ಜೆಫ್ರಿ ಎಪ್ಸ್ಟೀನ್ ನೊಂದಿಗೆ ತಮ್ಮ ಸಂಪರ್ಕಗಳ ಕುರಿತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ನೀಡಿದ ಹೇಳಿಕೆಯ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವು ತೀವ್ರ ವಾಗ್ದಾಳಿ ನಡೆಸಿದೆ. ಪಕ್ಷದ ನಾಯಕ ಪವನ್ ಖೇರಾ ಅವರು ಆರು ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದು, ಸಚಿವ ಹರ್ದೀಪ್ ಸಿಂಗ್ ಪುರಿ ಎಪ್ಸ್ಟೀನ್ ಅವರ ಅಪರಾಧಗಳ ಗಂಭೀರತೆಯನ್ನು ಕಡಿಮೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಗೆ ಪ್ರತಿಕ್ರಿಯೆ ನೀಡಿದ ಪುರಿ, ಕಳೆದ ಎಂಟು ವರ್ಷಗಳಲ್ಲಿ ಎಪ್ಸ್ಟೀನ್ ನನ್ನು ಮೂರು ಅಥವಾ ನಾಲ್ಕು ಬಾರಿ ಮಾತ್ರ ಭೇಟಿಯಾಗಿದ್ದೇನೆ ಎಂದು ಹೇಳಿದ್ದಾರೆ. ಮೂರು ಮಿಲಿಯನ್ ಇಮೇಲ್ಗಳು ಬಿಡುಗಡೆಯಾದ ನಂತರ ಅದರ ವಿವರಗಳು ಈಗಾಗಲೇ ಸಾರ್ವಜನಿಕ ವಲಯದಲ್ಲಿವೆ ಎಂದು ಅವರು ಹೇಳಿದ ಬಳಿಕ ವಿವಾದ ಮತ್ತಷ್ಟು ಉಲ್ಬಣಗೊಂಡಿದೆ.
ಪವನ್ ಖೇರಾ ಅವರು, 2014ರ ಅಕ್ಟೋಬರ್ 4ರಂದು ನಡೆದ ಇಮೇಲ್ ವಿನಿಮಯಗಳನ್ನು ಉಲ್ಲೇಖಿಸಿದ್ದಾರೆ. ಇದು ಅಮೆರಿಕದ ನ್ಯಾಯ ಇಲಾಖೆಯು ಬಿಡುಗಡೆ ಮಾಡಿದ ಎಪ್ಸ್ಟೀನ್ ಫೈಲ್ ನ ಭಾಗವಾಗಿದೆ. ಅದನ್ನು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್ ಮಾಡಿರುವ ಅವರು, “ಪುರಿ ತಮ್ಮ ‘ಸಂಪರ್ಕಗಳು’ ಅವರನ್ನು ರೀಡ್ ಹಾಫ್ಮನ್ಗೆ ಪರಿಚಯಿಸಿವೆ ಎಂದು ಹೇಳುತ್ತಾರೆ. ಆದರೆ ಅವರು ಹೇಳದಿರುವುದು ಇನ್ನಷ್ಟು ಮುಖ್ಯ. ಅಕ್ಟೋಬರ್ 4, 2014ರಂದು ಎಪ್ಸ್ಟೀನ್, ಪುರಿಗೆ ‘ರೀಡ್ ಅವರನ್ನು ಭೇಟಿಯಾಗಿದ್ದೀರಾ?’ ಎಂದು ಇಮೇಲ್ ಮಾಡಿದರು. ಕೆಲವೇ ಗಂಟೆಗಳಲ್ಲಿ ಪುರಿ ಉತ್ತರಿಸಿ, ‘ನಾನು ಇಂದು ಮಧ್ಯಾಹ್ನದ ಸಭೆಗೆ SFನಲ್ಲಿದ್ದೇನೆ. ನನ್ನ ಸ್ನೇಹಿತ, ನೀವು. ಯಾವುದೇ ವಿಷಯಗಳನ್ನೂ ಸಾಧ್ಯವಾಗುವಂತೆ ಮಾಡಬಲ್ಲವರು. ಏನಾದರೂ ಸಲಹೆ ನೀಡುತ್ತೀರಾ?’ ಎಂದು ಕೇಳಿದ್ದರು. ಇದಕ್ಕೆ ಎಪ್ಸ್ಟೀನ್, ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳನ್ನು ಭೇಟಿ ಮಾಡಿಸಲು ಅವರಿಗೆ ಭಾರತ ಪ್ರವಾಸವನ್ನು ಆಯೋಜಿಸುತ್ತೀರಿ ಎಂದು ಹೇಳಿ’ ಎಂದು ಸಲಹೆ ನೀಡಿ ಪ್ರತಿಕ್ರಿಯಿಸಿದರು” ಎಂದು ಬರೆದಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಂದೇ ಮಾತರಂ ಕಡ್ಡಾಯದ ಹಿಂದಿರುವುದು ದೇಶಭಕ್ತಿಯಲ್ಲ, ಪಶ್ಚಿಮ ಬಂಗಾಳ ಗೆಲ್ಲುವುದು!
