ಉತ್ತರಾಖಂಡದ ಗಂಗೋತ್ರಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆ ಕುಸಿದು ಬಿದ್ದಿದೆ. ಪರಿಣಾಮ ಸುಮಾರು 30ರಿಂದ 40 ಯಾತ್ರಿಕರು ನದಿಯಂಚಿನಲ್ಲಿ ಸಿಲುಕಿಕೊಂಡಿದ್ದು, ಇಬ್ಬರು ನದಿ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ ಎಂದು ವರದಿಯಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ಗಂಗೋತ್ರಿಯ ದೇವಗಡದ ಬಳಿ ನದಿ ನೀರು ಹಠಾತ್ ಹೆಚ್ಚಾಗಿದೆ. ನೀರು ಸೇತುವೆಯ ಮೇಲೆ ರಭಸವಾಗಿ ಹರಿದ ಪರಿಣಾಮ, ಸೇತುವೆ ಕುಸಿದಿದೆ. ಇಬ್ಬರು ಕೊಚ್ಚಿ ಹೋಗಿದ್ದಾರೆ. ನದಿಯಲ್ಲಿ ಸಿಲುಕಿಕೊಂಡಿದ್ದವರಲ್ಲಿ 16 ಮಂದಿಯನ್ನು ಎಸ್ಡಿಆರ್ಎಫ್ ತಂಡ ರಕ್ಷಿಸಿದೆ. ಉಳಿದವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ.
ಉತ್ತರಾಖಂಡದಲ್ಲಿ ಗುರುವಾರ ಭಾರೀ ಮಳೆಯಾದ ಪರಿಣಾಮ ಡೆಹ್ರಾಡೂನ್ನ ರಾಬರ್ಸ್ ಗುಹೆ ಬಳಿಯ ದ್ವೀಪದಲ್ಲಿ 10 ಮಂದಿ ಯುವಕರು ಸಿಲುಕಿಕೊಂಡಿದ್ದರು. ಅವರನ್ನು ಎಸ್ಡಿಆರ್ಎಫ್ ತಂಡ ರಕ್ಷಿಸಿತ್ತು. ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ನದಿ-ತೊರೆಗಳು ಉಕ್ಕಿ ಹರಿಯುತ್ತಿವೆ. ಪ್ರವಾಹ ಎದುರಾಗಿದೆ.
ಉತ್ತರಾಖಂಡ ಮಾತ್ರವಲ್ಲದೆ, ದೆಹಲಿ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರದಲ್ಲಿಯೂ ಭಾರೀ ಮಳೆಯಾಗುತ್ತಿದೆ. ದೆಹಲಿ ಜಲಾವೃತಗೊಂಡಿದ್ದರೆ, ಅಸ್ಸಾಂನಲ್ಲಿ ಪ್ರವಾಹವಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಅಯೋಧ್ಯೆ ರಾಮಮಂದಿರ ಸೋರುತ್ತಿದ್ದು, ರಾಮ ಪಥ ಗುಂಡಿ ಬಿದ್ದಿದೆ. ಬಿಹಾರದಲ್ಲಿ ಕಳೆದ 17 ದಿನಗಳಲ್ಲಿ 12 ಸೇತುವೆಗಳು ಕುಸಿದುಬಿದ್ದಿವೆ.




