ದೇಶದ ಒಟ್ಟು 51 ಕೋಟಿ ಮತದಾರರನ್ನು ಒಳಗೊಂಡ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಚುನಾವಣಾ ಆಯೋಗವು ನಾಳೆ (ನವೆಂಬರ್ 4)ದಿಂದ “ವಿಶೇಷ ತೀವ್ರ ಪರಿಷ್ಕರಣೆ”(ಎಸ್ಐಆರ್) ಅಭಿಯಾನವನ್ನು ಆರಂಭಿಸಲಿದೆ..
ಬಿಹಾರದಲ್ಲಿ ಪೂರ್ಣಗೊಂಡಿದ್ದ ಮೊದಲ ಹಂತದ ನಂತರ, ಇದು ಎರಡನೇ ಹಂತದ ಅಭಿಯಾನವಾಗಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 7, 2026 ರಂದು ಪ್ರಕಟಿಸಲಾಗುವುದು.
ಈ ಹಂತದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ಪುದುಚೇರಿ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿವೆ.
ಈ ರಾಜ್ಯಗಳಲ್ಲಿ ತಮಿಳುನಾಡು, ಪುದುಚೇರಿ, ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ 2026ರಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಅಸ್ಸಾಂ ರಾಜ್ಯದಲ್ಲಿ ಪೌರತ್ವ ಪರಿಶೀಲನೆ ಪ್ರಕ್ರಿಯೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವುದರಿಂದ, ಅಲ್ಲಿ ಪ್ರತ್ಯೇಕ ಆದೇಶದ ಮೂಲಕ ಎಸ್ಐಆರ್ ದಿನಾಂಕವನ್ನು ನಂತರ ಘೋಷಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಲೆಮಾರಿಗಳ ಛಲಕ್ಕೊಂದು ಸಲಾಂ; ಮಾತು ತಪ್ಪದಿರಲಿ ಸರ್ಕಾರ
ಎಸ್ಐಆರ್ ಪ್ರಕ್ರಿಯೆ ನವೆಂಬರ್ 4ರಿಂದ ಡಿಸೆಂಬರ್ 4ರವರೆಗೆ ನಡೆಯಲಿದ್ದು, ಡಿಸೆಂಬರ್ 9ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಅಂತಿಮ ಪಟ್ಟಿಯನ್ನು ಫೆಬ್ರವರಿ 7, 2026ರಂದು ಹೊರಬೀಳಲಿದೆ.
ಸ್ವಾತಂತ್ರ್ಯದ ನಂತರ ಇಂದಿನವರೆಗೆ ಇದು 9ನೇ ಬಾರಿಗೆ ನಡೆಯುತ್ತಿರುವ ಎಸ್ಐಆರ್ ಆಗಿದ್ದು, ಕೊನೆಯದಾಗಿ 2002–04ರ ಅವಧಿಯಲ್ಲಿ ಇಂತಹ ಅಭಿಯಾನ ನಡೆದಿತ್ತು. ಬಿಹಾರದಲ್ಲಿ ನಡೆದ ಮೊದಲ ಹಂತದ ಸಮಯದಲ್ಲಿ ವಿಪಕ್ಷಗಳು ಈ ಅಭಿಯಾನವು ಅನೇಕ ಭಾರತೀಯ ನಾಗರಿಕರನ್ನು ಮತದಾನದ ಹಕ್ಕಿನಿಂದ ವಂಚಿಸಬಹುದು ಎಂದು ಆರೋಪಿಸಿದ್ದವು. ನಂತರ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣ ವಿಚಾರಣೆಗೊಂಡ ನಂತರ ಚುನಾವಣಾ ಆಯೋಗವು ಯಾವುದೇ ಅರ್ಹ ನಾಗರಿಕರ ಹೆಸರನ್ನು ಪಟ್ಟಿಯಿಂದ ಕೈಬಿಡುವುದಿಲ್ಲ ಎಂದು ಭರವಸೆ ನೀಡಿತ್ತು.
ತಮಿಳುನಾಡಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಈ ಅಭಿಯಾನವನ್ನು ಪ್ರಶ್ನಿಸಲು ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ನಿರ್ಧಾರ ಕೈಗೊಂಡಿವೆ. ಈ ಬಾರಿ ಆಯೋಗವು ಬಿಹಾರದ ಎಸ್ಐಆರ್ ಪ್ರಕ್ರಿಯೆ ನಂತರ ಮತದಾರರ ಪಟ್ಟಿ ಹಾಗೂ ಆಧಾರ್ ಕಾರ್ಡ್ಅನ್ನು ಗುರುತಿನ ದಾಖಲೆಗಳ ಪಟ್ಟಿಗೆ ಸೇರಿಸಿದ್ದು, ದಾಖಲೆಗಳನ್ನು ತಕ್ಷಣವೇ ಸಲ್ಲಿಸುವ ಅಗತ್ಯವಿಲ್ಲ. ಚುನಾವಣಾ ನೋಂದಣಾಧಿಕಾರಿಯಿಂದ ನೋಟಿಸ್ ಬಂದಾಗ ಮಾತ್ರ ದಾಖಲಾತಿ ನೀಡುವಂತೆ ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.





