ಸಂಗಾತಿ ಜೀವಂತವಾಗಿರುವಾಗಲೇ ಎರಡನೇ ಅಥವಾ ಮೂರನೇ ವಿವಾಹವಾಗುವ ವ್ಯಕ್ತಿಯು ಈ ಕಾನೂನಿನಡಿಯಲ್ಲಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಹಾಗೆಯೇ ಈ ಕಾನೂನು ಪ್ರಕಾರ ಆರೋಪಿಯು ತಕ್ಷಣ ಜಾಮೀನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಪತಿ ಈ ಕಾನೂನಡಿಯಲ್ಲಿ ಬಂಧನಕ್ಕೆ ಒಳಗಾದರೆ ಪತ್ನಿಗೆ ಪರಿಹಾರ ನಿಧಿಯನ್ನು ನೀಡಲಾಗುತ್ತದೆ.
ಒಂದಕ್ಕಿಂತ ಹೆಚ್ಚು ವಿವಾಹವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಬಹುಪತ್ನಿತ್ವ ನಿಷೇಧ ಮಸೂದೆ, 2025 ಅನ್ನು ಅಸ್ಸಾಂ ಸರ್ಕಾರವು ಅನುಮೋದಿಸಿದೆ. ಗುವಾಹಟಿಯ ಲೋಕಸೇವಾ ಭವನದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಮೂಲಕ ಅಸ್ಸಾಂ ಬಹುಪತ್ನಿತ್ವವನ್ನು ನಿಷೇಧಿಸಿದ ಮೊದಲ ಈಶಾನ್ಯ ರಾಜ್ಯ ಎನಿಸಿಕೊಂಡಿದೆ.
ಸಂಗಾತಿ ಜೀವಂತವಾಗಿರುವಾಗಲೇ ಎರಡನೇ ಅಥವಾ ಮೂರನೇ ವಿವಾಹ ವಿವಾಹವಾಗುವ ವ್ಯಕ್ತಿಯು ಈ ಕಾನೂನಿನಡಿಯಲ್ಲಿ ಏಳು ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಹಾಗೆಯೇ ಈ ಕಾನೂನು ಪ್ರಕಾರ ಆರೋಪಿಯು ತಕ್ಷಣ ಜಾಮೀನು ಪಡೆಯಲೂ ಕೂಡಾ ಸಾಧ್ಯವಾಗುವುದಿಲ್ಲ. ಹಾಗೆಯೇ ಪತಿ ಈ ಕಾನೂನಡಿಯಲ್ಲಿ ಬಂಧನಕ್ಕೆ ಒಳಗಾದರೆ ಮಹಿಳೆಗೆ ಪರಿಹಾರ ನಿಧಿಯನ್ನು ನೀಡಲಾಗುತ್ತದೆ. ಆದರೆ ಈ ಕಾನೂನು ಎಲ್ಲರಿಗೂ ಅನ್ವಯವಾಗುವುದಿಲ್ಲ.
ಇದನ್ನು ಓದಿದ್ದೀರಾ? ಭಾರತದ ಮುಸ್ಲಿಮರು ಮತ್ತು ಬಹುಪತ್ನಿತ್ವ: ಸತ್ಯ V/s ಮಿಥ್ಯ
ಭಾರತದಲ್ಲಿ ಬಹುಪತ್ನಿತ್ವವು ಎಲ್ಲಾ ನಾಗರಿಕರಿಗೆ ಸಂಪೂರ್ಣವಾಗಿ ನಿಷಿದ್ಧವಲ್ಲ. ಆದರೆ ಬಹುತೇಕ ಧರ್ಮಗಳ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಬಹುಪತ್ನಿತ್ವ ನಿಷೇಧಿಸಲಾಗಿದೆ. ಹಾಗೆಯೇ ಕಾನೂನುಗಳು ಧರ್ಮದಿಂದ ಧರ್ಮಕ್ಕೆ ಭಿನ್ನವಾಗಿವೆ. 1955ರ ಹಿಂದೂ ವಿವಾಹ ಕಾಯಿದೆಯ ಅಡಿಯಲ್ಲಿ ಹಿಂದೂಗಳಿಗೆ ಬಹುಪತ್ನಿತ್ವವನ್ನು ನಿಷೇಧಿಸಲಾಗಿದೆ. ಮೊದಲ ಸಂಗಾತಿ ಜೀವಂತವಿರುವಾಗ ಎರಡನೇ ಮದುವೆಯಾಗುವುದು ಅಪರಾಧವಾಗಿದ್ದು, ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಶಿಕ್ಷಾರ್ಹವಾಗಿದೆ. ಬೌದ್ಧ, ಜೈನ ಮತ್ತು ಸಿಖ್ಖರಿಗೂ ಬಹುಪತ್ನಿತ್ವ ನಿಷೇಧವಾಗಿದೆ.
