ಕೇರಳದ ವಯನಾಡ್ನಲ್ಲಿ ಭೂಕುಸಿತ ಸಂಭವಿಸಿ ಸುಮಾರು 1.3 ವರ್ಷ ಕಳೆದಿದೆ. ಇಂದಿಗೂ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ, ಭೂಕುಸಿತ ಸಂತ್ರಸ್ತರ ಸಾಲ ಮನ್ನಾ ಮಾಡಲು ಕೇಂದ್ರ ಸರ್ಕಾರ ನಿರಾಕರಿಸಿದ್ದು, ಸರ್ಕಾರದ ಧೋರಣೆಯನ್ನು ಕೇರಳ ಹೈಕೋರ್ಟ್ ಟೀಕಿಸಿದೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
2024ರ ಜುಲೈನಲ್ಲಿ ವಯನಾಡ್ನ ಮೆಪ್ಪಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿನಾಶಕಾರಿ ಭೂಕುಸಿತ ಸಂಭವಿಸಿತ್ತು. 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಹಲವಾರು ಮನೆಗಳು ಸಂಪೂರ್ಣ ಮತ್ತು ಭಾಗಶಃ ನಾಶವಾಗಿದ್ದು, ಸಾವಿರಾರು ಜನರು ನಿರಾಶ್ರಿತರಾಗಿದ್ದರು. ವಯನಾಡ್ ದುರಂತಕ್ಕೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಂಡಿತ್ತು.
ಮೊಕದ್ದಮೆಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಜೋಬಿನ್ ಸೆಬಾಸ್ಟಿಯನ್ ಅವರಿದ್ದ ಪೀಠವು, ಸಂತ್ರಸ್ತರ ಸಾಲ ಮನ್ನಾ ಮಾಡುವ ಕುರಿತು ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿತ್ತು.
ಹೈಕೋರ್ಟ್ನ ನೋಟಿಸ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರವು, “ನೈಸರ್ಗಿಕ ವಿಕೋಪಕ್ಕೆ ತುತ್ತಾದ ಸಂತ್ರಸ್ತರ ಸಾಲ ಮನ್ನಾ ಮಾಡಲು ಯಾವುದೇ ಕಾನೂನು ನಿಬಂಧನೆಗಳಿಲ್ಲ. ಆರ್ಬಿಐ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕುಗಳ ವಾಣಿಜ್ಯ ವ್ಯವಹಾರಗಳಲ್ಲಿ ಸಚಿವಾಲಯದ ಹಸ್ತಕ್ಷೇಪ ಸೀಮಿತವಾಗಿದೆ” ಎಂದು ಹೇಳಿದೆ.
ಕೇಂದ್ರದ ಪ್ರತಿಕ್ರಿಯೆಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, “ಕೇಂದ್ರ ಸರ್ಕಾರವು ಕೇರಳದ ಜನರನ್ನು ನಿರಾಶೆಗೊಳಿಸಿದೆ. ಸರ್ಕಾರಕ್ಕೆ ಕ್ರಮ ಕೈಗೊಳ್ಳಲು ಇಚ್ಚೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಧೈರ್ಯವಿದ್ದರೆ, ಸಾಲ ಮನ್ನಾ ಮಾಡಲು ತಮಗೆ ಇಚ್ಛಾಶಕ್ತಿ ಇಲ್ಲವೆಂದು ನೇರವಾಗಿ ಹೇಳಿಬಿಡಿ. ಅಧಿಕಾರದ ಕೊರತೆಯ ನೆಪವೊಡ್ಡಿ, ಅವಿತುಕೊಳ್ಳಬೇಡಿ. ನೀವು ಯಾರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನದಲ್ಲಿದ್ದೀರಿ” ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ಈ ಲೇಖನ ಓದಿದ್ದೀರಾ?: ನಿಗಮ-ಮಂಡಳಿ-ಪ್ರಾಧಿಕಾರ ಅಧ್ಯಕ್ಷ ಸ್ಥಾನ | ಬೆಂಗಳೂರಿಗೆ 12, ಮಂಗಳೂರಿಗೆ 5, 11 ಜಿಲ್ಲೆಗೆ ಪ್ರಾತಿನಿಧ್ಯವೇ ಇಲ್ಲ!
“ಕಳೆದ ವರ್ಷ (2024) ಪ್ರವಾಹ ಮತ್ತು ಭೂಕುಸಿತಕ್ಕೆ ತುತ್ತಾಗಿದ್ದ ಅಸ್ಸಾಂ, ಗುಜರಾತ್, ಹರಿಯಾಣ, ಮಧ್ಯಪ್ರದೇಶ ಹಾಗೂ ರಾಜಸ್ಥಾನಕ್ಕೆ ಕೇಂದ್ರವು ಸಾಕಷ್ಟು ನೆರವು ನೀಡಿದೆ. ಅಸ್ಸಾಂ ಮತ್ತು ಗುಜರಾತ್ಗೆ 707.97 ಕೋಟಿ ರೂ. ಹೆಚ್ಚುವರಿ ನೆರವು ನೀಡಿದೆ. ಹರಿಯಾಣ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಿಗೆ ಅಗ್ನಿಶಾಮಕ ಸೇವೆಗಳ ವಿಸ್ತರಣೆಗಾಗಿ 903.67 ಕೋಟಿ ರೂ. ಒದಗಿಸಿದೆ. ಆದರೆ, ಕೇರಳಕ್ಕೆ ನೆರವು ನಮೀಡಲು ಹಣ-ಅಧಿಕಾರ ಇಲ್ಲವೇ? ಇದು ಹಣ/ಅಧಿಕಾರ ಕೊರತೆಯ ವಿಷಯವಲ್ಲ” ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
“ನಮ್ಮ ಸಂವಿಧಾನಿಕ ಅಧಿಕಾರಗಳ ಪ್ರತ್ಯೇಕತೆಯನ್ನು ನಾವು ಗೌರವಿಸುತ್ತೇವೆ. ಆ ಕಾರಣಕ್ಕಾಗಿ, ನಾವು ಕೇಂದ್ರ ಸರ್ಕಾರಕ್ಕೆ ನೇರವಾದ ನಿರ್ದೇಶನ ನೀಡುವುದಿಲ್ಲ. ನಮಗೆ ಕೇಂದ್ರ ಸರ್ಕಾರದ ದಾನದ ಅಗತ್ಯವಿಲ್ಲ” ಎಂದು ಕಿಡಿಕಾರಿದೆ.
ಕೇಂದ್ರ ಸರ್ಕಾರದ ಧೋರಣೆಯ ಕುರಿತು ಪ್ರತಿಕ್ರಿಯಿಸಿರುವ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ, “ವಯನಾಡ್ ಭೂಕುಸಿತದ ಸಂತ್ರಸ್ತರ ಸಾಲ ಮನ್ನಾ ಮಾಡಲು ಸರ್ಕಾರ ನಿರಾಕರಿಸಿರುವುದು ಆಘಾತಕಾರಿ ಸಂಗತಿ. ದೊಡ್ಡ ಕಂಪನಿಗಳ ಬೃಹತ್ ಸಾಲವನ್ನು ಸುಲಭವಾಗಿ ಮನ್ನಾ ಮಾಡುವ ಸರ್ಕಾರ, ತಮ್ಮ ತಪ್ಪಿಲ್ಲದೆ ನೋವು ಅನುಭವಿಸಿದ ಸಾಮಾನ್ಯ ಜನರ ಕುರಿತು ಮಾನವೀಯತೆ ತೋರುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




