ಭಾರತೀಯ ಆಡಳಿತ ಸೇವಾ (ಐಎಎಸ್) ಕೇಡರ್ಗೆ ಗೊತ್ತುಪಡಿಸಿದ ಹಲವಾರು ಪ್ರಮುಖ ಆಡಳಿತಾತ್ಮಕ ಹುದ್ದೆಗಳಿಗೆ ಭಾರತೀಯ ಪೊಲೀಸ್ ಸೇವಾ (ಐಪಿಎಸ್) ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿರುವ ಕುರಿತು ವಿವರಣೆ ಕೇಳಿ ತೆಲಂಗಾಣ ಸರ್ಕಾರಕ್ಕೆ ಅಲ್ಲಿನ ಹೈಕೋರ್ಟ್ ನೋಟಿಸ್ ನೀಡಿದೆ. ‘ಐಎಎಸ್ ಹುದ್ದೆಗಳನ್ನು ಐಪಿಎಸ್ ಅಧಿಕಾರಿಗಳು ಯಾಕೆ ನಿರ್ವಹಿಸುತ್ತಿದ್ದಾರೆ’ ಎಂದು ಪ್ರಶ್ನಿಸಿದೆ.
ಐಎಎಸ್ ಹುದ್ದೆಗಳಿಗೆ ಐಪಿಎಸ್ ಅಧಿಕಾರಿಗಳ ನೇಮಕ ವಿಚಾರವಾಗಿ ಹೈದರಾಬಾದ್ ಮೂಲದ ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ವಡ್ಲಾ ಶ್ರೀಕಾಂತ್ ಸಲ್ಲಿಸಿದ ರಿಟ್ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿ ಸುರೇಪಲ್ಲಿ ನಂದಾ ಅವರಿದ್ದ ಪೀಠವು ವಿಚಾರಣೆ ನಡೆಸಿದೆ. ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ (ಸಾಮಾನ್ಯ ಆಡಳಿತ ಇಲಾಖೆ – ಜಿಎಡಿ) ಅವರಿಗೆ ನೋಟಿಸ್ ನೀಡಿದೆ. ಡಿಸೆಂಬರ್ 10 ರೊಳಗೆ ಅಫಿಡವಿಟ್ಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ವಕೀಲ ವಿಜಯ್ ಗೋಪಾಲ್, “ಸರ್ಕಾರದ ಕ್ರಮವು ವಿಶೇಷವಾಗಿ ಸೆಪ್ಟೆಂಬರ್ 26 ರಂದು ಹೊರಡಿಸಲಾದ ‘ಜಿಒ 1342’ ಆದೇಶವು ರಾಜ್ಯದ ಆಡಳಿತದಲ್ಲಿ ಎರಡು ಅಖಿಲ ಭಾರತ ಸೇವೆಗಳ ವಿಭಿನ್ನ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವಿವರಿಸುವ ಕೇಂದ್ರ ಕಾನೂನುಗಳ ಉಲ್ಲಂಘನೆಯಾಗಿದೆ” ಎಂದು ವಾದಿಸಿದ್ದಾರೆ.
ಐಎಎಸ್ ಕೇಡರ್ ಹೊಂದಿರುವ ಹುದ್ದೆಗಳಿಗೆ ಮೂವರು ಹಿರಿಯ ಮತ್ತು ಉನ್ನತ ಐಪಿಎಸ್ ಅಧಿಕಾರಿಗಳ ನೇಮಕಾತಿಗಳನ್ನು ಅರ್ಜಿಯು ಪ್ರಶ್ನಿಸಿದೆ. ಐಪಿಎಸ್ ಅಧಿಕಾರಿ ಸ್ಟೀಫನ್ ರವೀಂದ್ರ ಅವರನ್ನು ನಾಗರಿಕ ಸರಬರಾಜು ಆಯುಕ್ತರಾಗಿ ಮತ್ತು ಸರ್ಕಾರದ ಎಕ್ಸ್-ಆಫಿಸಿಯೊ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅಂತೆಯೇ, ಐಪಿಎಸ್ ಅಧಿಕಾರಿ ಶಿಖಾ ಗೋಯೆಲ್ ಅವರನ್ನು ವಿಜಿಲೆನ್ಸ್ ಮತ್ತು ಜಾರಿ ಮಹಾನಿರ್ದೇಶಕರಾಗಿ ನೇಮಿಸಲಾಗಿದೆ. ಹೈದರಾಬಾದ್ನ ಮಾಜಿ ಆಯುಕ್ತ, ಐಪಿಎಸ್ ಅಧಿಕಾರಿ ಸಿವಿ ಆನಂದ್ ಅವರನ್ನು ಗೃಹ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಐಪಿಎಸ್ ಅಧಿಕಾರಿಗಳು ನೇಮಕಗೊಂಡಿರುವ ಹುದ್ದೆಗಳನ್ನು ಐಎಎಸ್ ಅಧಿಕಾರಿಗಳು ನಿರ್ವಹಿಸುವ ಹುದ್ದೆಗಳಾಗಿವೆ. ಆದರೆ, ಈ ಹುದ್ದೆಗಳಿಗೆ ಐಪಿಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇದು 2016ರಂತಹ ನಿಯಮಗಳಿಂದ ಸ್ಥಾಪಿಸಲಾದ ಶಾಸನಬದ್ಧ ಚೌಕಟ್ಟನ್ನು ಉಲ್ಲಂಘಿಸುತ್ತದೆ ಎಂದು ವಕೀಲರು ವಾದಿಸಿದ್ದಾರೆ.
“ಪ್ರಧಾನ ಕಾರ್ಯದರ್ಶಿ ಹುದ್ದೆಗಳು ಐಎಎಸ್ ಕೇಡರ್ಗೆ ಮೀಸಲಾಗಿವೆ. ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಮೂಲಭೂತವಾಗಿ ವಿಭಿನ್ನ ಕಾರ್ಯನಿರ್ವಾಹಕ ಮತ್ತು ಮೇಲ್ವಿಚಾರಣಾ ಕರ್ತವ್ಯಗಳಿಗೆ ತರಬೇತಿ ಪಡೆಯುತ್ತಾರೆ. ಹೀಗಿರುವಾಗ, ಅವರ ವ್ಯಾಪ್ತಿಗೆ ಮೀರಿದ ಹುದ್ದೆಗಳನ್ನು ನೀಡುವುದು ನಿಯಮಗಳ ಉಲ್ಲಂಘನೆಯಾಗುತ್ತದೆ” ಎಂದಿದ್ದಾರೆ.
ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಗೆ ಐಪಿಎಸ್ ಅಧಿಕಾರಿಗಳನ್ನು ನೇಮಿಸುವ ಪದ್ಧತಿ 2014ರಲ್ಲಿಯೇ ಹಿಂದಿನ ಬಿಆರ್ಎಸ್ ನೇತೃತ್ವದ ಸರ್ಕಾರದ ಅವಧಿಯಲ್ಲಿಯೇ ಪ್ರಾರಂಭವಾಯಿತು ಎಂಬುದನ್ನು ಹೈಕೋರ್ಟ್ ಗಮನಿಸಿದೆ. ಬದಲಿ ನೇಮಕಗಳ ಕುರಿತು ಉತ್ತರಿಸುವಂತೆ ಸರ್ಕಾರಕ್ಕೆ ನೋಟಿಸ್ ನೀಡಿದೆ.




