ಪ್ರಸ್ತಾವಿತ ಸುಣ್ಣದ ಕಲ್ಲು ಗಣಿಗಾರಿಕೆಗಾಗಿ ಕ್ವಾರಿ ಕೊರೆಯುವಿಕೆ, ಮಾದರಿ ಸಂಗ್ರಹ ಮತ್ತು ಸಮೀಕ್ಷೆ ಕಾರ್ಯ ನಡೆಸಲು ಬಂದಿದ್ದ ಅಧಿಕಾರಿಗಳ ತಂಡದ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಬಳಿಕ, ತಲವಾಡಿ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಪ್ರಸ್ತಾವಿತ ಸುಣ್ಣದ ಕಲ್ಲು ಗಣಿಗಾರಿಕೆ ಮತ್ತು ಸಿಮೆಂಟ್ ಸ್ಥಾವರ ಯೋಜನೆಗೆ ಸಂಬಂಧಿಸಿದಂತೆ ಮಾದರಿ ಸಂಗ್ರಹ ಮತ್ತು ಸಮೀಕ್ಷೆ ಕಾರ್ಯಗಳನ್ನು ನಡೆಸಲು ಪೊಲೀಸ್ ಪಡೆಗಳೊಂದಿಗೆ ಅಧಿಕಾರಿಗಳ ತಂಡವು ತಲವಾಡಿ ಗ್ರಾಮಕ್ಕೆ ಬಂದಿದೆ. ಕೃಷಿ ಹೊಲಗಳಲ್ಲಿ ಕೊರೆಯುವ ಯಂತ್ರೋಪಕರಣಗಳನ್ನು ಅಧಿಕಾರಿಗಳು ಇಳಿಸಿದ್ದಾರೆ. ಈ ಬೆನ್ನಲ್ಲೇ, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ರಸ್ತೆ ತಡೆದು, ಸಮೀಕ್ಷೆ ನಡೆಸಬಾರದೆಂದು ಒತ್ತಾಯಿಸಿದ್ದಾರೆ.
ಆದಾಗ್ಯೂ, ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ್ದಾರೆ. ಈ ವೇಳೆ, ಗ್ರಾಮಸ್ಥರು ಅಧಿಕಾರಿಗಳನ್ನು ಸುತ್ತುವರೆದು, ಕಲ್ಲು ತೂರಾಟ ನಡೆಸಿದ್ದಾರೆ. ಗ್ರಾಮಸ್ಥರ ಆಕ್ರೋಶದಿಂದಾಗಿ ಅಧಿಕಾರಿಗಳು ಸ್ಥಳದಿಂದ ವಾಪಸ್ ತೆರಳಿದ್ದಾರೆ.
ಘಟನೆಯಲ್ಲಿ ತಹಶೀಲ್ದಾರ್ ವಾಹನ ಸೇರಿದಂತೆ ಹಲವಾರು ಪೊಲೀಸ್ ಮತ್ತು ಸರ್ಕಾರಿ ವಾಹನಗಳಿಗೆ ಹಾನಿಯಾಗಿದೆ. ಯಾವುದೇ ಅಧಿಕಾರಿಗೆ ಗಾಯಗಳಾಗಿಲ್ಲ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಪ್ರಸ್ತಾವಿತ ಸುಣ್ಣದ ಕಲ್ಲು ಗಣಿಗಾರಿಕೆ ಮತ್ತು ಸಿಮೆಂಟ್ ಕಾರ್ಖಾನೆಗಾಗಿ ನಮ್ಮ ಕೃಷಿ ಭೂಮಿಯನ್ನು ಕಸಿದುಕೊಳ್ಳವ ಕುತಂತ್ರಗಳು ನಡೆದಿವೆ. ಈ ಗಣಿಗಾರಿಕೆಯ ವಿರುದ್ಧ ಹಲವು ತಿಂಗಳುಗಳಿಂದ ಪ್ರತಿಭಟಿಸುತ್ತಿದ್ದೇವೆ. ಆದರೂ, ಅಧಿಕಾರಿಗಳು ನಮ್ಮ ಪ್ರತಿಭಟನೆ-ಹಕ್ಕೊತ್ತಾಯಗಳಿಗೆ ಸ್ಪಂದಿಸದೆ, ಸಮೀಕ್ಷೆ ನಡೆಸಲು ನೋಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
