ಟರ್ನ ಹಿಂಭಾಗದ ಚಕ್ರ (ಟೇಲ್ ರೋಟರ್) ಬಡಿದು ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತ ಅಧಿಕಾರಿಯನ್ನು ಜಿತೇಂದ್ರ ಕುಮಾರ್ ಸೈನಿ ಎಂದು ಗುರುತಿಸಲಾಗಿದೆ. ಮೃತರು ಉತ್ತರಾಖಂಡದ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ (ಯುಸಿಎಡಿಎ) ಅಧಿಕಾರಿಯಾಗಿದ್ದರು. ಜಿತೇಂದ್ರ ಸೈನಿ ಅವರು ಆರ್ಥಿಕ ವಿಭಾಗದ ಉಸ್ತುವಾರಿ ವಹಿಸಿರುವ ಪ್ರಾಧಿಕಾರ ಉತ್ತರಾಖಂಡ ರಾಜ್ಯದಲ್ಲಿ ಹೆಲಿಕಾಪ್ಟರ್ ಸೇವೆ ನಿರ್ವಹಣೆ ಮಾಡುತ್ತದೆ.
ಉತ್ತರಾಖಂಡ ರಾಜ್ಯದ ಕೇದಾರನಾಥದ ಸರ್ಕಾರಿ ಸ್ವಾಮ್ಯದ ಗಢವಾಲ್ ಮಂಡಲ ನಿಗಮ ಹೆಲಿಪ್ಯಾಡ್ನಲ್ಲಿ ಭಾನುವಾರ ಮಧ್ಯಾಹ್ನ 2.15ಕ್ಕೆ ಘಟನೆ ನಡೆದಿದೆ ಎಂದು ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ವಿಶಾಖ ಅಶೋಕ್ ಭಂದಾನೆ ತಿಳಿಸಿದ್ದಾರೆ.
ಜಿತೇಂದ್ರ ಸೈನಿ ಅವರು ಪ್ರಯಾಣದ ವ್ಯವಸ್ಥೆ ಪರಿಶೀಲಿಸಲು ತೆರಳಿದ್ದ ವೇಳೆ ಹೆಲಿಕಾಪ್ಟರ್ ಬಳಿ ಸೆಲ್ಫೀ ತೆಗೆದುಕೊಳ್ಳುವ ವೇಳೆ ಹಿಂಬದಿ ಚಕ್ರ ಬಡಿದಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವಿಶಾಖ ಅಶೋಕ್ ತಿಳಿಸಿದರು.
ಅಕ್ಷಯ ತೃತೀಯ ಹಿನ್ನೆಲೆ ಚಾರ್ಧಾಮ್ ಯಾತ್ರೆಯು ಶನಿವಾರದಿಂದ (ಏಪ್ರಿಲ್ 22) ಆರಂಭವಾಗಿದೆ. ಮಾರನೇ ದಿನ ಈ ಘಟನೆ ನಡೆದಿದೆ.
ರಾಜ್ಯದ ಉತ್ತರಕಾಶಿಯಲ್ಲಿರುವ ಗಂಗೋತ್ರಿ ಮತ್ತು ಯಮುನೋತ್ರಿ ಬಾಗಿಲುಗಳನ್ನು ಯಾತ್ರೆಯ ಹಿನ್ನೆಲೆ ಈಗಾಗಲೇ ತೆರೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಎಸ್ಸಿಒ ಶೃಂಗಸಭೆ | ಭಾಗವಹಿಸುವಿಕೆ ಖಚಿತಪಡಿಸಿದ ಚೀನಾ ರಕ್ಷಣಾ ಸಚಿವ ಲಿ ಶಾಂಗ್ಫು
ಇದೇ 25 ರಂದು ಕೇದಾರನಾಥ ದೇಗುಲವನ್ನು ಭಕ್ತರಿಗೆ ತೆರೆಯಲಿದ್ದಾರೆ. ಈ ಹಿನ್ನೆಲೆ ಸಿದ್ಧತೆಗಳ ಪರಿಶೀಲನೆಗೆ ಜತೇಂದ್ರ ಸೈನಿ ಹೆಲಿಪ್ಯಾಡ್ಗೆ ಭೇಟಿ ನೀಡಿದ್ದರು.
ಉತ್ತರಾಖಂಡ ರಾಜ್ಯದ ಚಾರ್ಧಾಮ್ ಯಾತ್ರೆಗೆ ಈಗಾಗಲೇ ಸುಮಾರು 16 ಲಕ್ಷ ಮಂದಿ ಭಕ್ತರು ನೋಂದಾಯಿಸಿಕೊಂಡಿದ್ದಾರೆ. ಈ ಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಲಾಗಿದೆ. ಬದರಿನಾಥ ದೇಗುಲವನ್ನು ಏಪ್ರಿಲ್ 27 ರಂದು ತೆರೆಯಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೇದಾರನಾಥದಲ್ಲಿ ಆರಂಭವಾಗಿರುವ ಚಾರ್ಧಾಮ್ ಯಾತ್ರೆಗಾಗಿ ಈಗಾಗಲೇ ಲಕ್ಷಾಂತರ ಭಕ್ತರು ಯಾತ್ರೆ ಆರಂಭಿಸಿದ್ದಾರೆ. ಈ ವೇಳೆ ಗಂಗೋತ್ರಿ ಮತ್ತು ಯಮುನೋತ್ರಿಗೂ ಭಕ್ತರು ತೆರಳುತ್ತಾರೆ. ಈ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ.





