ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಿಲ್ಕ್ಯಾರಾದಲ್ಲಿ ಸುರಂಗ ಕುಸಿದು ಆತಂಕ ಸೃಷ್ಟಿಯಾಗಿದ್ದು ಕೊನೆಗೂ ನಿವಾರಣೆಯಾಗಿದೆ. ಕಳೆದ 17 ದಿನಗಳಿಂದ ಸುರಂಗದ ಒಳಗೆ ಸಿಲುಕಿಕೊಂಡಿದ್ದ ಎಲ್ಲ 41 ಕಾರ್ಮಿಕರು ಸುರಕ್ಷಿತವಾಗಿ ನ.28ರ ರಾತ್ರಿ 8.30 ಸುಮಾರಿಗೆ ಹೊರಗೆ ಬಂದಿದ್ದಾರೆ.
ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಕ್ಲಿಷ್ಟಕರ ಮಾತ್ರವಲ್ಲದೆ ಸವಾಲಿನದ್ದಾಗಿತ್ತು. ಚೂರು ಎಡವಿದರೂ ಮತ್ತಷ್ಟು ಭೂಕುಸಿತ ಉಂಟಾಗಿ, ಕಾರ್ಮಿಕರ ಜೊತೆ ರಕ್ಷಣಾ ತಂಡಗಳೂ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿತ್ತು.
ಸುರಂಗದ ಒಳಗಿನ ಕತ್ತಲಿನಲ್ಲಿ ಹಾಗೂ ಸಣ್ಣ ಜಾಗದಲ್ಲಿ, ಆತಂಕದೊಂದಿಗೆ 17 ದಿನಗಳನ್ನು ಕಳೆದಿರುವುದಕ್ಕೆ ಕಾರ್ಮಿಕರ ಮಾನಸಿಕ ಧೈರ್ಯವನ್ನು ಮೆಚ್ಚಲೇಬೇಕು. ಸುರಂಗ ಕುಸಿದಾಗ ಒಳಗೆ ಏನೇನಾಯಿತು ಎಂಬುದರ ಬಗ್ಗೆ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರಲ್ಲಿ ಒಬ್ಬರಾದ ವಿಶ್ವಜೀತ್ ಕುಮಾರ್ ವರ್ಮಾ ಎಂಬ ಕಾರ್ಮಿಕರೊಬ್ಬರು ಘಟನೆಯ ಬಗ್ಗೆ ಮಾಧ್ಯಮವೊಂದಕ್ಕೆ ತಮಗಾದ ಅನುಭವಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
“ಭೂಕುಸಿತ ಸಂಭವಿಸಿದ್ದರಿಂದ 41 ಕಾರ್ಮಿಕರು ನಿರ್ಮಾಣ ಹಂತದ ಸುರಂಗದಲ್ಲಿನ 4.5-ಕಿಲೋಮೀಟರ್ (2.8-ಮೈಲಿ) ಒಳಗೆ ಸಿಲುಕಿದ್ದೆವು. ಪ್ರವೇಶದ್ವಾರದಿಂದ ಸುಮಾರು 200 ಮೀಟರ್ (650 ಅಡಿ) ದೂರದಲ್ಲಿ ಭೂಕುಸಿತ ಉಂಟಾಗಿತ್ತು. ಅವಶೇಷಗಳು ಮೇಲಿಂದ ಸುರಂಗದೊಳಗೆ ಕುಸಿದಾಗ ನಾವೆಲ್ಲರೂ ಸಿಲುಕಿಕೊಂಡಿದ್ದೇವೆ ಎಂಬುದು ನಮಗೆ ತಿಳಿದಿತ್ತು” ಎಂದು ವಿಶ್ವಜೀತ್ ಕುಮಾರ್ ವರ್ಮಾ ಹೇಳಿದರು.
“ಸಿಕ್ಕಿಬಿದ್ದ ಮೊದಲ 10-15 ಗಂಟೆಗಳ ಕಾಲ ನಾವು ತುಂಬ ಕಷ್ಟವನ್ನು ಎದುರಿಸಿದೆವು. ಆದರೆ ನಂತರ, ಪೈಪ್ ಮೂಲಕ ಅಕ್ಕಿ, ಬೇಳೆ ಮತ್ತು ಒಣ ಹಣ್ಣುಗಳೊಂದಿಗೆ ಸುರಂಗದೊಳಗೆ ಆಹಾರವನ್ನು ಒದಗಿಸಲಾಯಿತು. ನಂತರ ಮೈಕ್ ಅನ್ನು ಅಳವಡಿಸಲಾಯಿತು. ಅನಂತರದಲ್ಲಿ ನಮ್ಮ ಕುಟುಂಬ ಸದಸ್ಯರೊಂದಿಗೆ ಮಾತನಾಡಲು ಸಾಧ್ಯವಾಯಿತು. ನಾನು ಈಗ ಸಂತೋಷವಾಗಿದ್ದೇನೆ, ಆಗ ದೀಪಾವಳಿ ಆಚರಿಸಲು ಸಾಧ್ಯವಾಗಲಿಲ್ಲ ಈಗ ದೀಪಾವಳಿಯನ್ನು ಆಚರಿಸುತ್ತೇವೆ” ಎಂದು ವಿಶ್ವಜೀತ್ ಕುಮಾರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 17 ದಿನಗಳ ಕಾರ್ಯಾಚರಣೆ ಯಶಸ್ವಿ: ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರ ರಕ್ಷಣೆ
ಎಲ್ಲ ಕಾರ್ಮಿಕರ ಮಾನಸಿಕ ಮತ್ತು ದೈಹಿಕ ಆರೋಗ್ಯ ಉತ್ತಮವಾಗಿದೆ. ಪೈಪ್ ಮೂಲಕ ಸೋಮವಾರ ಅವರಿಗೆ ಬ್ಯಾಟ್, ಚಂಡು, ಚೆಸ್ ಕಿಟ್ಗಳನ್ನು ಕಳುಹಿಸಲಾಗಿತ್ತು. ಒಳಗೆ ಅವರು ಕ್ರಿಕೆಟ್, ಚೆಸ್ ಆಡಿದ್ದಾರೆ. ಎಲ್ಲರೂ ಸಂತಸದಿಂದ ಇದ್ದರು ಎಂದು ಫೋನ್ ಮೂಲಕ ತಿಳಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಸುರಂಗದಿಂದ ರಕ್ಷಿಸಿದ ಕೂಡಲೇ, ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ಮನೆಗೆ ಕಳುಹಿಸುವ ಮೊದಲು ಅಲ್ಲಿ ಅವರನ್ನು ನಿಗಾ ಘಟಕದಲ್ಲಿ ಇರಿಸಲಾಗಿದೆ.
ರ್ಯಾಟ್ ಹೋಲ್ ಪರಿಣಿತರಿಗೆ ಸಾಧನೆಗೆ ಶ್ಲಾಘನೆ





