ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಚಿಕನ್ ಬಿರಿಯಾನಿ ತಿಂದ ಆರೋಪದ ಮೇಲೆ ಬಂಧಿತರಾಗಿದ್ದ 14 ಜನರ ಜಾಮೀನು ಅರ್ಜಿಯನ್ನು ವಾರಣಾಸಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೊಂದು ವಜಾಗೊಳಿಸಿದೆ. ಆರೋಪಗಳು ಗಂಭೀರ ಸ್ವರೂಪದ್ದಾಗಿವೆ ಮತ್ತು ಜಾಮೀನು ರಹಿತವಾಗಿವೆ, ಆದ್ದರಿಂದ ಈ ಹಂತದಲ್ಲಿ ಜಾಮೀನು ನೀಡಲು ಸೂಕ್ತ ಕಾರಣಗಳಿಲ್ಲ ಎಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಈ ಘಟನೆಯ ವಿಡಿಯೊ ಆನ್ಲೈನ್ನಲ್ಲಿ ಹರಿದಾಡಿದ ಬೆನ್ನಲ್ಲೇ, ದೂರುದಾರ, ಬಿಜೆಪಿ ಯುವ ಮೋರ್ಚಾ ನಗರಾಧ್ಯಕ್ಷ ರಜತ್ ಜೈಸ್ವಾಲ್ ನೀಡಿದ ದೂರಿನ ಮೇರೆಗೆ ಈ 14 ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಸನಾತನ ಧರ್ಮದ ಅನುಯಾಯಿಗಳು ಪವಿತ್ರವೆಂದು ಭಾವಿಸುವ ಗಂಗಾ ನದಿಯ ಮಧ್ಯೆ ದೋಣಿಯಲ್ಲಿ ಮಾಂಸಾಹಾರ ಸೇವಿಸಿ, ಅದರ ತ್ಯಾಜ್ಯವನ್ನು ನೀರಿಗೆ ಎಸೆದಿರುವುದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್ 298 (ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವುದು), 299 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು), 196(1) ಬಿ (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 270 (ಸಾರ್ವಜನಿಕ ಉಪದ್ರವ), 279 (ಜಲಮೂಲ ಮಲಿನಗೊಳಿಸುವುದು) ಹಾಗೂ ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 1974ರ ಅಡಿಯಲ್ಲಿ ಆರಂಭದಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿತ್ತು.
ಇತ್ತೀಚಿನ ಬೆಳವಣಿಗೆಗಳ ಪ್ರಕಾರ, ದೋಣಿ ಚಾಲಕ ಅನಿಲ್ ಸಾಹನಿ ಅವರಿಗೆ ಬೆದರಿಕೆ ಹಾಕಿ ದೋಣಿಯನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದಾರೆ ಎಂಬ ಆರೋಪದಡಿ ಪೊಲೀಸರು ಈಗ ಸುಲಿಗೆ, ಅಪಹರಣ ಮತ್ತು ವಿಡಿಯೊ ಹರಿಬಿಟ್ಟಿದ್ದಕ್ಕಾಗಿ ಐಟಿ ಕಾಯ್ದೆಯಂತಹ ಕಠಿಣ ಹೆಚ್ಚುವರಿ ಸೆಕ್ಷನ್ಗಳನ್ನು ಸೇರಿಸಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡಿರುವ ಕಾರಣ ಸೆಷನ್ಸ್ ನ್ಯಾಯಾಲಯದಲ್ಲಿ ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸುವುದಾಗಿ ಆರೋಪಿಗಳ ಪರ ವಕೀಲ ರಾಣಾ ಯಾದವ್ ತಿಳಿಸಿದ್ದಾರೆ. ಇದೇ ವೇಳೆ, ದೂರುದಾರ ಜೈಸ್ವಾಲ್ ಅವರು ತಮಗೆ ಅಪರಿಚಿತರಿಂದ ಜೀವಬೆದರಿಕೆ ಕರೆಗಳು ಬರುತ್ತಿವೆ ಎಂದು ಸಿಗ್ರಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ನೀಡಿದ್ದಾರೆ.
ಇದನ್ನು ಓದಿದ್ದೀರಾ? 84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?
ನೈಜ ನ್ಯಾಯದ ಪರಿಕಲ್ಪನೆಯು ಜಾತಿ, ಧರ್ಮ ಅಥವಾ ಬಹುಸಂಖ್ಯಾತ ವಾದದ ಹಂಗಿಲ್ಲದೆ ನಿಷ್ಪಕ್ಷಪಾತವಾಗಿರಬೇಕು. ಆದರೆ, ದೂರುದಾರರ ರಾಜಕೀಯ ಹಿನ್ನೆಲೆ ಮತ್ತು ಸಾಮಾಜಿಕ ಒತ್ತಡಗಳಿಗೆ ಮಣಿದು ಪೊಲೀಸರು ಇಂತಹ ಪ್ರಕರಣಗಳಲ್ಲಿ ಮಿತಿಮೀರಿದ ಸೆಕ್ಷನ್ಗಳನ್ನು ಹಾಕುವುದು ಮತ್ತು ತ್ವರಿತ ಕ್ರಮಗಳನ್ನು ಕೈಗೊಳ್ಳುವುದು ‘ನ್ಯಾಯದ ತಕ್ಕಡಿ’ ಒಂದು ಕಡೆ ಮಾತ್ರ ವಾಲುತ್ತಿರುವಂತೆ ಬಿಂಬಿಸುತ್ತದೆ.
ಪವಿತ್ರ ಸ್ಥಳಗಳ ಧಾರ್ಮಿಕ ಪಾವಿತ್ರ್ಯತೆಯ ರಕ್ಷಣೆ ಖಂಡಿತವಾಗಿಯೂ ಮುಖ್ಯ, ಆದರೆ ಅದು ವ್ಯಕ್ತಿಯ ವಿರುದ್ಧ ದ್ವೇಷ ಸಾಧಿಸುವ ಅಥವಾ ಅಧಿಕಾರದ ದುರ್ಬಳಕೆಗೆ ದಾರಿಯಾಗಬಾರದು. ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯವಾದಾಗ ಮಾತ್ರ ವ್ಯವಸ್ಥೆಯ ಮೇಲಿನ ನಂಬಿಕೆ ಉಳಿಯುತ್ತದೆ ಎಂಬುದೇ ಪ್ರಜಾಸತ್ತಾತ್ಮಕ ಮತ್ತು ನಿಷ್ಪಕ್ಷಪಾತ ನ್ಯಾಯಾಂಗದ ಮೂಲ ಆಶಯವಾಗಿದೆ.