“ಈ ಯೋಜನೆಯು ನಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಬಂಜರು ಮಾಡುತ್ತದೆ. ಅಂತರ್ಜಲ ಸಂಪನ್ಮೂಲಗಳ ಮೇಲೆ ಪರಿಣಾಮ ಬೀರುತ್ತದೆ. ಕುಕ್ಷಿ, ಬಾಗ್ ಹಾಗೂ ಜೋಬತ್ ಪ್ರದೇಶಗಳ ಸಾವಿರಾರು ಜನರನ್ನು ಒಕ್ಕಲೆಬ್ಬಿಸುತ್ತದೆ. ನಮ್ಮನ್ನು ನಿರ್ಗತಿಕರನ್ನಾಗಿ ಮಾಡಿ, ಸ್ಥಳಾಂತರಿಸುವ ಅಪಾಯಗಳಿವೆ” ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಚಾಲುಕ್ಯರ ಆಳ್ವಿಕೆಯ ಇತಿಹಾಸದ ಸುವರ್ಣ ಪುಟಗಳನ್ನು ಕಲ್ಲಿನಲ್ಲಿ ಕಾಣುವ ಅದ್ಭುತ ಸ್ಥಳ ಬಾದಾಮಿ
“ಈ ಹಿಂದೆಯೂ, ಪ್ರತಿಭಟನೆಗಳನ್ನು ನಡೆಸಿದ್ದೆವು. ಆಗ, ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಪ್ರಿಯಾಂಕಾ ಮಿಶ್ರಾ ಅವರು ಸಾರ್ವಜನಿಕ ಪ್ರತಿನಿಧಿಗಳು ಮತ್ತು ಗ್ರಾಮಸ್ಥರ ಒಪ್ಪಿಗೆಯಿಲ್ಲದೆ ಯಾವುದೇ ಕೆಲಸ ಮುಂದುವರಿಯುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಅವರ ಭರವಸೆಯನ್ನು ಉಲ್ಲಂಘಿಸಿ, ಈಗ ಸಮೀಕ್ಷೆಗೆ ಮುಂದಾಗಿದ್ದಾರೆ” ಎಂದು ದೂರಿದ್ದಾರೆ.
ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಪ್ರಮೋದ್ ಗುರ್ಜರ್, “ನಿಯಮಗಳ ಪ್ರಕಾರವೇ ಮಾದರಿ ಸಂಗ್ರಹ ಮತ್ತು ಸಮೀಕ್ಷೆ ಕೆಲಸವನ್ನು ನಡೆಸಲಾಗುತ್ತಿದೆ. ಆಕ್ಷೇಪಣೆಗಳನ್ನು ಲಿಖಿತವಾಗಿ ಸಲ್ಲಿಸಬಹುದು.ಸೂಕ್ತ ರೀತಿಯಲ್ಲಿ ಆತಂಕಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು” ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭೆಯ ವಿಪಕ್ಷದ ನಾಯಕ ಉಮಾಂಗ್ ಸಿಂಘರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, “ನೀರು, ಅರಣ್ಯ ಹಾಗೂ ಭೂಮಿಯ ಮೇಲಿನ ಬುಡಕಟ್ಟು ಜನಾಂಗದವರ ಹಕ್ಕುಗಳ ರಕ್ಷಣೆಗಾಗಿ ಬೀದಿಗಳಿಂದ ವಿಧಾನಸಭೆಯವರೆಗೆ ಹೋರಾಟಗಳನ್ನು ನಡೆಸುತ್ತೇವೆ. ಅಧಿಕಾರಿಗಳು ಸರಿಯಾದ ಒಪ್ಪಿಗೆಯಿಲ್ಲದೆ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.