1872ರ ಭಾರತೀಯ ಕ್ರಿಶ್ಚಿಯನ್ ವಿವಾಹ ಕಾಯಿದೆ ಅಡಿಯಲ್ಲಿ ಕ್ರೈಸ್ತರಿಗೆ ಬಹುಪತ್ನಿತ್ವವನ್ನು ನಿಷೇಧಿಸಲಾಗಿದೆ. 1936ರ ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯಿದೆಯೂ ಪಾರ್ಸಿಗಳಿಗೆ ದ್ವಿಪತ್ನಿತ್ವವನ್ನು ನಿಷೇಧಿಸುತ್ತದೆ. 1954ರ ವಿಶೇಷ ವಿವಾಹ ಕಾಯಿದೆಯ ಅಡಿಯಲ್ಲಿ ನಡೆಯುವ ಅಂತರ್-ಧರ್ಮೀಯ ವಿವಾಹಗಳಿಗೆ ಏಕಪತ್ನಿತ್ವ (monogamy) ಕಡ್ಡಾಯವಾಗಿದೆ. ಆದರೆ 1937ರ ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅನ್ವಯ ಕಾಯಿದೆಯಡಿಯಲ್ಲಿ ಮುಸ್ಲಿಂ ಪುರುಷರು ಗರಿಷ್ಠ ನಾಲ್ಕು ವಿವಾಹವಾಗಲು ಅವಕಾಶವಿದೆ. ಆದರೆ ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ ಮುಸ್ಲಿಮರಿಗೆ ಬಹುಪತ್ನಿತ್ವಕ್ಕೆ ಅವಕಾಶ ನೀಡುವುದಿಲ್ಲ.
ಅಸ್ಸಾಂ ಬಹುಪತ್ನಿತ್ವ ನಿಷೇಧದಿಂದ ಯಾರಿಗೆ ವಿನಾಯಿತಿ, ಯಾಕೆ?
ಈ ಮಸೂದೆಯ ಪ್ರಕಾರ ಕಾನೂನುಬದ್ಧವಾಗಿ ವಿವಾಹ ವಿಚ್ಛೇದನವನ್ನು ಪಡೆಯದೆ ಹೊಸದಾಗಿ ಮದುವೆಯಾದರೆ ಅದು ಅಪರಾಧವಾಗಿದೆ. ಆದರೆ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಈ ಕಾನೂನು ಅಸ್ಸಾಂನ ಬುಡಕಟ್ಟು ಸಮುದಾಯಗಳಿಗೆ ಅನ್ವಯವಾಗಲ್ಲ. ಹಾಗೆಯೇ ಬೋಡೋಲ್ಯಾಂಡ್, ಕರ್ಬಿ ಆಂಗ್ಲಾಂಗ್, ದಿಮಾ ಹಸಾವೊ ಜಿಲ್ಲೆಗಳನ್ನು ಒಳಗೊಂಡಂತೆ ಅಸ್ಸಾಂನ ಆರನೇ ಪರಿಚ್ಛೇದಕ್ಕೆ ಸೇರುವ ಪ್ರದೇಶಗಳಲ್ಲಿ ಈ ಕಾನೂನು ಜಾರಿಗೆ ಬರಲ್ಲ. ಜತೆಗೆ ಸಂವಿಧಾನದ ಆರನೇ ಆರನೇ ಪರಿಚ್ಛೇದದಡಿಯಲ್ಲಿ ಬರುವ ಪ್ರದೇಶಗಳಲ್ಲಿ 2005ಕ್ಕೂ ಹಿಂದಿನಿಂದ ವಾಸವಿರುವ ಅಲ್ಪಸಂಖ್ಯಾತ ಮುಸ್ಲಿಮರಿಗೂ ಈ ಕಾನೂನಿನಿಂದ ವಿನಾಯಿತಿ ಇದೆ. ಆದರೆ ರಾಜ್ಯದ ಇತರೆ ಭಾಗದ ಮುಸ್ಲಿಮರಿಗೆ ಬಹುಪತ್ನಿತ್ವವನ್ನು ನಿಷೇಧಿಸಲಾಗಿದೆ.
