ಯಾವಾಗಲೂ ರೈತರು ತಮ್ಮ ಸಾಲ ಮನ್ನಾ ಮಾಡುವಂತೆ ಕೇಳುವುದು ಯಾಕೆ? ರೈತರಿಗೆ ಯಾಕೆ ಎಲ್ಲವೂ ಉಚಿತವಾಗಿಯೇ ಬೇಕು? ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಕೇಳಿದ್ದು, ವಿವಾದ ಸೃಷ್ಟಿಸಿದ್ದಾರೆ. ರೈತರು ಮತ್ತು ರೈತ ಹೋರಾಟಗಾರರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಜಿತ್ ಪವಾರ್, “ಈ ಹಿಂದೆ, ಶರದ್ ಪವಾರ್, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರಗಳ ಅವಧಿಯಲ್ಲಿ ರೈತರ ಕೃಷಿ ಸಾಲ ಮನ್ನಾ ಮಾಡಲಾಗಿತ್ತು. ಈಗಲೂ ಕೃಷಿ ಸಾಲ ಮನ್ನಾಗೆ ಬೇಡಿಕೆ ಇದೆ. ಸಾಲ ಮನ್ನಾ ಆಗ್ಗಾಗ್ಗೆ ಮಾಡುತ್ತಿರಬೇಕಾದ ವಿಷಯವಲ್ಲ. ರೈತರು ಸಾಲ ಮನ್ನಾ ಮಾಡುವಂತೆ ಕೇಳುವುದು ಯಾಕಾಗಿ” ಎಂದು ಹೇಳಿದ್ದಾರೆ.
“ರೈತರಿಗೆ ರಾಜ್ಯ ಸರ್ಕಾರ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡುತ್ತದೆ. ಆದರೂ, ಸಾಲ ಮನ್ನಾ ಮಾಡುವಂತೆ ರೈತರು ಕೇಳುತ್ತಿದ್ದಾರೆ. 2024ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕೃಷಿ ಸಾಲ ಮನ್ನಾ ಮಾಡುವುದಾಗಿ ನಾವು ಭರವಸೆ ನೀಡಿದ್ದೇವೆ. ಚುನಾವಣೆ ಗೆಲ್ಲುವ ಉದ್ದೇಶದಿಂದ ಭರವಸೆ ನೀಡಲಾಗಿತ್ತು. ಈಗ ರೈತರು ಕೃಷಿ ಸಾಲ ಮನ್ನಾ ಮಾಡುವಂತೆ ಕೇಳುತ್ತಿದ್ದಾರೆ. ಆದರೆ, ಸಾಲ ಮನ್ನಾ ಮಾಡುವುದು ಸುಲಭವಲ್ಲ. ಅದಕ್ಕಾಗಿ, ಸಾವಿರಾರು ಕೋಟಿ ರೂ.ಗಳು ಬೇಕಾಗುತ್ತವೆ” ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಹೇಳಿಕೆಯನ್ನು ವಿಪಕ್ಷಗಳು ಟೀಕಿಸಿವೆ. ಮಹಾಯುತಿ ಸರ್ಕಾರ ಮಾತು ತಪ್ಪುತ್ತಿದ್ದು, ರೈತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿವೆ.
“ಚುನಾವಣೆ ಸಮಯದಲ್ಲಿ ಸಾಲ ಮನ್ನಾ ಮಾಡುವುದಾಗಿ ಮಹಾಯುತಿ ಭರವಸೆ ನೀಡಿತ್ತು. ಈಗ ನುಣುಚಿಕೊಳ್ಳುತ್ತಿದೆ. ರೈತರು ಸಂಕಷ್ಟದಲ್ಲಿರುವ ಕಾರಣದಿಂದ ಸಾಲ ಮನ್ನಾ ಮಾಡುವಂತೆ ಕೇಳುತ್ತಿದ್ದಾರೆ. ಸರ್ಕಾರಕ್ಕೆ ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ, ಅಧಿಕಾರದಿಂದ ಕೆಳಗಿಳಿಯಬೇಕು” ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಒತ್ತಾಯಿಸಿದ್ದಾರೆ.




