ಬಂಗಾಳದಲ್ಲಿ ‘ಜೀರೋ ಲಾಸ್’ (ಶೂನ್ಯ ನಷ್ಟ) ಮತ್ತು ‘ಹೈ ಪ್ರಾಫಿಟ್ (ಅಧಿಕ ಲಾಭ) ತಂತ್ರ ಅಳವಡಿಸಿಕೊಂಡಿದೆ. ಹಿಂದು ಮತಗಳನ್ನು ಮತ್ತಷ್ಟು ಸೆಳೆಯುವುದರ ಜೊತೆಗೆ, ಮುಸ್ಲಿಮರನ್ನು ಓಲೈಕೆ ಮಾಡಲು ಸಂಚು ಹೆಣೆಯುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಮುಂದಿನ ವರ್ಷ (2026) ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೂ ಮುನ್ನ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ನಡೆಸುತ್ತಿದೆ. ಬಾಂಗ್ಲಾ ಗಡಿಗೆ ಹೊಂದಿಕೊಂಡಿರುವ ರಾಜ್ಯದಲ್ಲಿ ನುಸುಳುಕೋರರೆಂಬ ಆರೋಪ-ಹಣೆಪಟ್ಟಿಯೊಂದಿಗೆ ಹಲವರನ್ನು ಮುಖ್ಯವಾಗಿ ಮುಸ್ಲಿಮರನ್ನು ಮತಪಟ್ಟಿಯಿಂದ ಹೊರಗಿಡುವ ಬಿಜೆಪಿಯ ಹುನ್ನಾರಕ್ಕೆ ಅನುಗುಣವಾಗಿ ಆಯೋಗವು ಎಸ್ಐಆರ್ ನಡೆಸುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ಒಂದೆಡೆ, ವಿರೋಧಿಗಳನ್ನು ಮತಗಳನ್ನು ಹೊರಗಿಡಲು ನೋಡುತ್ತಿರುವ ಬಿಜೆಪಿ, ಮತ್ತೊಂದೆಡೆ ಬಂಗಾಳವನ್ನು ಗೆಲ್ಲಲು ಮುಸ್ಲಿಮರ ಓಲೈಕೆಗೂ ತಂತ್ರಗಳನ್ನು ಹೆಣೆಯುತ್ತಿದೆ ಎನ್ನಲಾಗಿದೆ.
ಬಂಗಾಳದಲ್ಲಿ ಸುಮಾರು 27ರಿಂದ 30% ಮುಸ್ಲಿಮರಿದ್ದಾರೆ. ಚುನಾವಣಾ ಫಲಿತಾಂಶದ ಮೇಲೆ ಗಮನಾರ್ಹ ಪರಿಣಾಮವನ್ನೂ ಬೀರಲಿದ್ದಾರೆ. ಮುಸ್ಲಿಂ ಸಮುದಾಯವು ಒಗ್ಗಟ್ಟಿನಿಂದ ಒಂದು ಪಕ್ಷಕ್ಕೆ ಮತ ಚಲಾಯಿಸಿದರೆ, ಆ ಪಕ್ಷವೇ ಅಧಿಕಾರಕ್ಕೇರುವುದು ಬಹುತೇಕ ಖಚಿತ ಎಂಬ ಮಾತುಗಳೂ ಇವೆ. ಸದ್ಯ, ಬಂಗಾಳದಲ್ಲಿ ಮುಸ್ಲಿಂ ಸಮುದಾಯವು ಆಡಳಿತಾರೂಢ ಟಿಎಂಸಿ ಜೊತೆಗಿದೆ. ಮಮತಾ ಬ್ಯಾನರ್ಜಿ ಅವರ ಪಕ್ಷದೊಂದಿಗಿರುವ ಮುಸ್ಲಿಮರನ್ನು ಟಿಎಂಸಿಯಿಂದ ದೂರ ಸರಿಸಲು ಮತ್ತು ಮುಸ್ಲಿಂ ಮತಗಳನ್ನು ಒಡೆಯುವುದು ಬಿಜೆಪಿಯ ಸದ್ಯದ ಗುರಿ.