ಈ ಇಮೇಲ್ ನ ಹಿನ್ನೆಲೆಯಲ್ಲಿ ಪವನ್ ಖೇರಾ ಅವರು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಆರು ಪ್ರಶ್ನೆಗಳನ್ನು ಕೇಳಿದ್ದಾರೆ.
- ರೀಡ್ ಹಾಫ್ಮನ್ ಭೇಟಿಯ ಬಗ್ಗೆ ಅದು ನಡೆಯುವ ಮುನ್ನವೇ ಎಪ್ಸ್ಟೀನ್ ಗೆ ಅದು ಹೇಗೆ ತಿಳಿದಿತ್ತು?
- ಆ ಭೇಟಿಯನ್ನು ಏರ್ಪಡಿಸಿದ ‘ಸಂಪರ್ಕ’ ಎಪ್ಸ್ಟೀನ್ ಆಗಿದ್ದನೇ?
- ಸಭೆಯ ವಿವರಗಳನ್ನು ಹರ್ದೀಪ್ ಎಪ್ಸ್ಟೀನ್ ಜೊತೆ ಏಕೆ ಚರ್ಚಿಸುತ್ತಿದ್ದರು?
- ಎಪ್ಸ್ಟೀನ್ ನನ್ನು ‘ಸ್ನೇಹಿತ’ ಎಂದು ಏಕೆ ಕರೆಯಲಾಗುತ್ತಿತ್ತು?
- ಎಪ್ಸ್ಟೀನ್ ಹರ್ದೀಪ್ ಪುರಿಗೆ ಏನನ್ನು ಸಾಧ್ಯವಾಗಿಸುತ್ತಿದ್ದ?
- ಸಂಬಂಧ ಆಕಸ್ಮಿಕವಾಗಿದ್ದರೆ ಹರ್ದೀಪ್ ಸಿಂಗ್ ಅವರು ಎಪ್ಸ್ಟೀನ್ ‘ಸಲಹೆ’ ಪಡೆಯಲು ಏಕೆ ಪ್ರಯತ್ನಿಸಿದರು?
ಪವನ್ ಖೇರಾ ಅವರು ಈ ಪೋಸ್ಟ್ ನ ಶೀರ್ಷಿಕೆಯಲ್ಲಿ, “ಪುರಿ ತಮ್ಮ ಹಿಡಿತ ಕಳೆದುಕೊಂಡಂತೆ ಕಾಣುತ್ತಾರೆ. ಒಮ್ಮೆ ಭಾರತವನ್ನು ರಾಜತಾಂತ್ರಿಕನಾಗಿ ಪ್ರತಿನಿಧಿಸಿದ್ದ ಅದೇ ವ್ಯಕ್ತಿ ಇವರೇನಾ ಎಂಬುದು ನಂಬಲು ಕಷ್ಟ. ಒಂದು ರೀತಿಯ ನಾಟಕೀಯತೆ ಕಂಡುಬರುತ್ತಿದೆ” ಎಂದು ಟೀಕಿಸಿದ್ದಾರೆ.





