ಆ್ಯಸಿಡ್ ದಾಳಿ ಪ್ರಕರಣಗಳ ವಿಚಾರಣೆ ವಿಳಂಬದ ಬಗ್ಗೆ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಇದೀಗ ಆ್ಯಸಿಡ್ ದಾಳಿಕೋರರಿಗೆ ಕಠಿಣ ಶಿಕ್ಷೆಯ ಬಗ್ಗೆ ಚಿಂತನೆ ನಡೆಸುತ್ತಿದೆ. “ಆ್ಯಸಿಡ್ ದಾಳಿಕೋರರ ಆರೋಪಿಗಳನ್ನು ಮಾರಿ ಅದರ ಹಣವನ್ನು ಸಂತ್ರಸ್ತರಿಗೆ ಪರಿಹಾರ ನೀಡಲು ಯಾಕೆ ಬಳಸಬಾರದು” ಎಂದು ಮಂಗಳವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
2009ರ ಆ್ಯಸಿಡ್ ದಾಳಿ ಸಂತ್ರಸ್ತೆ ಮತ್ತು ಎನ್ಜಿಒ ಬ್ರೇವ್ ಸೋಲ್ಸ್ ಫೌಂಡೇಶನ್ನ ಸಂಸ್ಥಾಪಕಿ ಶಾಹೀನ್ ಮಲಿಕ್ ಸಲ್ಲಿಸಿದ ಪಿಐಎಲ್ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠವು, “ಈ ಘೋರ ಅಪರಾಧಗಳನ್ನು ತಡೆಗಟ್ಟಲು ನಾವು ಅಸಾಧಾರಣವಾದ, ನೋವಿನಿಂದ ಕೂಡಿದ ಶಿಕ್ಷೆಯನ್ನು ನೀಡುವ ಅಗತ್ಯವಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಶೇ.97.5 ಪ್ರಕರಣಗಳ ವಿಚಾರಣೆ ಬಾಕಿ: ಆ್ಯಸಿಡ್ ದಾಳಿ ಸಂತ್ರಸ್ತರಿಗೆ ಬೇಕಾಗಿರುವುದು ಸಹಾನುಭೂತಿಯಲ್ಲ ನ್ಯಾಯ
ಸಂತ್ರಸ್ತರಿಗೆ ಕನಿಷ್ಠ 3 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಈ ಹಿಂದೆಯೇ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಚಿಕಿತ್ಸೆ ಮತ್ತು ಪುನರ್ವಸತಿಗೆ ಈ ಪರಿಹಾರ ಮೊತ್ತ ಸಾಕಾಗುವುದಿಲ್ಲ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಸದ್ಯ ಇರುವ ಪರಿಹಾರವನ್ನಾದರೂ ಸರಿಯಾದ ರೀತಿಯಲ್ಲಿ ಸಂತ್ರಸ್ತರಿಗೆ ದೊರಕುವಂತೆ ನೋಡಿಕೊಳ್ಳಬೇಕು ಎಂದು ಒತ್ತಿ ಹೇಳಿದೆ.
ಇನ್ನು ಎಲ್ಲಾ ಆರೋಪಿಗಳು ಕೆಳ ನ್ಯಾಯಾಲಯದಲ್ಲಿ ಖುಲಾಸೆಗೊಂಡಿರುವ ಬಗ್ಗೆ ಸಂತ್ರಸ್ತೆ ಸುಪ್ರೀಂ ಕೋರ್ಟ್ಗೆ ಹೇಳಿದ್ದು, ಆ್ಯಸಿಡ್ ದಾಳಿ ಸಂತ್ರಸ್ತೆಯು ಹೈಕೋರ್ಟ್ನಲ್ಲಿ ತನ್ನ ಪ್ರಕರಣವನ್ನು ಹೋರಾಡಲು ಅತ್ಯುತ್ತಮ ವಕೀಲರನ್ನು ಪಡೆಯುವಂತೆ ಸುಪ್ರೀಂ ಕೋರ್ಟ್ ನೋಡಿಕೊಳ್ಳುತ್ತದೆ ಎಂದು ಸಿಜೆಐ ಭರವಸೆ ನೀಡಿದರು.