ಈಗಾಗಲೇ, ಬಂಗಾಳದಲ್ಲಿ ಹಿಂದುತ್ವ, ನುಸುಳುಕೋರರು ಎಂಬ ಪರಿಭಾಷೆ ಬಳಸಿ ಹಿಂದುಗಳ ವಿಶೇಷವಾಗಿ ಪ್ರಬಲ ಜಾತಿಯ ಮತಗಳನ್ನು ಬಿಜೆಪಿ ಕ್ರೋಢೀಕರಿಸಿದೆ. ಹಿಂದು ಮತಗಳ ಧ್ರುವೀಕರಣದೊಂದಿಗೆ 2021ರ ವಿಧಾಸನಭಾ ಚುನಾವಣೆಯಲ್ಲಿ ಬಿಜೆಪಿ 77 ಸ್ಥಾನಗಳನ್ನು ಗೆದ್ದಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ 18 ಸ್ಥಾನಗಳಿಗೆ ಸೀಮಿತವಾಯಿತು. ಈ ಎರಡೂ ಚುನಾವಣೆಗಳಲ್ಲಿ ಟಿಎಂಸಿ ಅಭೂತಪೂರ್ವ ಗೆಲುವು ದಾಖಲಿಸಿತು. ಈ ಗೆಲುವಿಗೆ ಮುಸ್ಲಿಮರ ಒಗ್ಗಟ್ಟಿನ ಮತದಾನ ಮುಖ್ಯ ಕಾರಣವೂ ಆಯಿತು.
ಟಿಎಂಸಿ ಗೆಲುವಿನ ನಾಗಾಲೋಟಕ್ಕೆ ತಡೆಯೊಡ್ಡಬೇಕಾದರೆ, ಮುಸ್ಲಿಂ ಮತಗಳನ್ನು ಒಡೆಯುವುದು ಅವಶ್ಯ. ಮುಸ್ಲಿಂ ಸಮುದಾಯಗಳ ಮತಗಳನ್ನು ಛಿದ್ರಗೊಳಿಸಬೇಕು ಅಥವಾ ತಮ್ಮನ್ನ ಸೆಳೆಯಬೇಕು ಎಂಬುದನ್ನು ಬಿಜೆಪಿ ಅರಿತಿದೆ. ಮುಸ್ಲಿಮರ ಓಲೈಕೆಗಾಗಿ ‘ರಾಷ್ಟ್ರವಾದಿ ಮುಸ್ಲಿಮರು’ ಎಂಬ ಪದ ಪ್ರಯೋಗ ಮತ್ತು ಸೌಮ್ಯ ಭಾಷಾ ಬಳಕೆ ಮಾಡುತ್ತಿದೆ.
ಇತ್ತೀಚೆಗೆ ಬಿಹಾರದಲ್ಲಿ ಎನ್ಡಿಗೆ ಭಾರೀ ಬಹುಮತ ಪಡೆದಿರುವುದು ಬಿಜೆಪಿಗೆ ಹೊಸ ಹುರುಪನ್ನೂ ನೀಡಿದೆ. ಬಂಗಾಳದಲ್ಲಿ ‘ಜೀರೋ ಲಾಸ್’ (ಶೂನ್ಯ ನಷ್ಟ) ಮತ್ತು ‘ಹೈ ಪ್ರಾಫಿಟ್ (ಅಧಿಕ ಲಾಭ) ತಂತ್ರ ಅಳವಡಿಸಿಕೊಂಡಿದೆ. ಹಿಂದು ಮತಗಳನ್ನು ಮತ್ತಷ್ಟು ಸೆಳೆಯುವುದರ ಜೊತೆಗೆ, ಮುಸ್ಲಿಮರನ್ನು ಓಲೈಕೆ ಮಾಡಲು ಸಂಚು ಹೆಣೆಯುತ್ತಿದೆ.
