ಬಾರ್ಬಡೋಸ್ನಲ್ಲಿ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಜೊತೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದು, ಈ ಸಂದರ್ಭದಲ್ಲಿ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ‘ಅಹಂಕಾರ’ ಪದವನ್ನು ಉಲ್ಲೇಖಿಸಿದ್ದಾರೆ. ಆಟಗಳ ಬಗ್ಗೆ ಕೊಹ್ಲಿ ಆಡಿರುವ ಮಾತುಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಹೇಳಿದಂತೆ ಭಾಸವಾಗಿದೆ.
ಬಾರ್ಬಡೋಸ್ನಲ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾ ಬೆರಿಲ್ ಚಂಡಮಾರುತದಿಂದ ಸಿಲುಕಿ ಹಾಕಿಕೊಂಡಿತ್ತು. ಇದಾದ ನಂತರ ರೋಹಿತ್ ಶರ್ಮಾ ಪಡೆ ಜುಲೈ 4ರಂದು ಬೆಳಿಗ್ಗೆ 6 ಗಂಟೆಗೆ ಬಾರ್ಬಡೋಸ್ನಿಂದ ದೆಹಲಿಗೆ ಬಂದಿಳಿದಿತ್ತು.
ಬಳಿಕ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ ಶಾ ಜೊತೆ ಟೀಂ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಟೀಮ್ ಇಂಡಿಯಾ ಆಟಗಾರರು ಸಂವಾದ ನಡೆಸಿದ್ದರು. ಈ ಸಂವಾದದ ಪೂರ್ಣ ವಿಡಿಯೋವನ್ನು ಶುಕ್ರವಾರ ಸಂಜೆ ಯೂಟ್ಯೂಬ್ನಲ್ಲಿ ಖುದ್ದು ಪ್ರಧಾನಿ ಮೋದಿಯೇ ಬಿಡುಗಡೆಗೊಳಿಸಿದ್ದರು.
ಈ ಸಂವಾದದ ವೇಳೆ ಮಾತನಾಡಿರುವ ವಿರಾಟ್ ಕೊಹ್ಲಿ, “ನಾನು ಏನು ಮಾಡಲು ಪ್ರಯತ್ನ ಮಾಡಿದರೂ ಅದು ಸಾಧ್ಯವಾಗುತ್ತಿರಲಿಲ್ಲ. ನಾನು ಮಾಡುತ್ತೇನೆ ಎಂದು ನಮಗೆ ಅನಿಸಿದರೆ ನಮ್ಮ ಅಹಂಕಾರ ಹೆಚ್ಚಾಗುತ್ತದೆ. ಆಗ ಆಟ ನಮ್ಮ ಕೈತಪ್ಪಿ ಹೋಗುತ್ತದೆ. ಅಹಂಕಾರವನ್ನೇ ಬಿಡಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ವಿರಾಟ್ ಕೊಹ್ಲಿ ಬೆನ್ನಲ್ಲೇ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ನಾಯಕ ರೋಹಿತ್ ಶರ್ಮಾ
“ಆಟದ ಸ್ಥಿತಿ ಹಾಗೆಯೇ ಇತ್ತು. ನನಗೆ ನನ್ನ ಅಹಂಕಾರವನ್ನು ತೋರಿಸಲು ಅವಕಾಶವೇ ಇರಲಿಲ್ಲ. ತಂಡಕ್ಕಾಗಿ ನನ್ನ ಅಹಂಕಾರವನ್ನು ನಾನು ಬದಿಗೊತ್ತಬೇಕಾಗಿತ್ತು” ಎಂದು ತಿಳಿಸಿದ್ದಾರೆ.
When your arrogance rises, the game slips away from you.” – Virat Kohli in front of PM Modi.
Was this a veiled jab at PM Modi? pic.twitter.com/RkdyzZbfWx
— زماں (@Delhiite_) July 5, 2024
ಸದ್ಯ ಈ ವಿಡಿಯೋ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, “ವಿರಾಟ್ ಕೊಹ್ಲಿ ಪರೋಕ್ಷವಾಗಿ ಪ್ರಧಾನಿ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆಯೇ” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
“ಆ ಅಹಂಕಾರದಿಂದಾಗಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಒಬ್ಬರು (ನರೇಂದ್ರ ಮೋದಿ) 303 ಸ್ಥಾನದಿಂದ 240ಕ್ಕೆ ಇಳಿದಿದ್ದಾರೆ” ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದರೆ, “ಇನ್ನೊಬ್ಬರನ್ನು ಪರೋಕ್ಷವಾಗಿ ರೋಸ್ಟ್ ಮಾಡುವ ಪ್ರತಿಭೆ ಕೊಹ್ಲಿಗೆ ಇದೆ ಎಂದು ನನಗೆ ತಿಳಿದಿರಲಿಲ್ಲ” ಎಂದು ಮತ್ತೋರ್ವ ನೆಟ್ಟಿಗರು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಟಿ20 ವಿಶ್ವಕಪ್ ಫೈನಲ್ | ವಿರಾಟ್ ಕೊಹ್ಲಿ ಅರ್ಧಶತಕ; ದಕ್ಷಿಣ ಆಫ್ರಿಕಾಕ್ಕೆ ಸವಾಲಿನ ಗುರಿ ನೀಡಿದ ಟೀಮ್ ಇಂಡಿಯಾ
ಈ ಹಿಂದೆ 2021ರಲ್ಲಿ ಪಾಕಿಸ್ತಾನದ ಎದುರು ಭಾರತ ಸೋತಾಗ ಭಕ್ತರು ಮೊಹಮ್ಮದ್ ಶಮಿ ವಿರುದ್ಧ ಟ್ರೋಲ್ ಮಾಡಿದಾಗ ವಿರಾಟ್ ಕೊಹ್ಲಿ ಶಮಿ ಪರವಾಗಿ ನಿಂತಿದ್ದರು ಎಂಬುವುದನ್ನು ನೆಟ್ಟಿಗರೊಬ್ಬರು ನೆನಪಿಸಿಕೊಂಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಚಾರ್ ಸೋ ಪಾರ್ ಅಂದರೆ 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತನ್ನೆಲ್ಲ ಭಾಷಣಗಳಲ್ಲಿ ಹೇಳಿಕೊಂಡಿದ್ದರು. ಆದರೆ ಬಿಜೆಪಿ ಬಹುಮತವನ್ನು ಕೂಡಾ ಪಡೆಯಲು ಸಾಧ್ಯವಾಗದೆ ಸದ್ಯ ಮಿತ್ರ ಪಕ್ಷಗಳ ಸಹಾಯದಿಂದ ಸರ್ಕಾರ ರಚಿಸಿದೆ. ಇದಕ್ಕೆಲ್ಲ ಮೋದಿಯ ಅಹಂಕಾರವೇ ಕಾರಣ ಎಂದು ನೆಟ್ಟಿಗರು ಹೇಳಿದ್ದಾರೆ.