ಈ ಕಾನೂನಿಗೆ ವಿರೋಧವೇಕೆ?
ಈ ಕಾನೂನು ಮಹಿಳಾ ಹಕ್ಕುಗಳಿಗೆ ಉತ್ತೇಜನ ನೀಡುವ ಸಾಮಾಜಿಕ ಸುಧಾರಣಾ ಕ್ರಮವಾಗಿದೆ ಎಂದು ಅಸ್ಸಾಂ ಸರ್ಕಾರ ಹೇಳಿಕೊಳ್ಳುತ್ತಿದೆ. ಆದರೆ ಹಲವು ಕಾರಣಗಳಿಂದಾಗಿ ಈ ಕಾನೂನಿಗೆ ವಿರೋಧ ವ್ಯಕ್ತವಾಗಿದೆ. ಈ ಮಸೂದೆಯು ಧಾರ್ಮಿಕ ಸಮುದಾಯಗಳ ವೈಯಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ. ಸಂವಿಧಾನ ನೀಡುವ ಧಾರ್ಮಿಕ ಆಚರಣೆಯ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನು ಓದಿದ್ದೀರಾ? ಬಹುಪತ್ನಿತ್ವ ನಿಷೇಧಕ್ಕೆ ತಜ್ಞರ ಸಮಿತಿ ರಚಿಸಲು ಮುಂದಾದ ಅಸ್ಸಾಂ ಸರ್ಕಾರ
ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಈ ಕಾನೂನು ‘ರಾಜಕೀಯ ಪ್ರೇರಿತ’ವಾಗಿದ್ದು ಎಂದು ದೂರಿದೆ. ಇದು ಸಾಮಾಜಿಕ ಸುಧಾರಣೆಗಿಂತ ಅಧಿಕವಾಗಿ ಆಡಳಿತ ಪಕ್ಷದ ರಾಜಕೀಯ ತಂತ್ರವಾಗಿದೆ ಎಂದು ಟೀಕಿಸಲಾಗುತ್ತಿದೆ. ಈಗಾಗಲೇ ಹಿಂದೂಗಳಿಗೆ ಬಹುಪತ್ನಿತ್ವ ನಿಷೇಧ, ಆದ್ದರಿಂದ ಮುಖ್ಯವಾಗಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಮಾತ್ರ ಗುರಿಯಾಗಿಸಿಕೊಂಡು ಈ ಕಾನೂನು ಜಾರಿ ಮಾಡಲಾಗುತ್ತಿದೆ ಎಂಬುದು ಇಲ್ಲಿ ಸ್ಪಷ್ಟವಾಗುತ್ತಿದೆ.