ಬಂಗಾಳ ಬಿಜೆಪಿ ಅಧ್ಯಕ್ಷ ಸಮೀಕ್ ಭಟ್ಟಾಚಾರ್ಯ ಅವರು ಮುಸ್ಲಿಮರು ತಮ್ಮ ಸೋದರರು ಎಂಬಂತೆ ಮಾತನಾಡುತ್ತಿದ್ದಾರೆ. 2025ರ ಜುಲೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಟ್ಟಾಚಾರ್ಯ, “ಮುಸ್ಲಿಮ್ ಬಾಯ್ಗಳ (ಮುಸ್ಲಿಂ ಸಹೋದರ) ಕೈಯಲ್ಲಿ ಕಲ್ಲುಗಳ ಬದಲು, ಪೆನ್ಗಳನ್ನು ಕೊಡುತ್ತೇವೆ” ಎಂದಿದ್ದರು. ‘ಬಂಗಾಳದಲ್ಲಿರುವ ಮುಸ್ಲಿಮರು ಪ್ರಗತಿಪರ, ರಾಷ್ಟ್ರವಾದಿ ಮುಸ್ಲಿಮರು’ ಎಂದಿದ್ದರು.
ಮುಂದುವರೆದು, ಬಂಗಾಳದಲ್ಲಿ ಬಿಜೆಪಿ ಮುಸ್ಲಿಂ ಸಮುದಾಯವನ್ನು ಒಳಗೊಂಡ ‘ಸ್ನೇಹ ಮಿಲನ’, ‘ಅಲ್ಪಸಂಖ್ಯಾತ ಸ್ನೇಹ ಸಂವಾದ’ ಎಂಬಂತಹ ಕಾರ್ಯಕ್ರಮಗಳನ್ನೂ ನಡೆಸುತ್ತಿದೆ. ಮುಸ್ಲಿಮರೊಂದಿಗೆ ಸಂವಾದಗಳನ್ನು ನಡೆಸುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳಾದ ‘ಕೃಷಿಕ ಸಮ್ಮಾನ್ ನಿಧಿ’ ಮತ್ತು ‘ಆಯುಷ್ಮಾನ್ ಭಾರತ’ ಯೋಜನೆಗಳನ್ನು ಮುಸ್ಲಿಂ ಕುಟುಂಬಗಳಿಗೆ ತಲುಪಿಸಲು ‘ಬಾಗಿಲಿನಿಂದ ಬಾಗಿಲಿಗೆ’ (ಡೋರ್ ಟು ಡೋರ್) ಅಭಿಯಾನ ನಡೆಸುತ್ತಿದೆ. ಮುಖ್ಯವಾಗಿ, ಮುರ್ಶೀದಾಬಾದ್ ಮತ್ತು ಮಾಲ್ದಾ ಜಿಲ್ಲೆಗಳಲ್ಲಿ ಈ ಅಭಿಯಾನವು ಚುರುಕಿನಿಂದ ಸಾಗಿದೆ.
ಉತ್ತರ ಬಂಗಾಳದಲ್ಲಿ ಹೆಚ್ಚಾಗಿ ನೆಲೆಸಿರುವ ಪಾಸ್ಮಂಡಾ ಮತ್ತು ರ್ಯಾಜ್ಬನ್ಶಿ ಮುಸ್ಲಿಮರನ್ನು ಸೆಳೆಯಲು ಈ ಪ್ರದೇಶಗಳಲ್ಲಿ ಮೋದಿ ರ್ಯಾಲಿಗಳನ್ನು ನಡೆಸುತ್ತಿದ್ದಾರೆ. ಸಂದೇಶ್ಖಾಲಿ ಘಟನೆಯನ್ನು ಮುನ್ನೆಲೆಗೆ ತಂದು ಟಿಎಂಸಿ ವಿರುದ್ಧ ಮುಸ್ಲಿಂ ಸಮುದಾಯದಲ್ಲಿ ಅಸಮಾಧಾನ ಹುಟ್ಟುಹಾಕುವ ಮತ್ತು ಮುಸ್ಲಿಂ ಮತಗಳನ್ನು ಒಡೆಯಲು ಮೋದಿ-ಅಮಿತ್ ಶಾ ಜೋಡಿ ಯತ್ನಿಸುತ್ತಿದೆ.
ಈ ಲೇಖನ ಓದಿದ್ದೀರಾ?: ಮುರ್ಶಿದಾಬಾದ್ನಲ್ಲಿ ‘ಬಾಬರಿ ಮಸೀದಿ’: ಕಬೀರ್ ನಡೆ ಬಿಜೆಪಿ ಚುನಾವಣಾ ತಂತ್ರ!
