ಕುವೈತ್ನ ಬೆಂಕಿ ದುರಂತದಲ್ಲಿ ಮೃತರು ಹಾಗೂ ಗಾಯಗೊಂಡ ಕೇರಳ ಮೂಲದವರ ಭೇಟಿಗೆ ತೆರಳುತ್ತಿದ್ದ ತನ್ನನ್ನು ಕೇಂದ್ರ ವಿದೇಶಾಂಗ ಇಲಾಖೆ ರಾಜಕೀಯ ಕ್ಲಿಯರೆನ್ಸ್ ನೀಡದೆ ನಿರಾಕರಿಸಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆರೋಪಿಸಿದ್ದಾರೆ.
ವೀಣಾ ಜಾರ್ಜ್ ಅವರು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕುವೈತ್ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸಲು ಗುರುವಾರ ಸಂಜೆ ತೆರಳಿದ್ದರು. ಆದರೆ ವಿದೇಶಾಂಗ ಇಲಾಖೆ ಕ್ಲಿಯರೆನ್ಸ್ ನಿರಾಕರಿಸಿದ ಕಾರಣ ಕುವೈತ್ಗೆ ತೆರಳಲು ಸಾಧ್ಯವಾಗಲಿಲ್ಲ ಎಂದು ಸಚಿವೆ ತಿಳಿಸಿದ್ದಾರೆ.
ಈ ಬಗ್ಗೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿನ ಪರಿಸ್ಥಿತಿ, ದುರಂತ ಹಾಗೂ ನೋವನ್ನು ಅನುಭವಿಸುತ್ತಿರುವ ಮಲಯಾಳಿ ಸಮುದಾಯಕ್ಕೆ ಕೇಂದ್ರ ಕೈಗೊಂಡ ನಿರ್ಧಾರ ‘ತಪ್ಪು ಹಾಗೂ ಅತ್ಯಂತ ದುರಾದೃಷ್ಟಕರವಾಗಿದೆ’ ಎಂದು ತಿಳಿಸಿದ್ದಾರೆ.
ವೀಣಾ ಜಾರ್ಜ್ ಅವರು ರಾಜ್ಯ ಮಿಷನ್ ನಿರ್ದೇಶಕರಾದ ಜೀವನ್ ಬಾಬು ಅವರೊಂದಿಗೆ ತೆರಳಿದ್ದರು. ಕೇರಳ ಸರ್ಕಾರ ಕೂಡ ಕುವೈತ್ಗೆ ತೆರಳಲು ವೀಣಾ ಅವರನ್ನು ಅಧಿಕೃತ ಪ್ರತಿನಿಧಿಯಾಗಿ ಆದೇಶ ಹೊರಡಿಸಿತ್ತು. ಆದರೆ ಕೇಂದ್ರ ವಿದೇಶಾಂಗ ಇಲಾಖೆ ರಾಜಕೀಯ ಕ್ಲಿಯರೆನ್ಸ್ ನೀಡಲಿಲ್ಲ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?
ಕುವೈತ್ನ ಬೆಂಕಿ ದುರಂತದಲ್ಲಿ 23 ಮಂದಿ ಮಲಯಾಳಿಗರು ಮೃತಪಟ್ಟಿದ್ದಾರೆ.ಗಾಯಗೊಂಡ ಹಲವರನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಕೆಲವರು ಐಸಿಯುನಲ್ಲಿದ್ದಾರೆ. ಸಂತ್ರಸ್ತರ ಜೊತೆ ಅವರ ಕುಟುಂಬದವರಿಲ್ಲ.ಮೃತಪಟ್ಟ ಪ್ರತಿಯೊಬ್ಬರ ಜೀವನವು ದುಃಖಕರವಾಗಿದೆ. ಮಲಯಾಳಿಗಳು ಹೆಚ್ಚು ತೊಂದರೆಗೊಳಗಾಗಿದ್ದಾರೆ ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.
ಮಂಗಾಫ್ ನಗರದ ಆರು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ. ವಸತಿ ಸೌಲಭ್ಯದಲ್ಲಿರುವ 176 ಭಾರತೀಯ ಕಾರ್ಮಿಕರಲ್ಲಿ 45 ಮಂದಿ ಸಾವನ್ನಪ್ಪಿದ್ದಾರೆ ಮತ್ತು 33 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಮೃತ ಭಾರತೀಯರಲ್ಲಿ, 23 ಕೇರಳದಿಂದ, ಏಳು ತಮಿಳುನಾಡಿನಿಂದ, ತಲಾ ಇಬ್ಬರು ಆಂಧ್ರಪ್ರದೇಶ ಮತ್ತು ಒಡಿಶಾದಿಂದ ಹಾಗೂ ಬಿಹಾರ, ಮಧ್ಯಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶದ ತಲಾ ಒಬ್ಬರು ಸೇರಿದ್ದಾರೆ.





