ರಿಪೇರಿಗಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯ ಸರ್ವೀಸ್ ಕೇಂದ್ರಕ್ಕೆ ನೀಡಿದ್ದ ಸ್ಕೂಟರ್ಅನ್ನು ಗ್ರಾಹಕರಿಗೆ ಮರಳಿಸದ ಮತ್ತು ಗ್ರಾಹಕರ ದೂರಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ, ಓಲಾ ಎಲೆಕ್ಟ್ರಿಕ್ ಸಂಸ್ಥಾಪಕ ಭವಿಷ್ ಅಗರ್ವಾಲ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ. ದಕ್ಷಿಣ ಗೋವಾದ ಜಿಲ್ಲಾ ‘ಗ್ರಾಹಕ ವಿವಾದಗಳ ಪರಿಹಾರ ಆಯೋಗ’ವು ಜಾಮೀನು ಸಹಿತ ವಾರಂಟ್ ಜಾರಿ ಮಾಡಿದೆ.
ಪ್ರಿತೇಶ್ ಚಂದ್ರಕಾಂತ್ ಘಾಡಿ ಎಂಬವರು ಸಲ್ಲಿಸಿದ್ದ ದೂರನ್ನು ಗ್ರಾಹಕ ಅಯೋಗವು ವಿಚಾರಣೆ ನಡೆಸಿದೆ. ಚಂದ್ರಕಾಂತ್ ಅವರು ದೂರಿನಲ್ಲಿ; “ತಮ್ಮ ವಾಹನವನ್ನು ರಿಪೇರಿಗಾಗಿ ವಾಸ್ಕೋದಲ್ಲಿರುವ ಓಲಾ ಎಲೆಕ್ಟ್ರಿಕ್ ಡೀಲರ್ಗೆ 2025ರ ನವೆಂಬರ್ನಲ್ಲಿ ಹಸ್ತಾಂತರಿಸಲಾಗಿತ್ತು. ಆದರೆ, ಪ್ರಸ್ತುತ ಆ ವಾಹನ ಎಲ್ಲಿದೆ ಎಂಬ ಮಾಹಿತಿ ಇಲ್ಲ. ತಮ್ಮ ಓಲಾ ದ್ವಿಚಕ್ರ ವಾಹನದ ಬಗ್ಗೆ ಕಂಪನಿಯು ಮಾಹಿತಿ ನೀಡುತ್ತಿಲ್ಲ. ತಮ್ಮ ಸ್ಕೂಟರ್ಅನ್ನು ಮರಳಿ ಕೊಡಿಸಬೇಕು” ಎಂದು ಮನವಿ ಮಾಡಿದ್ದರು.
ಈ ಹಿಂದೆ, ವಿಚಾರಣೆ ನಡೆಸಿದ್ದ ಆಯೋಗವು, “ದ್ವಿಚಕ್ರ ವಾಹನದ ಕುರಿತು ದೂರುದಾರರಿಗೆ ಯಾಕೆ ಮಾಹಿತಿ ನೀಡಿಲ್ಲ ಮತ್ತು ವಾಹನವನ್ನು ಈವರೆಗೆ ಯಾಕೆ ಹಿಂದಿರುಗಿಸಿಲ್ಲ ಎಂಬುದರ ಕುರಿತು ವಿವರಣೆ ನೀಡಲು ಓಲಾ ಎಲೆಕ್ಟ್ರಿಕ್ ಲಿಮಿಟೆಡ್ನ ಸಿಇಒ, ಸಂಸ್ಥಾಪಕ ಭವಿಷ್ ಅಗರ್ವಾಲ್ ಅವರು ಫೆಬ್ರವರಿ 4ರಂದು ಖುದ್ದಾಗಿ ಹಾಜರಾಗಬೇಕು” ಎಂದು ಆದೇಶಿಸಿತ್ತು.
ಆದರೆ, ಫೆಬ್ರವರಿ 4 ರಂದು ನಡೆದ ವಿಚಾರಣೆಯಲ್ಲಿ ಅಗರ್ವಾಲ್ ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ, ಇದೀಗ ಆಯೋಗವು ಅವರ ವಿರುದ್ಧ ಜಾಮೀನು ಸಹಿತ ವಾರಂಟ್ ಹೊರಡಿಸಿದೆ. ಆದೇಶದ ಪ್ರಕಾರ, “ಓಲಾ ಎಲೆಕ್ಟ್ರಿಕ್ ಲಿಮಿಟೆಡ್ನ ಸಿಇಒ, ಸಂಸ್ಥಾಪಕ ಭವಿಷ್ ಅಗರ್ವಾಲ್ ವಿರುದ್ಧ 1,47,499 ರೂ. ಮೊತ್ತದ ಜಾಮೀನು ಸಹಿತ ವಾರಂಟ್ ಅನ್ನು ಬೆಂಗಳೂರಿನ ಸಂಬಂಧಪಟ್ಟ ಪೊಲೀಸ್ ಠಾಣೆಯ ಮೂಲಕ ಜಾರಿಗೊಳಿಸಬೇಕು” ಎಂದು ಹೇಳಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 23ಕ್ಕೆ ನಿಗದಿ ಮಾಡಿದೆ.





