ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಿಂದ (ಎಸ್ಐಆರ್) ಉದ್ಭವಿಸಿರುವ ಸುಮಾರು 80 ಲಕ್ಷ ಹಕ್ಕು ಕೋರಿಕೆಗಳು ಮತ್ತು ಆಕ್ಷೇಪಣೆಗಳ ಇತ್ಯರ್ಥಕ್ಕಾಗಿ ಸಿವಿಲ್ ನ್ಯಾಯಾಧೀಶರನ್ನು ನಿಯೋಜಿಸಲು ಹಾಗೂ ನೆರೆಯ ಜಾರ್ಖಂಡ್ ಮತ್ತು ಒಡಿಶಾಗಳಿಂದ ನ್ಯಾಯಾಂಗ ಅಧಿಕಾರಿಗಳ ಸೇವೆಯನ್ನು ಕೋರಲು ಕೋಲ್ಕತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮಂಗಳವಾರ ಅನುಮತಿಯನ್ನು ನೀಡಿದೆ.
ಪ್ರಸ್ತುತ ಎಸ್ಐಆರ್ ಪರಿಶೀಲನೆಗಾಗಿ ನಿಯೋಜಿಸಲಾಗಿರುವ 250 ಜಿಲ್ಲಾ ನ್ಯಾಯಾಧೀಶರಿಗೆ ಹಕ್ಕು ಕೋರಿಕೆಗಳು ಮತ್ತು ಆಕ್ಷೇಪಣೆಗಳನ್ನು ಇತ್ಯರ್ಥಗೊಳಿಸಲು ಸುಮಾರು 80 ದಿನಗಳು ಬೇಕಾಗುತ್ತವೆ ಎಂದು ತಿಳಿಸಿ ಕೋಲ್ಕತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಬರೆದಿರುವ ಪತ್ರವನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಗಮನಕ್ಕೆ ತೆಗೆದುಕೊಂಡಿತು.
ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸಿವಿಲ್ ನ್ಯಾಯಾಧೀಶರ ನಿಯೋಜನೆಗೆ ಅನುಮತಿಯನ್ನು ನೀಡಿದ ಪೀಠವು, ಸಮಾನ ಶ್ರೇಣಿಯ ನ್ಯಾಯಾಂಗ ಅಧಿಕಾರಿಗಳ ಸೇವೆಯನ್ನು ಕೋರಿ ಜಾರ್ಖಂಡ್ ಮತ್ತು ಒಡಿಶಾ ಹೈಕೋರ್ಟ್ಗಳ ಮುಖ್ಯ ನ್ಯಾಯಾಧೀಶರನ್ನು ಸಂಪರ್ಕಿಸುವಂತೆ ಕೋಲ್ಕತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಸೂಚಿಸಿತು.
ಇದನ್ನು ಓದಿದ್ದೀರಾ? ಶೋಯೆಬ್ ಖಾನ್ | ಬಿಹಾರದ ಕುಗ್ರಾಮದಿಂದ ಯುಎಇ ವಿಶ್ವಕಪ್ ತಂಡದವರೆಗೆ ರೋಚಕ ಪಯಣ
ನೆರೆಯ ರಾಜ್ಯಗಳಿಂದ ನ್ಯಾಯಾಂಗ ಅಧಿಕಾರಿಗಳ ನಿಯೋಜನೆಯ ವೆಚ್ಚವನ್ನು ಭರಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದ ಪೀಠವು, ಕೋಲ್ಕತಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮನವಿಯನ್ನು ಪರಿಗಣಿಸುವಂತೆ ಜಾರ್ಖಂಡ್ ಮತ್ತು ಒಡಿಶಾ ಹೈಕೋರ್ಟ್ಗಳಿಗೆ ಸೂಚಿಸಿತು.
ನ್ಯಾಯಾಂಗ ಅಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಸಲ್ಲಿಸುವುದು ಚುನಾವಣಾ ನೋಂದಣಾಧಿಕಾರಿಗಳು/ಸಹಾಯಕ ನೋಂದಣಾಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಪೀಠವು ತಿಳಿಸಿತು.
ಎಸ್ಐಆರ್ ನಂತರದ ಅಂತಿಮ ಮತದಾರರ ಪಟ್ಟಿಯನ್ನು ಫೆ.28ರಂದು ಪ್ರಕಟಿಸಲು ಚು.ಆಯೋಗಕ್ಕೆ ಅನುಮತಿ ನೀಡಿದ ಸರ್ವೋಚ್ಚ ನ್ಯಾಯಾಲಯವು, ‘ತಾರ್ಕಿಕ ವ್ಯತ್ಯಾಸಗಳ’ ಪರಿಶೀಲನೆಯು ಅಷ್ಟರೊಳಗೆ ಪೂರ್ಣಗೊಂಡಿರದಿದ್ದರೆ ಪ್ರಕ್ರಿಯೆಯು ಪೂರ್ಣಗೊಳ್ಳುತ್ತಿದ್ದಂತೆ ಪೂರಕ ಪಟ್ಟಿಗಳನ್ನು ಹೊರಡಿಸಬಹುದು ಎಂದು ತಿಳಿಸಿತು.
ಪಶ್ಚಿಮ ಬಂಗಾಳದಲ್ಲಿ ವಿವಾದಾತ್ಮಕ ಎಸ್ಐಆರ್ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.





