ನೀವು ಯಾವಾಗ ಭಾರತಕ್ಕೆ ವಾಪಸ್ ಬರಬೇಕೆಂದು ಅಂದುಕೊಂಡಿದ್ದೀರಿ ಎಂದು ದೇಶದಿಂದ ಪಲಾಯನವಾಗಿರುವ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಅವರನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. ಹಾಗೆಯೇ ಮಲ್ಯ ಸ್ವತಃ ಕೋರ್ಟ್ ಮುಂದೆ ಹಾಜರಾಗುವರೆಗೂ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯ ವಿರುದ್ಧದ ಅರ್ಜಿಯನ್ನು ಆಲಿಸುವುದಿಲ್ಲ ಎಂದು ಮಲ್ಯ ಪರ ವಕೀಲರಿಗೆ ತಿಳಿಸಿದೆ.
2016ರಿಂದ ಯುಕೆಯಲ್ಲಿ ನೆಲೆಸಿರುವ ಮಲ್ಯ, ಹೈಕೋರ್ಟ್ನಲ್ಲಿ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಒಂದು ತಮ್ಮನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿ, ಮತ್ತೊಂದು 2018ರ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ವಿಜಯ ಮಲ್ಯ ಮಾತುಗಳಿಗೆ ಮರುಗುವ ಅಗತ್ಯವಿದೆಯೇ?
ವಂಚನೆ ಮತ್ತು ಹಣ ವರ್ಗಾವಣೆ ಆರೋಪವನ್ನು ಹೊತ್ತಿರುವ 70 ವರ್ಷದ ಮದ್ಯದ ದೊರೆಯ ಈ ಅರ್ಜಿಗಳನ್ನು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರ ಪೀಠವು ಆಲಿಸಿದೆ. ಹಾಗೆಯೇ ವಿವಾದಿತ ಉದ್ಯಮಿ ಮಲ್ಯ ಪರ ವಕೀಲ ಅಮಿತ್ ದೇಸಾಯಿ ಬಳಿ “ಮಲ್ಯ ಯಾವಾಗ ಭಾರತಕ್ಕೆ ಮರಳುವುದು” ಎಂದು ಪ್ರಶ್ನಿಸಿದೆ.
ಹಾಗೆಯೇ 2026ರ ಫೆಬ್ರವರಿ 11ರ ಒಳಗೆ ಯಾವಾಗ ಭಾರತಕ್ಕೆ ಮರಳುತ್ತಾರೆ ಎಂಬುದರ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಅಥವಾ ಹೇಳಿಕೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ಜಾರಿ ನಿರ್ದೇಶನಾಲಯ (ಇಡಿ) ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ದೇಶದ ನ್ಯಾಯಾಲಯಗಳಿಗೆ ಒಳಪಡದೆ, ಯಾವುದೇ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಲು ಪರಾರಿಯಾದವರಿಗೆ ಅವಕಾಶ ನೀಡಬಾರದು ಎಂದು ವಾದಿಸಿದ್ದಾರೆ. ಹಾಗೆಯೇ ದೇಶದಿಂದ ದೂರ ಉಳಿದು ತಮ್ಮ ವಕೀಲರ ಮೂಲಕ ಅರ್ಜಿಗಳನ್ನು ಸಲ್ಲಿಸುವ ವ್ಯಕ್ತಿಗಳು ಕಾನೂನನ್ನು ದುರುಪಯೋಗಪಡಿಸಿಕೊಳ್ಳದಂತೆ ನೋಡಿಕೊಳ್ಳಲು ಎಫ್ಇಒ ಕಾಯ್ದೆಯನ್ನು ತರಲಾಗಿದೆ. ಮಲ್ಯ ವಿರುದ್ಧ ಪ್ರಾರಂಭಿಸಲಾದ ಹಸ್ತಾಂತರ ಪ್ರಕ್ರಿಯೆಗಳು ಮುಂದುವರಿದ ಹಂತದಲ್ಲಿವೆ ಎಂದರು.
ಇದನ್ನು ಓದಿದ್ದೀರಾ? ನ್ಯಾಯಯುತ ವಿಚಾರಣೆ ಭರವಸೆ ಸಿಕ್ಕರೆ ಭಾರತಕ್ಕೆ ವಾಪಸ್: ವಿಜಯ್ ಮಲ್ಯ
2005ರಲ್ಲಿ ಮಲ್ಯ ಪ್ರಾರಂಭಿಸಿದ ಕಿಂಗ್ಫಿಶರ್ ಏರ್ಲೈನ್ಸ್ ವಿಪರೀತ ನಷ್ಟಕ್ಕೆ ಗುರಿಯಾಗಿ 2012ರಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿತು. ವಿವಿಧ ಭಾರತೀಯ ಬ್ಯಾಂಕ್ಗಳಿಂದ (ಮುಖ್ಯವಾಗಿ SBI ಮತ್ತು IDBI) ಪಡೆದಿದ್ದ ಸುಮಾರು ₹9,000 ಕೋಟಿಗೂ ಅಧಿಕ ಸಾಲವನ್ನು ಮರುಪಾವತಿ ಮಾಡದೆ ಮಲ್ಯ ದೇಶ ಬಿಟ್ಟು ಪರಾರಿಯಾಗಿದ್ದು, ದೇಶದ ಮೊದಲ ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿದ್ದಾರೆ.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅವರು ಮಲ್ಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ದೇಶದ ಜನರ ಹಣವನ್ನು ವಸೂಲಿ ಮಾಡಲಾಗುವುದು ಎಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಯುಪಿಎ ಸರ್ಕಾರದ ಮೇಲೆ ವಾಗ್ದಾಳಿಯೂ ನಡೆಸಿದ್ದಾರೆ. ಆದರೆ ಮೋದಿ ಆಡಳಿತ ಇರುವಾಗಲೇ 2016ರಲ್ಲಿ ಮಲ್ಯ ಪರಾರಿಯಾಗಿದ್ದಾರೆ. ಈಗ ಅಧಿಕಾರಕ್ಕೆ ಬಂದು 11 ವರ್ಷವಾದರೂ ಇನ್ನೂ ಮಲ್ಯ ಅವರನ್ನು ಭಾರತಕ್ಕೆ ವಾಪಸ್ ಕರೆತರಲು ಆಗಿಲ್ಲ. ಇನ್ನು ಮೋದಿ ಆಡಳಿತದಲ್ಲಿಯೇ ಆರ್ಥಿಕ ಅಪರಾಧಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಭಾರತದಿಂದ ಪರಾರಿಯಾಗಿರುವುದು ಕೇಂದ್ರ ಸರ್ಕಾರವನ್ನು ಟೀಕೆಗೆ ಒಳಪಡಿಸಿದೆ.