ಈ ಕಾನೂನು ಮಹಿಳಾ ಹಕ್ಕುಗಳಿಗೆ ಉತ್ತೇಜನ ನೀಡುತ್ತದೆ ಎಂದು ಹೇಳುವ ಸರ್ಕಾರವು ರೀತಿ ರಿವಾಜಿನ ಭಾಗ ಎಂಬ ನೆಪ ನೀಡಿ ಬುಡಕಟ್ಟು ಸಮುದಾಯಗಳಿಗೆ ಮತ್ತು ಆರನೇ ಪರಿಚ್ಛೇದದ ಅಡಿಯಲ್ಲಿರುವ ಪ್ರದೇಶಗಳಲ್ಲಿ ವಾಸವಿರುವ ಜನರಿಗೆ ಬಹುಪತ್ನಿತ್ವಕ್ಕೆ ಅವಕಾಶ ಕೊಟ್ಟಿದೆ. ಆದರೆ ಹಲವು ವರ್ಷಗಳಿಂದ ಧಾರ್ಮಿಕ ಭಾಗವಾಗಿರುವ ಬಹುಪತ್ನಿತ್ವವನ್ನು ಮುಸ್ಲಿಮರಿಗೆ ಮಾತ್ರ ನಿಷೇಧಿಸಲಾಗಿದೆ. ಕಾನೂನಿನಿಂದ ವಿನಾಯಿತಿ ನೀಡುವಾಗಲೂ ಬಿಜೆಪಿ ಸರ್ಕಾರದ ಮುಸ್ಲಿಂ ದ್ವೇಷ ಎದ್ದುಕಂಡಿದೆ.
ಇವಿಷ್ಟು ಮಾತ್ರವಲ್ಲದೆ ರಾಜ್ಯದ ಕಾನೂನು ಕೇಂದ್ರದ ವೈಯಕ್ತಿಕ ಕಾನೂನುಗಳನ್ನು ಹೇಗೆ ರದ್ದುಗೊಳಿಸುತ್ತದೆ ಎಂಬ ಬಗ್ಗೆಯೂ ಕಾನೂನು ತಜ್ಞರು ಸಂಶಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಇದು ಸಂವಿಧಾನಾತ್ಮಕ ಸವಾಲುಗಳಿಗೆ ಕಾರಣವಾಗಬಹುದು ಎಂಬ ಅಭಿಪ್ರಾಯವಿದೆ. ಈ ಹಿಂದೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮುಸ್ಲಿಮರ ಜನಸಂಖ್ಯೆ, ಆರ್ಥಿಕ ಪ್ರಗತಿಯನ್ನು ನಿಯಂತ್ರಿಸಬೇಕು ಎಂಬ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಹಲವು ಬಾರಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡು ಕಾನೂನುಗಳನ್ನು ಅಸ್ಸಾಂನಲ್ಲಿ ಜಾರಿಗೊಳಿಸಲಾಗಿದೆ.
ಅಸ್ಸಾಂ ಸರ್ಕಾರವು 2021ರಿಂದ ಮೀಸಲು ಅರಣ್ಯ ಪ್ರದೇಶಗಳು ಮತ್ತು ಸರ್ಕಾರಿ ಭೂಮಿಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಜನರನ್ನು, ಹೆಚ್ಚಾಗಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಒಕ್ಕಲೆಬ್ಬಿಸಿದೆ. ಬಡ ಮುಸ್ಲಿಮರನ್ನು ಗುರಿಯಾಗಿಸಿಕೊಂಡೇ ಈ ಪ್ರಕ್ರಿಯೆ ನಡೆಸಲಾಗಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿದೆ.
ಹಾಗೆಯೇ 2019ರಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಪಟ್ಟಿಯಿಂದ ಸುಮಾರು 20 ಲಕ್ಷ ಜನರು ಹೊರಗುಳಿದಿದ್ದರು. ಈ ಪೈಕಿ ಅನೇಕ ಮಂದಿ ಮುಸ್ಲಿಮರಾಗಿದ್ದರು ಮತ್ತು ಬಡವರಾಗಿದ್ದರು. ಇದೀಗ ಬಹುಪತ್ನಿತ್ವ ನಿಷೇಧ ಕಾನೂನು ಕೂಡಾ ನೇರವಾಗಿ ಮುಸ್ಲಿಮರನ್ನೇ ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗುತ್ತಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




