ಪಹಲ್ಗಾಮ್ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನದಿಂದ ಬಂದಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಸೋಮವಾರ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ನಂತರದ ಆಪರೇಷನ್ ಸಿಂಧೂರ್ ಅನ್ನು ಕೇಂದ್ರ ಸರಕಾರ ನಿರ್ವಹಿಸಿದ ರೀತಿ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಗೃಹ ಸಚಿವ ಪಿ. ಚಿದಂಬರಂ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಬಗ್ಗೆ ಸರಕಾರ ಸಾಕಷ್ಟು ಮಾಹಿತಿಯನ್ನು ಒದಗಿಸಿಲ್ಲ ಎಂದು ಆರೋಪಿಸಿದ್ದಾರೆ.
ಭಯೋತ್ಪಾದಕ ದಾಳಿಕೋರರು ಎಲ್ಲಿದ್ದಾರೆ? ನೀವು ಅವರನ್ನು ಏಕೆ ಬಂಧಿಸಿಲ್ಲ ಅಥವಾ ಗುರುತಿಸಿಲ್ಲ? ದಾಳಿಕೋರರಿಗೆ ಆಶ್ರಯ ನೀಡಿದ ಕೆಲವು ಜನರನ್ನು ಬಂಧಿಸಲಾಗಿದೆ ಎಂಬ ಸುದ್ದಿಯಾಗಿತ್ತು. ಅವರಿಗೆ ಏನಾಯಿತು? ಎಂದು ಪಹಲ್ಗಾಮ್ ದಾಳಿ ಕುರಿತು ಪಿ ಚಿದಂಬರಂ ಪ್ರಶ್ನಿಸಿದ್ದಾರೆ.
ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು (ಸಿಡಿಎಸ್) ಸಿಂಗಾಪುರಕ್ಕೆ ಹೋಗಿ ಕೆಲವು ಮಾಹಿತಿಯನ್ನು ನೀಡುತ್ತಾರೆ. ಉಪ ಸೇನಾ ಮುಖ್ಯಸ್ಥರು ಮುಂಬೈನಲ್ಲಿ ಹೇಳಿಕೆ ನೀಡುತ್ತಾರೆ. ಇಂಡೋನೇಷ್ಯಾದಲ್ಲಿ ನೌಕಾಪಡೆಯ ಕಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡುತ್ತಾರೆ. ಆದರೆ, ಪ್ರಧಾನಿ ಅಥವಾ ರಕ್ಷಣಾ ಸಚಿವರು ಅಥವಾ ವಿದೇಶಾಂಗ ಸಚಿವರು ಸಮಗ್ರವಾದ ಹೇಳಿಕೆಯನ್ನು ಏಕೆ ನೀಡುತ್ತಿಲ್ಲ? ಚಿದಂಬರಂ ಪ್ರಶ್ನಿಸಿದ್ದಾರೆ.
ಇದನ್ನು ಓದಿದ್ದೀರಾ?: ಮಹದಾಯಿ: ನಾಯಕರೇ ನಾಡದ್ರೋಹಿಗಳು
ತನಿಖೆಯಲ್ಲಿ ಎನ್ಐಎ ಪಾತ್ರವನ್ನು ಅವರು ಪ್ರಶ್ನಿಸಿದರು. ಇಷ್ಟು ವಾರಗಳಲ್ಲಿ ಎನ್ಐಎ ಏನು ತನಿಖೆ ಮಾಡಿದೆ ಎಂಬುದನ್ನು ಬಹಿರಂಗಪಡಿಸಲು ಅವರು ಸಿದ್ಧರಿಲ್ಲ. ಅವರು ಭಯೋತ್ಪಾದಕರನ್ನು ಪತ್ತಹೆಚ್ಚಿದ್ದಾರಾ? ಅವರು ಎಲ್ಲಿಂದ ಬಂದರು? ಅವರು ಸ್ವದೇಶಿ ಭಯೋತ್ಪಾದಕರಾಗಿರಬಹುದು. ಅವರು ಪಾಕಿಸ್ತಾನದಿಂದ ಬಂದವರು ಎಂದು ನೀವು ಏಕೆ ಭಾವಿಸುತ್ತೀರಿ? ಅದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದರು.
ಅವರು ಯುದ್ಧದಲ್ಲಿ ಸಂಭವಿಸಿದ ನಷ್ಟಗಳನ್ನು ಮರೆಮಾಡುತ್ತಿದ್ದಾರೆ. ಯುದ್ಧದಲ್ಲಿ ಎರಡೂ ಕಡೆಯೂ ನಷ್ಟ ಸಂಭವಿಸುತ್ತದೆ ಎಂದು ನಾನು ಒಂದು ಅಂಕಣದಲ್ಲಿ ಹೇಳಿದ್ದೆ. ಯುದ್ಧದಲ್ಲಿ ಭಾರತಕ್ಕೆ ನಷ್ಟವಾಗಿದೆಯಾ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಎಂದು ಚಿದಂಬರಂ ಹೇಳಿದರು.
ಸಂಸತ್ತಿನಲ್ಲಿ ಸೋಮವಾರ ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಕುರಿತು ಚರ್ಚೆ ನಡೆಯಲಿದೆ. ಈ ಮಧ್ಯೆ ಚಿದಂಬರಂ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ಚಿದಂಬರಂ ಅವರ ಈ ಹೇಳಿಕೆಗಳ ಬಗ್ಗೆ ಹಲವು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





