ಕೊಲೆ ಪ್ರಕರಣವೊಂದರಲ್ಲಿ ಇಬ್ಬರು ಅಪರಾಧಿಗಳಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ ಬೆನ್ನಲ್ಲೇ, ಆಕ್ರೋಶಗೊಂಡ ಅಪರಾಧಿಗಳು ನ್ಯಾಯಾಲಯದ ಕೊಠಡಿಯಲ್ಲೇ ನ್ಯಾಯಾಧೀಶರಿಗೆ ಜೀವಬೆದರಿಕೆ ಹಾಕಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ.
”ನೀವು ಎಲ್ಲಿ ವಾಸವಿದ್ದೀರಿ ಎಂದು ನಮಗೆ ತಿಳಿದಿದೆ, ನಿಮ್ಮನ್ನು ಕೊಲ್ಲುತ್ತೇವೆ” ಎಂದು ಅವರು ನ್ಯಾಯಾಧೀಶರ ಎದುರೇ ಅಬ್ಬರಿಸಿದ್ದಾರೆ. ಗುರುವಾರ ಮಧ್ಯಾಹ್ನ ತೀರ್ಪು ಪ್ರಕಟವಾದ ನಂತರ ಅಪರಾಧಿಗಳಾದ ಜೈದೀಪ್ ಸಿಂಗ್ (35) ಮತ್ತು ಪಿಂಟು ಚೌಹಾಣ್ (30) ಈ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಮೇ 2014ರಲ್ಲಿ ತಾವು ಕೊಲೆ ಮಾಡಿದ್ದ ವ್ಯಕ್ತಿಯ 28 ವರ್ಷದ ಮಗಳನ್ನೂ ಬಿಡುವುದಿಲ್ಲ ಎಂದು ಅವರು ಬೆದರಿಸಿದ್ದಾರೆ. ಆಕೆಯ ದೂರಿನ ಆಧಾರದ ಮೇಲೆಯೇ ಈ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಅಪರಾಧಿಗಳ ಈ ವರ್ತನೆಯಿಂದ ನ್ಯಾಯಾಲಯದ ಆವರಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತ ನ್ಯಾಯಾಲಯದ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಬಿಗಿ ಭದ್ರತೆಯೊಂದಿಗೆ ನ್ಯಾಯಾಧೀಶರನ್ನು ಅವರ ನಿವಾಸಕ್ಕೆ ಸುರಕ್ಷಿತವಾಗಿ ಕರೆದೊಯ್ದರು. ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಧೀಶರ ನಿವಾಸದ ಬಳಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದನ್ನು ಓದಿದ್ದೀರಾ? ಎಪ್ಸ್ಟೀನ್ ಪ್ರಕರಣ: ಟ್ರಂಪ್ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದ ಕಡತಗಳೇ ನಾಪತ್ತೆ
ವರದಕ್ಷಿಣೆ ಸಂಬಂಧಿತ ವಿವಾದದ ಹಿನ್ನೆಲೆಯಲ್ಲಿ ಬಿಜ್ನೋರ್ನ ಮಟೂರಾ ದುರ್ಗಾ ಗ್ರಾಮದ ನಿವಾಸಿ ಪುಖರಾಜ್ ಸಿಂಗ್ (55) ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈದೀಪ್ ಸಿಂಗ್ ಮತ್ತು ಪಿಂಟು ಚೌಹಾಣ್ ದೋಷಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು.
ಪುಖರಾಜ್ ಅವರ ಪುತ್ರಿಯನ್ನು ಜೈದೀಪ್ನ ಸಹೋದರ ಪ್ರದೀಪ್ ಸಿಂಗ್ಗೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದ ಸ್ವಲ್ಪ ದಿನಗಳಲ್ಲೇ ಆಕೆ ಕಿರುಕುಳ ಎದುರಿಸಬೇಕಾಯಿತು ಎಂದು ಮೂಲ ದೂರಿನಲ್ಲಿ ತಿಳಿಸಲಾಗಿತ್ತು. ಗಂಡನ ಮನೆಯವರು ಕಾರು ಮತ್ತು ನಗದು ರೂಪದಲ್ಲಿ ಹೆಚ್ಚುವರಿ ವರದಕ್ಷಿಣೆಗಾಗಿ ಪೀಡಿಸಲು ಶುರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆಕೆ ಧಾಂಪುರ್ ಪೊಲೀಸ್ ಠಾಣೆಯಲ್ಲಿ ತನ್ನ ಗಂಡನ ಮನೆಯವರ ವಿರುದ್ಧ ದೂರು ದಾಖಲಿಸಿದ್ದಳು. ಪುಖರಾಜ್ ಅವರು ತಮ್ಮ ಮಗಳ ಪರವಾಗಿ ಈ ಪ್ರಕರಣದ ಬೆನ್ನತ್ತಿದ್ದರು.
”ಸಂತ್ರಸ್ತೆಯ ಮಗಳು ಮೇ 19, 2024 ರಂದು ದೂರು ದಾಖಲಿಸಿದ್ದು, ಈ ಇಬ್ಬರು ವ್ಯಕ್ತಿಗಳು ತನ್ನ ತಂದೆಯನ್ನು ರಸ್ತೆಗೆ ಎಳೆತಂದು ಅವರ ಮೇಲೆ ಕಾರು ಹತ್ತಿಸಿ ಕೊಂದಿದ್ದಾರೆ ಎಂದು ಆರೋಪಿಸಿದ್ದರು” ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಅಜಿತ್ ಪವಾರ್ ಮಾಹಿತಿ ನೀಡಿದ್ದಾರೆ.





