ಇತ್ತೀಚೆಗೆ ಪ್ರಕಟವಾದ ಕೇಂದ್ರ ಬಜೆಟ್ನಲ್ಲಿ ಅಂಗವೈಕಲ್ಯ ಪಿಂಚಣಿ ಪಡೆಯುವ ರಕ್ಷಣಾ ಸಿಬ್ಬಂದಿಗೆ ಲಭ್ಯವಿದ್ದ ಆದಾಯ ತೆರಿಗೆ ವಿನಾಯಿತಿಯನ್ನು ಸ್ಥಗಿತಗೊಳಿಸುವ ಸರ್ಕಾರದ ನಿರ್ಧಾರಕ್ಕೆ ದೇಶದಾದ್ಯಂತ ಮಾಜಿ ಸೈನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಬಜೆಟ್ನ ಪ್ರಕಾರ, ಇನ್ನು ಮುಂದೆ ದೈಹಿಕ ಅಂಗವೈಕಲ್ಯದಿಂದಾಗಿ ಸೇವೆಯಿಂದ “ಅಮಾನ್ಯಗೊಳಿಸಲ್ಪಟ್ಟ” ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಮಾತ್ರ ತೆರಿಗೆ ವಿನಾಯಿತಿ ಲಭ್ಯವಾಗಲಿದೆ. ಆದರೆ ಅಂಗವೈಕಲ್ಯ ಹೊಂದಿದ್ದರೂ ತಮ್ಮ ಪೂರ್ಣ ಸೇವಾ ಅವಧಿ (ಸೂಪರ್ಅನ್ಯುಯೇಷನ್) ಪೂರ್ಣಗೊಳಿಸಿ ನಿವೃತ್ತರಾದ ಸಿಬ್ಬಂದಿಗೆ ಈ ಸೌಲಭ್ಯ ಅನ್ವಯವಾಗುವುದಿಲ್ಲ ಎಂದು ವರದಿಗಳು ತಿಳಿಸಿವೆ.
ಈ ನಿರ್ಧಾರವು ಅಂಗವಿಕಲ ಪಿಂಚಣಿದಾರರ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸೇನೆಯಿಂದ ನಿವೃತ್ತರಾದವರು ಕಳವಳ ವ್ಯಕ್ತಪಡಿಸಿದ್ದಾರೆ. ಸೇವೆಯಿಂದ ಅಮಾನ್ಯಗೊಂಡವರಿಗಿಂತ ಸೇವಾವಧಿ ಪೂರ್ಣಗೊಳಿಸಿ ನಿವೃತ್ತರಾದ ಅಂಗವಿಕಲ ಸೈನಿಕರ ಸಂಖ್ಯೆ ಹೆಚ್ಚಿನದಿರುವುದರಿಂದ ದೊಡ್ಡ ವರ್ಗದ ಯೋಧರು ನೇರವಾಗಿ ನಷ್ಟ ಅನುಭವಿಸಲಿದ್ದಾರೆ ಎಂಬ ಆತಂಕ ವ್ಯಕ್ತವಾಗಿದೆ.
ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮೇಜರ್ ಜನರಲ್ ಶೈಲ್ ಝಾ ಅವರು, “ಅಗ್ನಿವೀರ್ ಯೋಜನೆಯಿಂದ ದೇಶದ ಭದ್ರತೆ ಮೊದಲು ಹದಗೆಟ್ಟಿತು. ಈಗ ಅಂಗವೈಕಲ್ಯ ಪಿಂಚಣಿಯ ಮೇಲಿನ ದಾಳಿಯಿಂದ ವೃತ್ತಿಪರ ಸೈನಿಕರ ಬದ್ಧತೆಯ ನೀತಿಯನ್ನೇ ಕುಗ್ಗಿಸಲಾಗುತ್ತಿದೆ. ರಾಷ್ಟ್ರದ ರಕ್ಷಣೆಯ ಶವಪೆಟ್ಟಿಗೆಯ ಮೇಲಿನ ಕೊನೆಯ ಮೊಳೆ ಹೊಡೆಯಲಾಗುತ್ತಿದೆ,” ಎಂದು ಕಿಡಿಕಾರಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಇದ್ರೆ ಎಲ್ಲವೂ ಸಾಧ್ಯ- ಇದು ಬಿಜೆಪಿ ಮಂತ್ರ!
ಇಲ್ಲಿಯವರೆಗೆ ಸೇವೆಯ ವೇಳೆ ಅಂಗವಿಕಲರಾದ ಸೈನಿಕರನ್ನು ಆಡಳಿತಾತ್ಮಕ ಹುದ್ದೆಗಳ ಮೂಲಕ ಸೇವೆಯಲ್ಲಿ ಮುಂದುವರಿಸಲಾಗುತ್ತಿತ್ತು. ಕರ್ತವ್ಯದ ಸಮಯದಲ್ಲಿ ಗಾಯಗೊಂಡು ಅಂಗವೈಕಲ್ಯಕ್ಕೊಳಗಾದ ಸೈನಿಕರಿಗೆ ಅಂಗವೈಕಲ್ಯ ಪಿಂಚಣಿ, ಜೀವಾವಧಿ ವೈದ್ಯಕೀಯ ಚಿಕಿತ್ಸೆ ಹಾಗೂ ಹೆಚ್ಚುವರಿ ತೆರಿಗೆಮುಕ್ತ ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗುತ್ತಿವೆ.
“ಹಣಕಾಸು ಮಸೂದೆ 2026ರಲ್ಲಿ ಸರ್ಕಾರವು ಯುದ್ಧದಲ್ಲಿ ಗಾಯಗೊಂಡು ಅಂಗವಿಕಲರಾದ ಮಾಜಿ ಸೈನಿಕರು ಮತ್ತು ಸೇವಾ ಸಿಬ್ಬಂದಿಗೆ ನೀಡಲಾಗುತ್ತಿದ್ದ ಆದಾಯ ತೆರಿಗೆ ವಿನಾಯಿತಿಯ ಎಲ್ಲ ಪ್ರಯೋಜನಗಳನ್ನು ತೆಗೆದುಹಾಕಿದೆ. ನಿವೃತ್ತಿಯವರೆಗೂ ಸೇವೆ ಸಲ್ಲಿಸಿದ ಧೈರ್ಯಶಾಲಿಗಳ ವಿರುದ್ಧ ಇದು ನಿರ್ದಯಿ ಕ್ರಮ— ವಾಹ್!” ಎಂದು ನಿವೃತ್ತ ಮೇಜರ್ ಜನರಲ್ ಬೀರೇಂದರ್ ಧನೋವಾ ಅವರು ಸಹ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈಗ ರದ್ದುಗೊಂಡಿರುವ ತೆರಿಗೆ ವಿನಾಯಿತಿ 1922 ರಿಂದ ಜಾರಿಯಲ್ಲಿತ್ತು. ಇದನ್ನು ರದ್ದು ಪಡಿಸಿರುವುದು ದೇಶ ದ್ರೋಹಕ್ಕೆ ಸಮ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.





