ಜಾಗತಿಕ ಖ್ಯಾತಿಯ ಹಿರಿಯ ಪರಿಸರ ವಿಜ್ಞಾನಿ ಹಾಗೂ ಬರಹಗಾರ ಮಾಧವ ಗಾಡ್ಗೀಳ್ ಅವರು ಬುಧವಾರ ರಾತ್ರಿ ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಪುಣೆಯ ನವಿ ಪೇಠದಲ್ಲಿರುವ ವೈಕುಂಠ ಸ್ಮಶಾನಭೂಮಿಯಲ್ಲಿ ಗುರುವಾರ ಸಂಜೆ 4 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪಶ್ಚಿಮ ಘಟ್ಟಗಳ ಕುರಿತು ನಡೆಸಿದ ಸಂಶೋಧನೆ ಹಾಗೂ ಭಾರತದಲ್ಲಿ ಪರಿಸರ ನೀತಿ ಮತ್ತು ಸಂರಕ್ಷಣೆಗೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ ಗಾಡ್ಗೀಳ್ ಅವರು ಖ್ಯಾತರಾಗಿದ್ದರು.
ಮಾಧವ ಧನಂಜಯ ಗಾಡ್ಗೀಳ್ ಅವರು ಭಾರತದ ಪರಿಸರ ಚಿಂತನೆ ಮತ್ತು ನೀತಿಯ ವಿಕಾಸದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಪ್ರವರ್ತಕ ಪರಿಸರಶಾಸ್ತ್ರಜ್ಞ, ಶೈಕ್ಷಣಿಕ ಅಧ್ಯಯನಕಾರ, ಬರಹಗಾರ ಮತ್ತು ಬುದ್ಧಿಜೀವಿಯಾಗಿ ಅವರು ಭಾರತೀಯ ಪರಿಸರವಾದದ ಅಡಿಪಾಯದ ಪ್ರಮುಖ ಧ್ವನಿಯಾಗಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಸುಪ್ರೀಮ್’ ನೀಡಿದ ಎರಡು ವ್ಯತಿರಿಕ್ತ ತೀರ್ಪುಗಳು! ಅರವಿಂದ್ಗೆ ಒಂದು ನ್ಯಾಯ, ಉಮರ್ಗೆ ಮತ್ತೊಂದೇ?
ಅವರು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಸ್ಥಾಪಕರಾಗಿದ್ದು, ಈ ಕೇಂದ್ರವು ದೇಶದ ಪ್ರಮುಖ ಪರಿಸರ ಸಂಶೋಧನಾ ಕೇಂದ್ರಗಳಲ್ಲಿ ಒಂದಾಗಿ ರೂಪುಗೊಂಡಿತು. ಹಲವು ದಶಕಗಳ ಕಾಲ ಅವರು ಕಠಿಣ ವೈಜ್ಞಾನಿಕ ಅಧ್ಯಯನವನ್ನು ವಿಕೇಂದ್ರೀಕೃತ ಹಾಗೂ ಸಮುದಾಯಾಧಾರಿತ ಪರಿಸರ ಆಡಳಿತದೊಂದಿಗೆ ಸಂಯೋಜಿಸಿದ್ದರು.
2010ರಲ್ಲಿ ಪಶ್ಚಿಮ ಘಟ್ಟಗಳ ಪರಿಸರ ವಿಜ್ಞಾನ ತಜ್ಞರ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದ ಗಾಡ್ಗೀಳ್, ಸಮಿತಿಯಿಂದ ನೀಡಲಾದ ಶಿಫಾರಸುಗಳ ಮೂಲಕ ರಾಷ್ಟ್ರವ್ಯಾಪಿ ಚರ್ಚೆಗೆ ಕಾರಣರಾದರು. ನಂತರ ‘ಗಾಡ್ಗೀಳ್ ಸಮಿತಿ’ ಅಥವಾ ‘ಗಾಡ್ಗೀಳ್ ಆಯೋಗ’ ವರದಿ ಎಂದು ಕರೆಯಲ್ಪಟ್ಟ ಈ ಶಿಫಾರಸುಗಳು, ಅತಿಸಂವೇದನಾಶೀಲ ಪಶ್ಚಿಮ ಘಟ್ಟ ಪ್ರದೇಶಗಳಿಗೆ ಕಠಿಣ ರಕ್ಷಣಾ ಕ್ರಮಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿತು. ವರದಿ ತನ್ನ ವೈಜ್ಞಾನಿಕ ಸಮಗ್ರತೆಗೆ ಪ್ರಶಂಸೆಯನ್ನು ಗಳಿಸಿದರೆ, ಅದರ ಆರ್ಥಿಕ ಪರಿಣಾಮಗಳ ಕುರಿತು ಕೆಲ ವಲಯಗಳಿಂದ ಟೀಕೆಯೂ ವ್ಯಕ್ತವಾಯಿತು.
ಗಾಡ್ಗೀಳ್ ಅವರು ಪ್ರಧಾನ ಮಂತ್ರಿಯವರ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಪರಿಸರ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ ಅವರಿಗೆ ವೋಲ್ವೋ ಪರಿಸರ ಪ್ರಶಸ್ತಿ, ಪರಿಸರ ಸಾಧನೆಗಾಗಿ ಟೈಲರ್ ಪ್ರಶಸ್ತಿ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಗೌರವಗಳು ಲಭಿಸಿದ್ದವು. 1981ರಲ್ಲಿ ಪದ್ಮಶ್ರೀ ಮತ್ತು 2006ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದರು. 2024ರಲ್ಲಿ ವಿಶ್ವಸಂಸ್ಥೆ ನೀಡುವ ಪರಿಸರ ಸಂಬಂಧಿ ಅತ್ಯುನ್ನತ ಪ್ರಶಸ್ತಿ ‘ಚಾಂಪಿಯನ್ಸ್ ಆಫ್ ದಿ ಅರ್ಥ್’ ಪ್ರಶಸ್ತಿಯೊಂದಿಗೆ ಅವರನ್ನು ಗೌರವಿಸಲಾಗಿತ್ತು.






