ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಕಾರಣವೊಡ್ಡಿ, ಐಪಿಎಲ್ 2026ರ ಆವೃತ್ತಿಯಿಂದ ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಡುವಂತೆ ಬಿಸಿಸಿಐ, ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಕ್ಕೆ ಸೂಚಿಸಿರುವ ಕ್ರಮವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವಿಲ್ಲಿ ಯಾರನ್ನು ಶಿಕ್ಷಿಸುತ್ತಿದ್ದೇವೆ? ಒಂದು ದೇಶವನ್ನೇ, ಒಬ್ಬ ವ್ಯಕ್ತಿಯನ್ನೇ ಅಥವಾ ಆತನ ಧರ್ಮವನ್ನೇ?” ಎಂದು ಪ್ರಶ್ನಿಸುವ ಮೂಲಕ, ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರನ್ನು ಐಪಿಎಲ್ನಿಂದ ಕೈಬಿಟ್ಟ ಬಿಸಿಸಿಐ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕ್ರೀಡೆಯನ್ನು “ಅವಿವೇಕದಿಂದ ರಾಜಕೀಯಗೊಳಿಸಲಾಗುತ್ತಿದೆ” ಎಂದು ಕಿಡಿಕಾರಿರುವ ಅವರು, “ಒಂದು ವೇಳೆ ಬಾಂಗ್ಲಾದೇಶದ ಆಟಗಾರ ಲಿಟನ್ ದಾಸ್ ಅಥವಾ ಸೌಮ್ಯ ಸರ್ಕಾರ್ (ಹಿಂದೂ ಆಟಗಾರರು) ಆಗಿದ್ದರೆ ಬಿಸಿಸಿಐ ಇದೇ ನಿಲುವನ್ನು ತೆಗೆದುಕೊಳ್ಳುತ್ತಿತ್ತೇ? ಕ್ರೀಡೆಯ ಈ ಅವಿವೇಕದ ರಾಜಕೀಯಕರಣ ನಮ್ಮನ್ನು ಎಲ್ಲಿಗೆ ಕರೆದೊಯ್ಯಲಿದೆ?” ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಐಪಿಎಲ್ 2026: ಬಾಂಗ್ಲಾ ವೇಗಿ ಮುಸ್ತಫಿಜುರ್ ರೆಹಮಾನ್ ಕೈಬಿಡುವಂತೆ ಕೆಕೆಆರ್ಗೆ ಬಿಸಿಸಿಐ ಸೂಚನೆ
ಬಿಸಿಸಿಐ ಸೂಚನೆ ಮೇರೆಗೆ ಕ್ರಮ: ಕೆಕೆಆರ್ ಸ್ಪಷ್ಟನೆ
ಈ ಬೆಳವಣಿಗೆಯ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಕೆಕೆಆರ್ ಫ್ರಾಂಚೈಸಿ, “ಐಪಿಎಲ್ ನಿಯಂತ್ರಕ ಮಂಡಳಿಯಾದ ಬಿಸಿಸಿಐನ ಸೂಚನೆಯ ಮೇರೆಗೆ, ಮುಂಬರುವ ಐಪಿಎಲ್ ಋತುವಿನಿಂದ ಮುಸ್ತಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದೆ. ಸೂಕ್ತ ಪ್ರಕ್ರಿಯೆ ಮತ್ತು ಸಮಾಲೋಚನೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ,” ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಐಪಿಎಲ್ ನಿಯಮಾವಳಿಗಳ ಪ್ರಕಾರ ಬದಲಿ ಆಟಗಾರನನ್ನು ಆಯ್ಕೆ ಮಾಡಲು ಬಿಸಿಸಿಐ ಅವಕಾಶ ನೀಡಿದೆ ಎಂದು ತಂಡ ತಿಳಿಸಿದೆ.
ಇದಕ್ಕೂ ಮುನ್ನ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು, “ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ವೇಗಿಯನ್ನು ಬಿಡುಗಡೆ ಮಾಡಲು ಕೆಕೆಆರ್ ತಂಡಕ್ಕೆ ನಿರ್ದೇಶನ ನೀಡಲಾಗಿದೆ,” ಎಂದು ತಿಳಿಸಿದ್ದರು.
9.20 ಕೋಟಿ ರೂ.ಗೆ ಬಿಕರಿಯಾಗಿದ್ದ ಆಟಗಾರ
ಕಳೆದ ತಿಂಗಳು ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ತೀವ್ರ ಪೈಪೋಟಿಯ ನಂತರ, ಕೋಲ್ಕತ್ತಾ ನೈಟ್ ರೈಡರ್ಸ್ 30 ವರ್ಷದ ಎಡಗೈ ವೇಗಿ ಮುಸ್ತಫಿಜುರ್ ಅವರನ್ನು 9.20 ಕೋಟಿ ರೂ.ಗಳ ಬೃಹತ್ ಮೊತ್ತಕ್ಕೆ (ಮೂಲ ಬೆಲೆ 2 ಕೋಟಿ ರೂ.) ಖರೀದಿಸಿತ್ತು.
2016ರಿಂದ ಐಪಿಎಲ್ನಲ್ಲಿ ಸಕ್ರಿಯವಾಗಿರುವ ಮುಸ್ತಫಿಜುರ್, ಸನ್ ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದಾರೆ. 2026ರ ಆವೃತ್ತಿಯು ಕೆಕೆಆರ್ ಪರ ಅವರ ಮೊದಲ ಋತುವಾಗಬೇಕಿತ್ತು.