ಮುಖ್ಯವಾಗಿ, ಮಮತಾ ಬ್ಯಾನರ್ಜಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ, 2012ರಲ್ಲಿ ಮುಸ್ಲಿಮರಿಗೆ ಒಬಿಸಿ ಮೀಸಲಾತಿ ನೀಡಿದ್ದರು. ಇದನ್ನು ಬಿಜೆಪಿ ‘ಮುಸ್ಲಿಂ ಆಪೀಸ್ಮೆಂಟ್’ ಎಂದು ಕರೆದಿತ್ತು. ಆದಾಗ್ಯೂ, 2024ರಲ್ಲಿ ಕೋಲ್ಕತ್ತಾ ಹೈಕೋರ್ಟ್ ಈ ಮೀಸಲಾತಿಯನ್ನು ರದ್ದುಗೊಳಿಸಿತು. ಹೀಗಾಗಿ ಮತ್ತೆ ಮುಸ್ಲಿಮರಿಗೆ ಒಬಿಸಿ ಮೀಸಲಾತಿ ಒದಗಿಸುವ ಭರವಸೆಯು ಬಿಜೆಪಿಯ ಅಜೆಂಡಾಗಳನ್ನು ಸೇರಲಿದೆ ಎಂಬ ಅಭಿಪ್ರಾಯಗಳಿವೆ.
ಜೊತೆಗೆ, ಮುರ್ಶೀದಾಬಾದ್ನಲ್ಲಿ ಬಾಬರಿ ಮಸೀದಿ ರೀತಿಯ ಮಸೀದಿ ನಿರ್ಮಾಣಕ್ಕೆ ಟಿಎಂಸಿಯಿಂದ ಅಮಾನತುಗೊಂಡಿರುವ ಶಾಸಕ ಹುಮಾಯೂನ್ ಕಬೀರ್ ಅಡಿಗಲ್ಲು ಇಟ್ಟಿದ್ದಾರೆ. ಕಬೀರ್ ಮುನ್ನೆಲೆಗೆ ತಂದಿರುವ ಬಾಬರಿ ಮಸೀದಿ ವಿಚಾರ ಮತ್ತು ಹೊಸ ಪಕ್ಷ ಕಟ್ಟುವ ಯೋಜನೆಯು ಮುಸ್ಲಿಂ ಮತಗಳನ್ನು ಒಡೆಯಲು ಬಿಜೆಪಿಗೆ ನೆರವಾಗುವ ಸಾಧ್ಯತೆಗಳು ದಟ್ಟವಾಗಿವೆ.
ಬಿಜೆಪಿಯು ಮುಸ್ಲಿಂ ಮತಗಳನ್ನು ಒಡೆಯುವಲ್ಲಿ ಸಫಲವಾದರೆ, 2026ರ ಚುನಾವಣೆಯಲ್ಲಿ ಟಿಎಂಸಿಗೆ ಮುಸ್ಲಿಂ ಮತಗಳ ಪಾಲು ಕಡಿಮೆಯಾಗಬಹುದು, ಬಿಜೆಪಿ 5ರಿಂದ 7% ಮುಸ್ಲಿಂ ಮತಗಳನ್ನು ಪಡೆದುಕೊಳ್ಳಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ. ಮುಸ್ಲಿಮರು ಟಿಎಂಸಿಯಿಂದ ಹಿಂದೆ ಸರಿದರೆ, ಚುನಾವಣಾ ಫಲಿತಾಂಶದಲ್ಲಿ ಅತಂತ್ರ ವಿಧಾನಸಭೆ ಉಂಟಾಗಬಹುದು. ಆದರೆ, ಮುಸ್ಲಿಂ ಸಮುದಾಯವು ಟಿಎಂಸಿಯಿಂದ ವಿಮುಖವಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಅಸಾಧ್ಯ ಎಂಬ ಸ್ಪಷ್ಟ ಅಭಿಪ್ರಾಯಗಳೂ ಇವೆ.