2009ರಲ್ಲಿ 26 ವರ್ಷ ವಯಸ್ಸಿನ ಶಾಹೀನ್ ಮಲಿಕ್ ಅವರ ಮೇಲೆ ಹರಿಯಾಣದ ಪಾಣಿಪತ್ನಲ್ಲಿರುವ ಅವರ ಕಚೇರಿಯ ಹೊರಗೆ ಆ್ಯಸಿಡ್ ದಾಳಿಯಾಗಿದ್ದು, ಈ ಘಟನೆ ನಡೆದು ಈಗಾಗಲೇ 16 ವರ್ಷ ಕಳೆದಿದೆ. ಆದರೆ, ಇಂದಿಗೂ ವಿಚಾರಣೆ ಬಾಕಿ ಉಳಿದಿದೆ.
ಇದನ್ನು ಓದಿದ್ದೀರಾ? ಅತ್ಯಾಚಾರಕ್ಕೆ ಒಳಗಾದ ಮಹಿಳೆಯರನ್ನೇ ದೂಷಿಸುವ ಸಮಾಜ, ‘ವಿಕ್ಟಿಮ್ ಬ್ಲೇಮಿಂಗ್’ ನಿಲ್ಲುವುದು ಯಾವಾಗ?
ಇತ್ತೀಚೆಗೆ ಶಾಹೀನ್ ಮೇಲೆ ನಡೆದ ಆ್ಯಸಿಡ್ ದಾಳಿ ಪ್ರಕರಣದ ವಿಚಾರಣೆ ಬಾಕಿ ಪ್ರಶ್ನಿಸಿ ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಿದ್ದ ಸಿಜೆಐ ನೇತೃತ್ವದ ಪೀಠವು, “ವಿಚಾರಣೆಯಲ್ಲಿ ವಿಳಂಬವು ನ್ಯಾಯಾಂಗ ವ್ಯವಸ್ಥೆಯ ಅಪಹಾಸ್ಯ. ರಾಷ್ಟ್ರವೇ ತಲೆತಗ್ಗಿಸುವ ವಿಚಾರ. ಇದು ನಾಚಿಕೆಗೇಡಿನದು” ಎಂದು ಹೇಳಿತ್ತು. ಹಾಗೆಯೇ ದೇಶದಲ್ಲಿ ಬಾಕಿ ಇರುವ ಇಂತಹ ಪ್ರಕರಣಗಳ ಕುರಿತ ವಿವರಗಳನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಹೈಕೋರ್ಟ್ಗಳಿಗೆ ಸೂಚಿಸಿತ್ತು. ಕೇಂದ್ರ ಸರ್ಕಾರ ಮತ್ತು ಅಂಗವಿಕಲರ ಸಬಲೀಕರಣ ಇಲಾಖೆಗೆ ನೋಟಿಸ್ ಜಾರಿ ಮಾಡಿತ್ತು.
ಅಷ್ಟು ಮಾತ್ರವಲ್ಲದೆ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದತ್ತಾಂಶದ ಪ್ರಕಾರ ದೇಶದಲ್ಲಿ ಆ್ಯಸಿಡ್ ದಾಳಿ ಪ್ರಕರಣಗಳಲ್ಲಿ ಶೇ.97.5ರಷ್ಟು ಪ್ರಕರಣಗಳ ವಿಚಾರಣೆ ಬಾಕಿ ಉಳಿದಿವೆ. ಬರೀ ಶೇ.2.5ರಷ್ಟು ಪ್ರಕರಣಗಳಲ್ಲಿ ವಿಚಾರಣೆ ನಡೆದಿದೆ. ವಿಚಾರಣೆಗೆ ಒಳಗಾದ ಪ್ರಕರಣಗಳಲ್ಲಿಯೂ ಅಪರಾಧಿಗಳಿಗೆ ಶಿಕ್ಷೆಯಾಗಿರುವ ಪ್ರಮಾಣ ಅತಿ ಕಡಿಮೆ.





