ಮನರೇಗಾವನ್ನು ಬದಲಿಸಿ ಹಲವು ತಿದ್ದುಪಡಿಗಳೊಂದಿಗೆ ಮಂಡಿಸಲಾಗಿರುವ ‘VB-G RAM G ಮಸೂದೆ’ಯು ಗ್ರಾಮೀಣ ಕಾರ್ಮಿಕರು ಮತ್ತು ರೈತ ಕುಟುಂಬಗಳಿಗೆ ದ್ರೋಹ ಬಗೆಯುತ್ತದೆ. ಮನರೇಗಾ ಯೋಜನೆಯಡಿ ಖಾತ್ರಿಪಡಿಸಲಾಗಿದ್ದ ಉದ್ಯೋಗದ ಹಕ್ಕನ್ನು ಕಿತ್ತುಕಕೊಳ್ಳುತ್ತದೆ. ಇದು ಜನವಿರೋಧಿ ಮಸೂದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಹೇಳಿದೆ.
‘VB-G RAM G ಮಸೂದೆ’ಯನ್ನು ಖಂಡಿಸಿ ರೈತ ಸಂಘಟನೆಗಳ ಒಕ್ಕೂಟ ಎಸ್ಕೆಎಂ ಹೇಳಿಕೆ ಬಿಡುಗಡೆ ಮಾಡಿದೆ. “ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ, ಬಡ ಕಾರ್ಮಿಕರಿಗೆ ಉದ್ಯೋಗ ಒದಗಿಸುವುತ್ತಿರುವ ಮನರೇಗಾವನ್ನು ಬದಲಿಸುವ ಬದಲು, ನಗರ ಪ್ರದೇಶಗಳಲ್ಲಿ ತೀವ್ರ ನಿರುದ್ಯೋಗವನ್ನು ಪರಿಹರಿಸಲು ಮತ್ತು ನಗರ ಭಾಗದ ಜನರಿಗೆ ಉದ್ಯೋಗ ಒದಗಿಸಲು ಮನರೇಗಾ ರೀತಿಯ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿ” ಎಂದು ಆಗ್ರಹಿಸಿದೆ.
“ಮನರೇಗಾ ಕೇವಲ ಗ್ರಾಮೀಣ ಜನರಿಗೆ ಉದ್ಯೋಗ ಖಾತರಿ ನೀಡುವ ಯೋಜನೆ ಮಾತ್ರವೇ ಆಗಿರಲಿಲ್ಲ. ಈ ಯೋಜನೆಯಿಂದಾಗಿ ಗ್ರಾಮೀಣ ರಸ್ತೆಗಳು, ನೀರಾವರಿ, ಕುಡಿಯುವ ನೀರು, ಪಶುಸಂಗೋಪನೆ, ನಾಗರಿಕ ಸೌಲಭ್ಯಗಳು, ಜನಪರ ವಿದ್ಯುದೀಕರಣ, ಕೃಷಿ ಸಂಸ್ಕರಣೆ ಇತ್ಯಾದಿಗಳನ್ನು ಒಳಗೊಂಡ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿತ್ತು. ಇಂತಹ ಮಹತ್ವದ ಯೋಜನೆಯನ್ನು ರದ್ದುಗೊಳಿಸುತ್ತಿರುವು ಖಂಡನೀಯ. ಇದರ ಹಿಂದೆ, ದೊಡ್ಡ ಕಂಪೆನಿಗಳಿಗೆ ಹಿಂಬಾಗಿಲಿನಿಂದ ಲಾಭ ಮಾಡಿಕೊಡುವ ಹುನ್ನಾರವಿದೆ” ಎಂದು ಎಸ್ಕೆಎಂ ಆರೋಪಿಸಿದೆ.
ಈ ಲೇಖನ ಓದಿದ್ದೀರಾ?: ಮನರೇಗಾ ಬದಲಿಗೆ ವಿಬಿ-ಜಿ ರಾಮ್ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?
“ಮನರೇಗಾ ರದ್ದುಗೊಳಿಸುವ ‘VB-G RAM G ಮಸೂದೆ’ಯು ಮಹಿಳಾ ಕರ್ಮಿಕರ ಮೇಲೆ ತೀವ್ರ ಮತ್ತು ನೇರ ಪರಿಣಾಮ ಬೀರಲಿದೆ. ದಲಿತರು ಮತ್ತು ಆದಿವಾಸಿಗಳ ಉದ್ಯೋಗ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ. ಮನರೇಗಾವನ್ನು ಬಲಪಡಿಸಲು ಭಾರತದಾದ್ಯಂತ ಕಾರ್ಮಿಕರು, ರೈತರು, ಯುವಕರು, ವಿದ್ಯಾರ್ಥಿಗಳು, ಮಹಿಳೆಯರು, ದಲಿತರು ಮತ್ತು ಆದಿವಾಸಿಗಳು ಹೋರಾಟಕ್ಕೆ ಇಳಿಯಬೇಕು” ಎಂದು ಕರೆ ಕೊಟ್ಟಿದೆ.




